ADVERTISEMENT

ಮಾತೆ ಮಹಾದೇವಿ ಬರಹ: ‘ಆತ್ಮಾರ್ಪಣೆ ಅತ್ಯಂತ ಶ್ರೇಷ್ಠ’

ವಚನಾಮೃತ

ಮಾತೆ ಮಹಾದೇವಿ
Published 14 ಮಾರ್ಚ್ 2019, 13:04 IST
Last Updated 14 ಮಾರ್ಚ್ 2019, 13:04 IST
   

ಧಾರ್ಮಿಕ ಜೀವನದಲ್ಲಿ ದಾನ ಎನ್ನುವುದು ಬಹಳ ಮಹತ್ವದ ಕ್ರಿಯೆ. ಮನುಷ್ಯನ ಧಾರ್ಮಿಕ ಸ್ವಭಾವವು ತಿಳಿದು ಬರುವುದೇ ಅವನು ಮಾಡುವ ದಾನದ ಮೂಲಕ. ಅನ್ನದಾನ, ವಸ್ತ್ರದಾನ, ಗೋದಾನ, ಧನದಾನ, ವಿದ್ಯಾದಾನ, ಭೂದಾನ ಇತ್ಯಾದಿ ಹಲವು ಬಗೆಯ ವಸ್ತುಗಳನ್ನು ಧರ್ಮವಂತರು, ಇಲ್ಲದವರಿಗೆ ಅಥವಾ ದೇವರ ಹೆಸರಿನಲ್ಲಿ ದಾನ ಮಾಡುವುದುಂಟು.

ಎರಡು ಬಗೆಯ ದಾನವನ್ನು ಅಕ್ಕಮಹಾದೇವಿಯವರು ಇಲ್ಲಿ ಪ್ರಸ್ತಾಪಿಸಿದ್ದಾರೆ. ಒಂದು, ತನ್ನದಾದ ವಸ್ತುಗಳನ್ನು ಧರ್ಮವಂತರು ಇಲ್ಲದವರಿಗೆ ಅಥವಾ ದೇವರ ಹೆಸರಿನಲ್ಲಿ ದಾನ ಮಾಡುವುದು; ಇನ್ನೊಂದು ತನ್ನನ್ನೇ ಕೊಟ್ಟುಕೊಳ್ಳುವ ಆತ್ಮಾರ್ಪಣೆ.

ತನ್ನದಾದ ವಸ್ತುಗಳನ್ನು ದಾನ ಮಾಡುವವರಿಗೆ ಉತ್ತಮ ಜನ್ಮ ಪ್ರಾಪ್ತವಾಗುವುದು, ಈ ಜನ್ಮದಲ್ಲಿ ಅನ್ನದಾನವನ್ನು ಮಾಡಿದವರಿಗೆ ಮುಂದಿನ ಜನ್ಮದಲ್ಲಿ ವಿಪುಲವಾಗಿ ಆಹಾರವು ದೊರೆಯುತ್ತದೆ. ಈ ಜನ್ಮದಲ್ಲಿ ಧನ ಸಹಾಯ ಮಾಡಿದರೆ ನಂತರದ ಜನ್ಮದಲ್ಲಿ ಅಪಾರ ಸಂಪತ್ತು ಲಭ್ಯವಾಗುವುದು. ದಾನವೆಂದರೆ ಬಿತ್ತುವಿಕೆ ಇದ್ದಂತೆ, ನಂತರ ವಿಪುಲವಾಗಿ ಬೆಳೆ ಬರುತ್ತದೆ. ಆದರೆ ಜೀವನ್ಮುಕ್ತಿ ಸಾಧ್ಯವಾಗದು. ದಾನದಿಂದ ಬಂದ ಪುಣ್ಯದ ಫಲವನ್ನು ನಂತರದ ಜನ್ಮಗಳಲ್ಲಿ ಅನುಭವಿಸಲೇ ಬೇಕಾಗುತ್ತದೆ.

ADVERTISEMENT

ಉರಿಯುಂಡ ಕರ್ಪೂರದಂತೆಪರಮಾತ್ಮನಲ್ಲಿ ಒಂದಾಗ ಬೇಕಾದರೆ ಭಕ್ತನು ದೇವನಿಗೆ ತನ್ನನ್ನೇ ಕೊಟ್ಟು ಕೊಳ್ಳಬೇಕಾಗುತ್ತದೆ. ಹೆಣ್ಣು, ಹೊನ್ನು, ಮಣ್ಣನ್ನು ಗೃಹಸ್ಥ ಜೀವನದ ಮೂಲಕ ಅನುಭವಿಸಿ, ಅದರಲ್ಲಿ ಒಂದು ಪಾಲನ್ನು ದಾನ ಮಾಡುವುದು ಸಣ್ಣವರ ಸಮಾರಾಧನೆ. ಇವೆಲ್ಲವನ್ನು ದೂರವಿಟ್ಟು ತಾನು ಸಮರ್ಪಿಸಿಕೊಳ್ಳುವ ಆತ್ಮಾರ್ಪಣೆ ಅತ್ಯಂತ ಶ್ರೇಷ್ಠ, ಅದುವೇ ಜೀವನ್ಮುಕ್ತಿಗೆ ಸಾಧನ ಎಂಬುದು ಅಕ್ಕಮಹಾದೇವಿ ಅಭಿಪ್ರಾಯ.

(ಪ್ರಜಾವಾಣಿಯ ವಚನಾಮೃತ ಅಂಕಣದಲ್ಲಿ ಪ್ರಕಟವಾದ ಬರಹ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.