ADVERTISEMENT

ಮಹಾಲಿಂಗಪುರ: ಪತ್ನಿ, ಪ್ರಿಯಕರ ಬಂಧನ

ಅನೈತಿಕ ಸಂಬಂಧ ಹಿನ್ನೆಲೆ ಪತಿಯ ಕೊಲೆ ಮಾಡಿಸಿದ್ದ ಮಹಿಳೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 14:00 IST
Last Updated 19 ಮೇ 2020, 14:00 IST
ಕಾವ್ಯಶ್ರೀ
ಕಾವ್ಯಶ್ರೀ   

ಬಾಗಲಕೋಟೆ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪ್ರಿಯಕರನ ಜೊತೆ ಸೇರಿ ಪತ್ನಿಯೇ, ಪತಿಯ ಕೊಲೆ ಮಾಡಿಸಿದ ಪ್ರಕರಣ ಬೇಧಿಸಿರುವಮಹಾಲಿಂಗಪುರ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಮಹಾಲಿಂಗಪುರ ಪಟ್ಟಣದ ವಿದ್ಯಾನಗರದ 2ನೇ ಕ್ರಾಸ್ ನಿವಾಸಿ ನಾನಪ್ಪ ವೀರಭದ್ರಪ್ಪ ಬಟ್ಟಲ್ ಅವರ ಪುತ್ರ ಪ್ರವೀಣ (33) ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವೀಣನ ಪತ್ನಿ ಕಾವ್ಯಶ್ರೀ (21) ಹಾಗೂ ಆಕೆಯ ಪ್ರಿಯಕರ ಮಲ್ಲಪ್ಪ ಸಿದ್ದಪ್ಪ ನಾಶಿ (24) ಅವರನ್ನು ಬಂಧಿಸಲಾಗಿದೆ.

ಘಟನೆಯ ವಿವರ: ಕಾವ್ಯಶ್ರೀ ತನ್ನ ಗಂಡನ ಸ್ನೇಹಿತ ಮಲ್ಲಪ್ಪನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಅದಕ್ಕೆ ಅಡ್ಡಿಯಾಗಿದ್ದ ಪತಿ ಪ್ರವೀಣನನ್ನು ಕೊಲ್ಲಲು ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸಿದ್ದರು ಎನ್ನಲಾಗಿದೆ. ಮೇ 9ರಂದು ಮನೆಯಿಂದ ತನ್ನ ಹೊಂಡಾ ಟ್ರಿಗ್ಗರ್ ಬೈಕ್‌ನಲ್ಲಿ ಹೊರಟಿದ್ದ ಪ್ರವೀಣ ಮಧ್ಯಾಹ್ನ 3 ಗಂಟೆಯ ವೇಳೆ ಮಲ್ಲಪ್ಪ ನಾಶಿಯ ಕಂಪ್ಯೂಟರ್ ಸೆಂಟರ್‌ನಲ್ಲಿ ಬಂದು ಮಲಗಿದ್ದನು. ಈ ಅವಕಾಶ ಬಳಸಿಕೊಂಡ ಮಲ್ಲಪ್ಪ, ಬೆಡ್‌ಶೀಟ್‌ನಿಂದ ಪ್ರವೀಣನ ಉಸಿರುಗಟ್ಟಿಸಿ ಕೊಲೆ ಮಾಡಿದ್ದನು. ಅದೇ ದಿನ ರಾತ್ರಿ ಶವವನ್ನು ಚೀಲದಲ್ಲಿ ತುಂಬಿ ತನ್ನ ಬೈಕ್‌ನಲ್ಲಿ ಒಯ್ದು ಬಾವಿಯಲ್ಲಿ ಒಗೆದಿದ್ದನು.

ADVERTISEMENT

ಎರಡು ದಿನಗಳಾದರೂ ಮಗ ಮನೆಗೆ ಬಾರದ ಕಾರಣ ಪ್ರವೀಣನ ತಂದೆ ನಾನಪ್ಪ ಮೇ 11ರಂದು ಮಹಾಲಿಂಗಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.‍ ಪೊಲೀಸರು ಹುಡುಕಾಟ ನಡೆಸಿದಾಗ ಮಹಾಲಿಂಗಪುರ–ನಂದಗಾವ ರಸ್ತೆಯಲ್ಲಿ ಶ್ರೀಮಂತ ಪೊಲೀಸರ ಎಂಬುವವರ ಜಮೀನಿನಲ್ಲಿನ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ನಾನಪ್ಪ ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿ ಅವರಿಂದ ಎರಡು ಮೋಟಾರ್ ಬೈಕ್, ಮೂರು ಮೊಬೈಲ್‌ಫೋನ್ ಹಾಗೂ ಪ್ರವೀಣನ ಕೊರಳಲ್ಲಿದ್ದ 22.5 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಮುಧೋಳ ಸಿಪಿಐ ಎಚ್.ಆರ್.ಪಾಟೀಲ, ಮಹಾಲಿಂಗಪುರ ಪಿಎಸ್‌ಐ ಜಿ.ಎಸ್.ಉಪ್ಪಾರ ನೇತೃತ್ವದ ಪೊಲೀಸರ ತಂಡ ತನಿಖೆ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.