ಬಾಗಲಕೋಟೆ: ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದಿಂದ ವಿವಿಧ ಬೇಡಿಕೆಗಳಿಗೆ ಈಡೇರಿಕೆಗೆ ಆಗ್ರಹಿಸಿ ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಸಿಇಒ ಅವರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ಸಂಘದ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ ದೇಶಪಾಂಡೆ ಮಾತನಾಡಿ, ಕೋವಿಡ್ -19 (ಕೋರೋನಾ) ಲಾಕ್ಡೌನ್ ಅವಧಿಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ರಾಜ್ಯ ವಸತಿ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿರುವ ನೌಕರರು ಬಾಕಿ ವೇತನ, ಪಿ.ಎಫ್. ಇ.ಎಸ್.ಐ ಸರಿಯಾಗಿ ಕೊಟ್ಟಿಲ್ಲ.2020ರ ಮಾರ್ಚ್ 15ರಿಂದ ಇಲ್ಲಿಯವರೆಗೆ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಹೊರಗುತ್ತಿಗೆ ನೌಕರರ ವೇತನ ಇನ್ನೂ ಆಗಿಲ್ಲ ಎಂದರು.
ಸಂಘಟನೆರಾಜ್ಯ ಘಟಕದ ಮುಖಂಡ ಹುಲಗಪ್ಪ ಚಲವಾದಿ ಮಾತನಾಡಿ, ನೌಕರರು ತಮ್ಮ ನಿತ್ಯದ ಖರ್ಚು ವೆಚ್ಚ ಭರಿಸಲು ಕಷ್ಟದ ಸಮಯ ಕಳೆಯುತ್ತಿದ್ದಾರೆ. ಕೂಡಲೇ ಏಜೆನ್ಸಿಯವರು ನೌಕರರ ಬಾಕಿ ವೇತನ, ಇ.ಎಸ್.ಐ, ಪಿ.ಎಫ್ ನೀಡಬೇಕು. ಎಲ್ಲಾ ನೌಕರರಿಗೆ ಆಹಾರದ ಕಿಟ್ ವಿತರಣೆ ಮಾಡಬೇಕು. 4-5 ತಿಂಗಳ ಬಾಕಿ ವೇತನ ಕೂಡಲೇ ಪಾವತಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ, ಬಿ.ಸಿ.ಎಂ ಇಲಾಖೆಗಳಲ್ಲಿ ನೇರ ನೇಮಕಾತಿಯಾಗಿ8-10 ವರ್ಷ ಸೇವೆ ಸಲ್ಲಿಸಿ ಕೆಲಸ ಕಳೆದುಕೊಂಡವರಿಗೆ ಹೊಸದಾಗಿ ಪ್ರಾರಂಭಿಸುವ ವಸತಿ ನಿಲಯಗಳಲ್ಲಿ ನೇಮಕ ಮಾಡಿಕೊಳ್ಳಬೇಕು. ಅಗತ್ಯ ವಸ್ತುಗಳ ಬೆಲೆ ದುಬಾರಿ ಆಗಿರುವುರಿಂದ ಹಾಸ್ಟೆಲ್ ಹೊರ ಗುತ್ತಿಗೆ ನೌಕರರ ಸಂಬಳ ₹25 ಸಾವಿರಕ್ಕೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸಮಿತಿ ಸದಸ್ಯರಾದ ಲಕ್ಷ್ಮಣ ಮಸಳಿ, ಅಡಿವೆಪ್ಪ ಕೊಣ್ಣೂರ, ಆನಂದ ಹಾದಿಮನಿ, ಕನಕಪ್ಪ ಮಾದರ, ನಾಗಪ್ಪ ಬೂದಿಹಾಳ, ಮಂಜುಳಾ ಹಿರೇಕುಂಬಿ, ಮಹಾನಂದಾ ಅರಹುಣಸಿ, ಸವಿತಾ ಮರಶೆಟ್ಟಿ, ರೇಣುಕಾ ಆಂದೆಲಿ, ಶಶಿಕಲಾ ಗುಗ್ಗರಿ, ಯಲ್ಲವ್ವ ಮಿಣಸಗಿ, ಅನಿತಾ ದೊಡಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.