ಮಹಾಲಿಂಗಪುರ: ಕವಿ ಚಕ್ರವರ್ತಿ ರನ್ನನ ಸ್ಮರಣೆಯಲ್ಲಿ ಮೂರು ದಿನ ನಡೆಯಲಿರುವ ‘ರನ್ನ ವೈಭವ’ ಸಾಂಸ್ಕೃತಿಕ ಉತ್ಸವದ ಮೊದಲ ದಿನದ ಆಚರಣೆಗೆ ಸಮೀಪದ ರನ್ನಬೆಳಗಲಿ ಪಟ್ಟಣ ಸಿಂಗಾರಗೊಂಡಿದೆ.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮುಧೋಳದ ರನ್ನ ಪ್ರತಿಷ್ಠಾನ ವೈಭವದ ಯಶಸ್ಸಿಗೆ ಶ್ರಮಿಸುತ್ತಿವೆ. ವೈಭವಕ್ಕೆ ಶುಭ ಕೋರುವ ಬ್ಯಾನರ್, ಬಂಟಿಂಗ್ಸ್, ಕಟೌಟ್, ತೋರಣಗಳು ರನ್ನಬೆಳಗಲಿ ತುಂಬೆಲ್ಲ ರಾರಾಜಿಸುತ್ತಿವೆ. ರನ್ನ ವೃತ್ತ ಸೇರಿದಂತೆ ಪಟ್ಟಣದಲ್ಲಿ ಹಾದು ಹೋಗಿರುವ ಮುಧೋಳ-ನಿಪ್ಪಾಣಿ ಮಾರ್ಗದ ರಸ್ತೆ ವಿದ್ಯುತ್ ದೀಪದಿಂದ ಝಗಮಗಿಸುತ್ತಿದೆ.
ಫೆ.22ರಂದು ವಿವಿಧ ಕಾರ್ಯಕ್ರಮಗಳು ಸೇರಿದಂತೆ ವೈಭವದ ಉದ್ಘಾಟನೆ ರನ್ನಬೆಳಗಲಿಯಲ್ಲಿ ನಡೆಯಲಿದೆ. ಇನ್ನೊಂದೆಡೆ ಮಧೋಳದಲ್ಲಿಯೂ ವಿಚಾರಗೋಷ್ಠಿಗಳು ನಡೆಯಲಿವೆ. ಇದಕ್ಕಾಗಿ ಸಕಲ ಸಿದ್ಧತೆ ನಡೆದಿದೆ.
ಬಂದಲಕ್ಷ್ಮೀ ದೇವಸ್ಥಾನದ ಬಳಿಯ ಬಯಲು ಜಾಗದಲ್ಲಿ ವೇದಿಕೆ ನಿರ್ಮಾಣ ಕಾರ್ಯ ಸಾಗಿದ್ದು, ಬಹುತೇಕ ಪೂರ್ಣಗೊಂಡಿದೆ. ಇದಕ್ಕೆ ‘ಕವಿಚಕ್ರವರ್ತಿ ರನ್ನ ವೇದಿಕೆ’ ಎಂದು ಹೆಸರಿಡಲಾಗಿದೆ.
2011ರಲ್ಲಿ ಮೊಟ್ಟ ಮೊದಲಿಗೆ ಆರಂಭಗೊಂಡ ರನ್ನವೈಭವ ಐದು ಬಾರಿ ಯಶಸ್ವಿಯಾಗಿ ಜರುಗಿದೆ. ಐದನೇ ಸಾಂಸ್ಕೃತಿಕ ಉತ್ಸವ 2018ರಲ್ಲಿ ನಡೆದಿದ್ದು, ಅಲ್ಲಿಂದ ಉತ್ಸವ ನಡೆದಿರಲಿಲ್ಲ. ಆರು ವರ್ಷಗಳ ನಂತರ ಮತ್ತೆ ರನ್ನ ವೈಭವ ನಡೆಯುತ್ತಿದ್ದು, ನಾಡಿನ ಜನರನ್ನು ತನ್ನತ್ತ ಸೆಳೆಯಲು ಸಜ್ಜಾಗಿದೆ.
