ಬಾಗಲಕೋಟೆ: ಮಳೆಯಿಂದಾಗಿ ನೆನೆದಿದ್ದ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ತೇರದಾಳ ತಾಲ್ಲೂಕಿನ ತಮದಡ್ಡಿಯಲ್ಲಿ 11 ತಿಂಗಳ ಹೆಣ್ಣುಮಗು ಅಚಲಾ ಸಾವಿಗೀಡಾಗಿದೆ. ಅಚಲಾ ಗ್ರಾಮದಭುಜಬಲ ತಿಮ್ಮಣ್ಣವರ ಹಾಗೂ ಅರ್ಚನಾ ದಂಪತಿ ಪುತ್ರಿ.
ಮಣ್ಣಿನ ಮನೆಯ ತಳಪಾಯ ಇತ್ತೀಚೆಗೆ ಕೃಷ್ಣಾ ನದಿ ಪ್ರವಾಹದಲ್ಲಿ ಬಾಧಿತವಾಗಿತ್ತು. ನಿರಂತರ ಮಳೆಯಿಂದ ಮನೆಯ ಮೇಲ್ಛಾವಣಿ ನೆನೆದಿತ್ತು. ಬುಧವಾರ ಬೆಳಗಿನ ಜಾವ ಮನೆಯಲ್ಲಿ ಮಲಗಿದ್ದವರ ಮೇಲೆ ಕುಸಿದು ಬಿದ್ದಿದೆ. ಈ ವೇಳೆ ಮನೆಯಿಂದ ಹೊರಗೆ ಇದ್ದ ಭುಜಬಲ ತಿಮ್ಮಣ್ಣವರ ಅಪಾಯದಿಂದ ಪಾರಾಗಿದ್ದಾರೆ. ಮಗುವಿನೊಂದಿಗೆ ಇದ್ದ ತಾಯಿ ಅರ್ಚನಾ ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಕುಸಿದ ಕಾರಣ ಹಾಗೂ ಮಗು ಸಾವಿಗೀಡಾದ ಹಿನ್ನೆಲೆಯಲ್ಲಿ ತಿಮ್ಮಣ್ಣವರ ಕುಟುಂಬಕ್ಕೆ ತಲಾ ₹5 ಲಕ್ಷದಂತೆ ಸರ್ಕಾರದಿಂದ ₹10 ಲಕ್ಷ ಪರಿಹಾರ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.