ಹುನಗುಂದ: ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ತೆರಳುವ ಭಕ್ತರಿಗೆ ಪಟ್ಟಣದ ವಿವಿಧೆಡೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಗೋಕಾಕ, ರಾಯಬಾಗ, ಮಹಾಲಿಂಗಪುರ, ರಬಕವಿ ಬನ್ನಹಟ್ಟಿ, ಜಮಖಂಡಿ, ಮುಧೋಳ, ಬಾಗಲಕೋಟೆ, ಬೀಳಗಿ ಮೊದಲಾದೆಡೆಯಿಂದ ಪಾದಯಾತ್ರೆಯಲ್ಲಿ ಬಂದ ಭಕ್ತರಿಗೆ ಪಟ್ಟಣದ ಬಸವ ಮಂಟಪದಲ್ಲಿ ಆಹಾರ ವಿತರಿಸಲಾಯಿತು.
ಭಕ್ತರು ಬೆಳಿಗ್ಗೆ ಚಹಾ, ಚುರುಮುರಿ ಸೂಸಲಾ, ಮಧ್ಯಾಹ್ನ ರೊಟ್ಟಿ, ಬದನೆಕಾಯಿ ಪಲ್ಲೆ, ಮೊಸರು, ಉದುರ ಸಜ್ಜಕ, ಅನ್ನ, ಸಾಂಬಾರು ಸವಿದರು. ಸಾರ್ವಜನಿಕ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿದರು. ವಸತಿ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಪಟ್ಟಣದ ಲಕ್ಷ್ಮೀನಗರ, ರಾಯಚೂರು–ಬೆಳಗಾವಿ ರಾಜ್ಯ ಹೆದ್ದಾರಿಯ ಅಲ್ಲಲ್ಲಿ ಅನ್ನಸಂತರ್ಪಣೆ ಜೊತೆಗೆ ದ್ರಾಕ್ಷಿ, ಕಲ್ಲಂಗಡಿ ಹಣ್ಣು, ಮಜ್ಜಿಗೆ ಸೇರಿದಂತೆ ಇತರೆ ತಿನಿಸುಗಳನ್ನು ವಿತರಿಸುವ ಮೂಲಕ ಸಾರ್ವಜನಿಕರು ಭಕ್ತಿ ಸೇವೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.