ರಾಂಪುರ: ಮುಂಗಾರು ಬಿತ್ತನೆಗೆ ರೈತ ಸಜ್ಜಾಗುತ್ತಿದ್ದಂತೆ ಕೃಷಿ ಇಲಾಖೆ ಬಿತ್ತನೆಯ ಬೀಜಗಳ ಬೀಜೋಪಚಾರದ ಕುರಿತ ರೈತರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಬೀಜೋಪಚಾರ ಆಂದೋಲನ ಹಮ್ಮಿಕೊಂಡಿದೆ.
ಎರಡು ದಿನಗಳಿಂದ ಬಾಗಲಕೋಟೆ ಹೋಬಳಿಯ ಮನ್ನಿಕಟ್ಟಿ, ಬೆನಕಟ್ಟಿ, ಭಗವತಿ, ಮುಡಪಲಜೀವಿ ಹಾಗೂ ಕಡ್ಲಿಮಟ್ಟಿ ಗ್ರಾಮಗಳಲ್ಲಿ ಮುಂಗಾರು ಬಿತ್ತನೆಗೆ ಬೀಜಗಳ ಆಯ್ಕೆ ಮತ್ತು ಬಿತ್ತನೆಗೆ ಮುನ್ನ ಕೈಗೊಳ್ಳಬೇಕಾದ ಬೀಜೋಪಚಾರ ಕುರಿತು ರೈತರಿಗೆ ಸಮಗ್ರ ಮಾಹಿತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ನೀಡಲಾಯಿತು.
ರೈತರು ತಮ್ಮ ಜಮೀನಿನ ಮಣ್ಣಿನ ಗುಣ, ನೀರಿನ ಲಭ್ಯತೆಯ ಅನುಸಾರವಾಗಿ ಸೂಕ್ತ ತಳಿಯ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬಿತ್ತನೆಗೂ ಮುಂಚೆ ಬೀಜಗಳನ್ನು ಸದೃಢವಾಗಿರಿಸಲು ಹಾಗೂ ಬಿತ್ತನೆಯ ನಂತರ ಬರಬಹುದಾದ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ಈಗಲೇ ಅನುಸರಿಸಬೇಕಾದ ಕ್ರಮಗಳ ಕುರಿತು ಇಲಾಖೆಯ ಅಧಿಕಾರಿಗಳು ರೈತರಿಗೆ ಸೂಕ್ತ ಮಾಹಿತಿ ನೀಡಿ, ಬೀಜೋಪಚಾರ ಪದ್ಧತಿ ತೋರಿಸಿದರು.
ಕೃಷಿ ಇಲಾಖೆಯ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕಿ ಸ್ನೇಹಾ ಕರಣಿ ಹಾಗೂ ಕೃಷಿ ಸಂಜೀವಿನಿ ತಾಂತ್ರಿಕ ಸಿಬ್ಬಂದಿ ರೈತರೊಂದಿಗೆ ಚರ್ಚಿಸಿ ಮುಂಗಾರು ಹಂಗಾಮಿನ ಬಿತ್ತನೆಯ ಸಮಸ್ತ ಮಾಹಿತಿ ನೀಡಿದರು. ಮುತ್ತನಗೌಡ ಗೌಡರ, ಶಂಕ್ರಯ್ಯ ಹಿರೇಮಠ, ಸಂಗನಗೌಡ ಗೌಡರ, ಶಿವಪ್ಪ ಗೌಡರ ಸೇರಿದಂತೆ ಆಯಾ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.