ADVERTISEMENT

ಹವಳಕೋಡದಿಂದ ‘ನೀಟ್‘ ಸಾಧನೆಯತ್ತ!

ದಲಿತ ಮುಖಂಡರಿಂದ ಡಾ.ಮಂಜುನಾಥಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 15:02 IST
Last Updated 24 ಜುಲೈ 2019, 15:02 IST
ಬಾಗಲಕೋಟೆಯಲ್ಲಿ ಮಂಗಳವಾರ ದಲಿತ ಸಂಘಟನೆಗಳ ಮುಖಂಡರು ಡಾ.ಮಂಜುನಾಥ ಅವರನ್ನು ಸನ್ಮಾನಿಸಿ ಗೌರವಿಸಿದರು
ಬಾಗಲಕೋಟೆಯಲ್ಲಿ ಮಂಗಳವಾರ ದಲಿತ ಸಂಘಟನೆಗಳ ಮುಖಂಡರು ಡಾ.ಮಂಜುನಾಥ ಅವರನ್ನು ಸನ್ಮಾನಿಸಿ ಗೌರವಿಸಿದರು   

ಬಾಗಲಕೋಟೆ: ರಾಷ್ಟ್ರೀಯ ವೈದ್ಯಕೀಯ ಅರ್ಹತಾ (ನೀಟ್–ಸೂಪರ್‌ ಸ್ಪೆಷಾಲಿಟಿ) ಪರೀಕ್ಷೆಯ ಎಂಡೊಕ್ರೈನೊಲಾಜಿ (ಅಂತಃಸಾವಶಾಸ್ತ್ರ) ವಿಷಯದಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್ ಪಡೆದಿರುವ ಮಂಜುನಾಥ ಹವಳಪ್ಪ ದೊಡ್ಡಮನಿ ಮಂಗಳವಾರ ನಗರಕ್ಕೆ ಬಂದಿದ್ದರು.

ಮಂಜುನಾಥ ಮೂಲತಃ ಬಾದಾಮಿ ತಾಲ್ಲೂಕಿನ ಹವಳಕೋಡದವರು. ಅಪ್ಪ ಹವಳಪ್ಪ ದೊಡ್ಡಮನಿ, ಅಮ್ಮ ರೇಣುಕಾ. ಹವಳಪ್ಪ ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಸಹಾಯಕ ಕೃಷಿ ಅಧಿಕಾರಿ ಆಗಿರುವ ಕಾರಣ ಕುಟುಂಬ ಅಲ್ಲಿನ ನವಲಹಳ್ಳಿಯಲ್ಲಿ ನೆಲೆನಿಂತಿದೆ.

ನವಲಹಳ್ಳಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿದ್ದ ಮಂಜುನಾಥ, ಹೊಸಪೇಟೆಯ ಸ್ಮಯೋರ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ (ಬಿಎಂಎಸ್) ಎಂಬಿಬಿಎಸ್ ಓದಿ, ಚಂಡಿಗಡದಲ್ಲಿ ವೈದ್ಯಕೀಯ ವಿಷಯದಲ್ಲಿ ಎಂಡಿ ಕೋರ್ಸ್ ಮುಗಿಸಿದ್ದಾರೆ.

ADVERTISEMENT

ಸನ್ಮಾನ ಸ್ವೀಕಾರ: ಹವಳಕೋಡದಿಂದ ಕುಷ್ಟಗಿಗೆ ಹೊರಟಿದ್ದ ಡಾ.ಮಂಜುನಾಥ ಹಾಗೂ ಅವರ ಪೋಷಕರಿಗೆ ಹಳೆ ಪ್ರವಾಸಿ ಮಂದಿರಲ್ಲಿ ಮಾದಿಗ ಸಮಾಜ ಹಾಗೂ ದಲಿತ ಸಂಘಟನೆಗಳ ಮುಖಂಡರು ಸನ್ಮಾನಿಸಿ ಗೌರವಿಸಿದರು. ಸಮುದಾಯದ ಪ್ರಮುಖರಾದ ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ, ಅಡಿವೆಪ್ಪ ಚಂದಾವರಿ, ಶಿವಾನಂದ ಬಿಸನಾಳ, ಯಮನಪ್ಪ ಬಿಸನಾಳ, ಪ್ರಕಾಶ ಹವಳಕೋಡ ಸನ್ಮಾನದ ನೇತೃತ್ವ ವಹಿಸಿದ್ದರು.

‘ಶಿಕ್ಷಣ ನನಗೆ ದುಬಾರಿಯಾಗಲಿಲ್ಲ, ಶಿಷ್ಯವೇತನ, ಕಡಿಮೆ ಶುಲ್ಕ ನನ್ನ ಸಾಧನೆಗೆ ಶಕ್ತಿಯಾಯಿತು. ಒಳ್ಳೆಯಸ್ನೇಹಿತರ ಸಹವಾಸ, ಪಾಲಕರಿಂದ ಸಂಸ್ಕಾರ, ಶಿಕ್ಷಕರ ಮಾರ್ಗದರ್ಶನದ ಕಾರಣ ಗುರಿ ಮುಟ್ಟಿದ್ದೇನೆ. ಯಾವುದೂ ಕಠಿಣವಲ್ಲ. ಗ್ರಾಮೀಣರು ಪ್ರಯತ್ನದಿಂದ ಸಾಧನೆ ಮಾಡಬಹುದು‘ ಎಂದು ಹೇಳಿದ ಮಂಜುನಾಥ, ಓದು ಮುಗಿದ ಮೇಲೆ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಯೋಚನೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.