ಬಾಗಲಕೋಟೆ: ಮಾನವ ಏನೇ ಸಾಧನೆ ಮಾಡಿದರೂ ಸಂತೃಪ್ತಿ ಸಾಧಿಸಿಲ್ಲ. ಮಾನವ ಅತೃಪ್ತನಾಗಿರುವುದರಿಂದ ಸಂತೃಪ್ತನಾಗಲಾರ. ಮನಸ್ಸು ಸಂತನಾದರೆ ಸಂತೃಪ್ತನಾಗುತ್ತಾನೆ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಶ್ರಾವಣ ಮಾಸದ ಎರಡನೇ ಶರಣಬಸವ ಪಲ್ಲಕ್ಕಿ ಉತ್ಸವದ ನೇತೃತ್ವವಹಿಸಿ ಮಾತನಾಡಿದ ಅವರು, ಮಾನವನು ಏನೆಲ್ಲ ಸಂಪಾದಿಸಿದ್ದಾನೆ. ಆದರೆ, ಸಂತೃಪ್ತಿ ಸಂಪಾದಿಸಿಲ್ಲ. ಮಹಾಸತ್ಯ ಸಂಪತ್ತನ್ನೇ ಸಂಪಾದಿಸುವುದನ್ನು ಮಾನವ ಮರೆತಿದ್ದಾನೆ. ಅರಿವಿನ ಬೆಳಕಿನಲ್ಲಿ ತನ್ನ ಸ್ವರೂಪವನ್ನು ಅರಿತುಕೊಳ್ಳಬೇಕು ಎಂದರು.
ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ, ಇಡೀ ವಿಶ್ವಕ್ಕೆ ವಿನೂತನವಾದ ವೈಜ್ಞಾನಿಕ ವಾತ್ಸವದ ಸತ್ಯವನ್ನು, ಸಮ, ಸಮವಾಗಿ ಸಾಮರಸ್ಯದ ಬದುಕನ್ನು ಬಾಳುವ ಕಲೆಯನ್ನು ಬಸವಾದಿ ಶರಣರು ನೀಡಿದ್ದಾರೆ ಎಂದು ಹೇಳಿದರು.
ಮಸ್ಕಿ ಇರಕಲ್ ಮಠದ ಬಸವ ಪ್ರಸಾದ ಸ್ವಾಮೀಜಿ ಮಾತನಾಡಿ, ಮಾನವನು ತನು, ಮನ, ಭಾವದ ಮೂಲಕ ಪರಮ ಶಿವಸ್ವರೂಪ ಆಗಬೇಕಾಗಿದೆ. ಜೀವನ ಸಾರ್ಥಕಗೊಳಿಸಿಕೊಳ್ಳಲು ಶರಣ ಸಂದೇಶ ಪಾಲನೆಯೊಂದೇ ದಾರಿ ಎಂದರು.
ಪಲ್ಲಕ್ಕಿಯು ಕಾರೇಹಳ್ಳದ ಪ್ರಮುಖ ರಸ್ತೆಗಳಲ್ಲಿ ಕಲಾ ತಂಡಗಳೊಂದಿಗೆ ಸಂಚರಿಸಿ ಶ್ರೀಪೀಠ ತಲುಪಿತು. ಅಕ್ಕನ ಬಳಗದವರು ಶಿವಭಜನೆಯೊಂದಿಗೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.