ADVERTISEMENT

ಅನುಭವದ ಲಾಭ ಪಡೆಯಿರಿ: ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ

ವಿಶ್ವ ಹಿರಿಯ ನಾಗರಿಕರ ದಿನಾಚರಣೆ;ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 2:37 IST
Last Updated 7 ಅಕ್ಟೋಬರ್ 2025, 2:37 IST
ಬಾಗಲಕೋಟೆಯಲ್ಲಿ ಸೋಮವಾರ ನಡೆದ ಹಿರಿಯ ನಾಗಿಕರ ದಿನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು
ಬಾಗಲಕೋಟೆಯಲ್ಲಿ ಸೋಮವಾರ ನಡೆದ ಹಿರಿಯ ನಾಗಿಕರ ದಿನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು   

ಬಾಗಲಕೋಟೆ: ಜೀವನದ ಶ್ರೇಷ್ಠತೆ ಯೌವನದಲ್ಲಿರದೇ ವಯೋವೃದ್ದರ ಅನುಭವದಲ್ಲಿದೆ. ಹಿರಿಯ ಜೀವಿಗಳನ್ನು ಭವಿಷ್ಯದ ಮಾರ್ಗದರ್ಶಕರಂತೆ ಕಾಣಬೇಕಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯರ ಅನುಭವ, ತ್ಯಾಗ, ಪ್ರೀತಿ ಮತ್ತು ಮಾರ್ಗದರ್ಶನ ಬಲವಾದ ಸಮಾಜ ನಿರ್ಮಾಣದ ಆಧಾರ ಸ್ತಂಭಗಳಾಗಬೇಕಿದೆ ಎಂದರು.

ಹಳೆಯ ಮರದ ನೆರಳಿನಲ್ಲಿ ಹೊಸ ಬೀಜಗಳು ಎಂಬಂತೆ, ಹಿರಿಯರ ಅನುಭವದ ನೆರಳಿಲ್ಲದೇ ಯುವ ಜನಾಂಗದ ಬೆಳೆವಣಿಗೆ ಅಸಾಧ್ಯ. ಅಲ್ಲದೇ ನಮ್ಮ ಭವಿಷ್ಯದ ದಾರಿದೀಪವೂ ಹೌದು. ಹಿರಿಯರನ್ಮು ಗೌರವಿಸುವುದಷ್ಟೇ ಅಲ್ಲ, ಅವರೊಂದಿಗೆ ಸಂಪರ್ಕ ಸಾಧಿಸುವ, ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಸಂಸ್ಕೃತಿ ಬೆಳೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ADVERTISEMENT

ಸರ್ಕಾರ ಹಿರಿಯರ ಆರೈಕೆ, ಆರೋಗ್ಯ, ಪಿಂಚಣಿ ಹಾಗೂ ಸೌಲಭ್ಯಗಳಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ, ಅದು ಸಾಕಾಗುವುದಿಲ್ಲ. ಹಿರಿಯ ನಾಗರಿಕರ ದಿನ ಆಚರಣೆಗೆ ಸೀಮಿತವಾಗದೇ ಪ್ರತಿ ದಿನವೂ ಗೌರವ ಸಲ್ಲಿಸುವ ಕಾರ್ಯ ಆಗಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಮಾತನಾಡಿ, ಹಿರಿಯರು ಸಂಸ್ಕೃತಿ ಹಾಗೂ ಸಂಸ್ಕಾರದ ಮೂಲ ಬೇರಾಗಿದ್ದು, ಆಧುನಿಕತೆ ಹೊಸ ಚಿಗುರಾಗಬೇಕಿದೆ. ಅವರ ಮಾರ್ಗದರ್ಶನದಲ್ಲಿ ಇಂದಿನ ಯುವ ಪೀಳಿಗೆ ಸಾಗಬೇಕಿದೆ ಎಂದು ಹೇಳಿದರು.

ಉಪನ್ಯಾಸ ನೀಡಿದ ವೈದ್ಯಾಧಿಕಾರಿ ಸಚಿನ್ ದೇಸಾಯಿ, ವಯಸ್ಸಿಗೆ ತಕ್ಕಂತೆ ಬರುವ ಕಾಯಿಲೆಗಳ ಬಗ್ಗೆ ವಿವರವಾಗಿ ತಿಳಿಸಿದರು.

ಮುರುಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಹಿರಿಯ ನಾಗರಿಕರಾದ ಸಿದ್ದಲಿಂಗಯ್ಯ ಗುಳೇದ, ಮಲ್ಲಿಕಾರ್ಜುನ ಯಾಳವಾರ, ಮಲ್ಲಪ್ಪ ಗಾಣಿಗೇರ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕೆ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಗಿರಿಜಾ ಪಾಟೀಲ, ಪ್ರಭು ಹಳ್ಳೂರ ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಲ್ಲಿಕಾರ್ಜುನ ಯಾಳವಾರ ಮಲ್ಲಪ್ಪ ಗಾಣಿಗೇರ ಸಿದ್ದಲಿಂಗಪ್ಪ ಶಿರೂರ ಹುಚ್ಚನಗೌಡ ಗೌಡರ ಶಾಂತಾಬಾಯಿ ಕಠಾರಿ ದುಂಡಪ್ಪ ಬಡಿಗೇರ ಮಹಾದೇವಪ್ಪ ಕಡಕಭಾವಿ ಸಂಗಯ್ಯ ಚನ್ನಯ್ಯ ಹಿರೇಮಠ ಸದಾಶಿವ ತಮ್ಮನಪ್ಪ ಗೊಂದಕರ ಅವರನ್ನು ಸನ್ಮಾನಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.