ADVERTISEMENT

ಮುಂದಿನ ಚುನಾವಣೆಯಲ್ಲಿ ಗೆದ್ದು ತೋರಿಸಲಿ: ಜೆ.ಟಿ. ಪಾಟೀಲ ಸವಾಲು

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 2:45 IST
Last Updated 2 ಸೆಪ್ಟೆಂಬರ್ 2025, 2:45 IST
ಜೆ.ಟಿ. ಪಾಟೀಲ
ಜೆ.ಟಿ. ಪಾಟೀಲ   

ಬಾಗಲಕೋಟೆ: ‘ಬೀಳಗಿಯ ಸಿದ್ದೇಶ್ವರ ಗುಡಿಯಲ್ಲಿ ಇಬ್ಬರೂ ಕುಟುಂಬ ಸದಸ್ಯರು ಯಾರು ಭಾಗವಹಿಸುವುದಿಲ್ಲ. ಯಾವುದೇ ಆಮಿಷವೊಡ್ಡುವುದಿಲ್ಲ ಎಂದು ಪ್ರಮಾಣ ಮಾಡಿ 2028ರ ವಿಧಾನಸಭಾ ಚುನಾವಣೆಯಲ್ಲಿ ನನ್ನ ವಿರುದ್ಧ ಮಾಜಿ ಸಚಿವ ಮುರುಗೇಶ ನಿರಾಣಿ ಸ್ಪರ್ಧಿಸಲಿ. ಆಗ ಜನರೇ ಉತ್ತರ ನೀಡುತ್ತಾರೆ’ ಎಂದು ಶಾಸಕ ಜೆ.ಟಿ. ಪಾಟೀಲ ಸವಾಲು ಹಾಕಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನರು ಯಾರು ಭ್ರಷ್ಟರು ಎನ್ನುವುದು ನೋಡಿಯೇ ನನ್ನನ್ನು ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದುಕೊಂಡಿದ್ದೆ. ಆದರೆ, ಅವರು ಸವಾಲು ಹಾಕುತ್ತಾರೆ ಎಂದರೆ ಸ್ಪರ್ಧಿಸಲು ಸಿದ್ಧನಿದ್ದೇನೆ’ ಎಂದರು.

‘ರಾಜೀನಾಮೆ ನೀಡಿ ಸ್ಪರ್ಧಿಸಿದರೆ ಚುನಾವಣೆಗೆ ಹಣ ನೀಡುವುದಾಗಿ ಹೇಳಿದ್ದಾರೆ. ಬೆಂಬಲಿಗರು ಅವರ ಪ್ರಾಮಾಣಿಕವಾಗಿ ದುಡಿದ ಹಣವಿದ್ದರೆ ಇಸಿದುಕೊಳ್ಳಿ. ಇಲ್ಲದಿದ್ದರೆ, ನಾವೇ ಪಟ್ಟಿ ಹಾಕಿ ಚುನಾವಣೆ ಮಾಡುತ್ತೇವೆ ಎಂದಿದ್ದಾರೆ. ನಿರಾಣಿ ಅವರು ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಭ್ರಷ್ಟಾಚಾರ ಆರೋಪ ಸಾಬೀತುಮಾಡಲಿ. ಗುತ್ತಿಗೆದಾರರಿಂದ ಹಣ ಪಡೆಯುತ್ತೇನೆ ಆರೋಪ ಮಾಡುವ ಮುನ್ನ ನಿಮ್ಮ ಸಹೋದರ ಹಣಮಂತ ನಿರಾಣಿ ಅವರನ್ನು ಒಮ್ಮೆ ಕೇಳಬೇಕಿತ್ತು’ ಎಂದು ತಿರುಗೇಟು ನೀಡಿದರು.

ADVERTISEMENT

‘ಚುನಾವಣೆಗೂ ಮುನ್ನ ಎಷ್ಟು ಆಸ್ತಿ ಇತ್ತು. ಈಗ ಅವರ ಕುಟುಂಬದ ಆಸ್ತಿ ಎಷ್ಟಿದೆ ಎಂಬುದನ್ನು ಬಹಿರಂಗಪಡಿಸಲಿ. ಇಬ್ಬರ ಆಸ್ತಿ ಎಷ್ಟು ಹೆಚ್ಚಿದೆ ಎಂಬುದರ ಕುರಿತು ತನಿಖೆಗೆ ಏಜೆನ್ಸಿಯೊಂದಕ್ಕೆ ನೀಡೋಣ. ಆರೋಪ ಮಾಡುವ ಮೊದಲು ತಾವೆಷ್ಟು ಪ್ರಾಮಾಣಿಕರು ಎಂಬುದನ್ನು ಹೇಳಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಲ್. ಕೆಂಪಲಿಂಗನ್ನವರ ಮಾತನಾಡಿ, ಶಾಸಕರ ವಿರುದ್ಧ ನಿರಾಣಿ ಅವರು ಸುಳ್ಳು ಆರೋಪ ಮಾಡಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನಮಂತ ಕಾತರಕಿ, ಕಾಂಗ್ರೆಸ್ ಮುಖಂಡ ಮಹಾದೇವ ಹಾದಿಮನಿ ಮಾತನಾಡಿದರು. ಅನೀಲ್ ದಡ್ಡಿ, ಅನ್ವಿರಯ್ಯ ಪ್ಯಾಟಿಮಠ, ಶಿವಾನಂದ ಮಾದರ ಇದ್ದರು.

ಕಾರ್ಖಾನೆ ಮುಂದೆ ತೂಕದ ಯಂತ್ರ ಅಳವಡಿಸಲಿ

ಬಾಗಲಕೋಟೆ: ‘ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ಮೋಸ ಮಾಡುತ್ತವೆ ಎಂಬ ಆರೋಪ ರೈತರದ್ದಾಗಿದೆ. ಪ್ರಾಮಾಣಿಕರಾಗಿದ್ದರೆ ಕಾರ್ಖಾನೆಗಳ ಮುಂದೆ ಮಾನವ ರಹಿತ ತೂಕದ ಯಂತ್ರ ಅಳವಡಿಸಲಿ. ಆಗ ನಾನೇ ಅವರನ್ನು ಗೌರವಿಸುತ್ತೇನೆ. ರೈತರಿಗೆ ಆಗುತ್ತಿರುವ ಮೋಸ ತಪ್ಪಿಸಲು ಯಂತ್ರ ಅಳವಡಿಸುವ ವಿಷಯವನ್ನು ಸಚಿವರಾದ ಆರ್‌.ಬಿ. ತಿಮ್ಮಾಪುರ ಶಿವಾನಂದ ಪಾಟೀಲ ಅವರ ಗಮನಕ್ಕೂ ತರುತ್ತೇನೆ’ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು. ‘ನಂದಿ ಸಕ್ಕರೆ ಕಾರ್ಖಾನೆಯ ದುರಸ್ತಿಯನ್ನು ₹20 ಕೋಟಿ ವೆಚ್ಚದಲ್ಲಿ ಮಾಡಿ ತೋರಿಸಲಿ. ಸಹೋದರ ಎಸ್‌.ಟಿ. ಪಾಟೀಲ ಅಲ್ಲಿ ಕೇವಲ ಸಲಹೆಗಾರರಾಗಿದ್ದಾರೆ. ಸುಳ್ಳು ಆರೋಪ ಮಾಡುವದನ್ನು ನಿಲ್ಲಿಸಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.