ವೈಭವದಲ್ಲಿ ಇಂದು ರನ್ನ ಬೆಳಗಲಿ
ಬೆಳಿಗ್ಗೆ 10 ಗಂಟೆಗೆ ರನ್ನಬೆಳಗಲಿಯ ಬಂದಲಕ್ಷ್ಮೀ ದೇವಸ್ಥಾನದಿಂದ ಕವಿ ಚಕ್ರವರ್ತಿ ರನ್ನ ವೇದಿಕೆವರೆಗೆ ಜಾನಪದ ವಾಹಿನಿ ಕಲಾತಂಡಗಳ ಮೆರವಣಿಗೆ. ಸಂಜೆ 4ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆ 6ಕ್ಕೆ ಉದ್ಘಾಟನೆ: ಸಚಿವ ಎಚ್.ಕೆ.ಪಾಟೀಲ. ಅಧ್ಯಕ್ಷತೆ: ಸಚಿವ ಆರ್.ಬಿ.ತಿಮ್ಮಾಪುರ. ವಿಶೇಷ ಆಹ್ವಾನಿತರು: ಸಚಿವರಾದ ಎಚ್.ಸಿ.ಮಹಾದೇವಪ್ಪ ಪ್ರಿಯಾಂಕ ಖರ್ಗೆ ಶಿವಾನಂದ ಪಾಟೀಲ ಎಸ್.ಎಸ್.ಮಲ್ಲಿಕಾರ್ಜುನ ಲಕ್ಷ್ಮಿ ಹೆಬ್ಬಾಳಕರ ಶಾಸಕರಾದ ಯಶವಂತರಾಯಗೌಡ ಪಾಟೀಲ ಲಕ್ಷ್ಮಣ ಸವದಿ. ರಾತ್ರಿ 9ಕ್ಕೆ ಚಲನಚಿತ್ರ ಸಂಗೀತ ನಿರ್ದೇಶಕ ಗಾಯಕ ಗುರುಕಿರಣ ಹಾಗೂ ತಂಡದವರಿಂದ ಚಿತ್ರ ಸಂಗೀತ ಸುಧೆ ಮುಧೋಳ ಬೆಳಿಗ್ಗೆ 11ಕ್ಕೆ ರನ್ನಭವನದಲ್ಲಿ ‘ರನ್ನ ಕಾವ್ಯದರ್ಶನ’ ವಿಚಾರ ಸಂಕಿರಣ ಉದ್ಘಾಟನೆ: ಶಿವಾನಂದ ಕುಬಸದ. ಅಧ್ಯಕ್ಷತೆ: ಮಾಧವ ಪೆರಾಜೆ. ಆಶಯ ನುಡಿ: ವೀರೇಶ ಬಡಿಗೇರ. ಮಧ್ಯಾಹ್ನ 1.30ಕ್ಕೆ ‘ರನ್ನ ಕಾವ್ಯಧಾರೆ’ ಗೋಷ್ಠಿ: ಮೈತ್ರೇಯಿಣಿ ಗೌಡರ ಮೈನುದ್ದೀನ ರೇವಡಿಗಾರ. ಮಧ್ಯಾಹ್ನ 2.30ಕ್ಕೆ ‘ರನ್ನನ ಧರ್ಮ ಹಾಗೂ ಕಾವ್ಯಧರ್ಮ’ ಗೋಷ್ಠಿ. ಆರ್.ಜಿ.ಸನ್ನಿ ಚಲಪತಿ ಆರ್. ಅಧ್ಯಕ್ಷತೆ: ಎಸ್.ಜಿ.ಸಿದ್ದರಾಮಯ್ಯ. ಆಶಯ ನುಡಿ: ಸಂಗಮೇಶ ಕಲ್ಯಾಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.