ರಬಕವಿ ಬನಹಟ್ಟಿ: ಇಲ್ಲಿನ ಜಮಖಂಡಿ–ಕುಡಚಿ ರಾಜ್ಯ ಹೆದ್ದಾರಿಯಲ್ಲಿ ಬಿಡಾಡಿ ದನಗಳು, ಕತ್ತೆ, ನಾಯಿಗಳ ಹಾವಳಿ ಹೆಚ್ಚಿದೆ.
ಇಲ್ಲಿನ ವೈಭವ ಚಿತ್ರ ಮಂದಿರದಿಂದ ಭದ್ರನವರ ಮನೆಯವರೆಗಿನ ರಸ್ತೆಯಲ್ಲಿ ಕತ್ತೆ, ನಾಯಿ ಮತ್ತು ದನಕರು ಎಲ್ಲೆಂದರಲ್ಲಿ ಮಲಗಿರುತ್ತವೆ. ಇದರಿಂದ ವಾಹನ ಸವಾರರು ತೊಂದರೆಗೀಡಾಗಿದ್ದಾರೆ.
‘ರಾತ್ರಿ ಸಮಯದಲ್ಲಿ ಮಾಂಸ ಮಾರಾಟಗಾರರು ಉಳಿದ ಮಾಂಸವನ್ನು ರಾಜ್ಯ ಹೆದ್ದಾರಿ ಬಳಿಯಿರುವ ಹಳ್ಳದ ಬದಿಗೆ ಸುರಿದು ಹೋಗುತ್ತಾರೆ. ಇದರಿಂದ ನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇವೆ. ವಾಹನ ಸವಾರರಿಗೆ ಮತ್ತು ಸಂಜೆ ವಾಯು ವಿಹಾರಕ್ಕೆ ತೆರಳುವವರಿಗೆ ತೊಂದರೆ ಉಂಟುಮಾಡುತ್ತಿವೆ’ ಎಂದು ನಿವಾಸಿಗಳಾದ ಡಿ.ವಿ. ಕೋರಿ ಮತ್ತು ಮಹಾದೇವ ಮಂಡಿ ತಿಳಿಸಿದರು.
‘ದನಗಳ ಎಲ್ಲೆಂದರಲ್ಲಿ ಮಲಗಿ ಸಂಚಾರಕ್ಕೆ ಅಡಚಣೆ ತರುತ್ತಿವೆ. ಸಾಕಿದವರು ಹೀಗೆ ಬೇಕಾಬಿಟ್ಟಿ ರಸ್ತೆಯಲ್ಲಿ ಬಿಡುತ್ತಿರುವುದರಿಂದ ಜನರಿಗೆ ತೊಂದರೆಯಾಗಿದೆ’ ಎಂದರು.
‘ಎಸ್ಆರ್ಎ ಮೈದಾನದಲ್ಲಿ ನಡೆಯುವ ಸಂತೆಯಲ್ಲಿ ಕತ್ತೆಗಳು ಬೇಕಾಬಿಟ್ಟಿಯಾಗಿ ಓಡಾಡುವುದರಿಂದ ಖರೀದಿದಾರರು ಮತ್ತು ಮಾರಾಟಗಾರರು ತೊಂದರೆ ಅನುಭವಿಸುತ್ತಿದ್ದಾರೆ. ತರಕಾರಿಗೆ ಬಾಯಿ ಹಾಕಿ, ಮಾರಾಟಗಾರರಿಗೆ ನಷ್ಟ ಉಂಟುಮಾಡುತ್ತಿವೆ’ ಎಂದು ಸಚಿನ್ ಐಹೊಳಿ, ಮಹಾಂತೇಶ ಪದಮಗೊಂಡ, ಶಾಂತಾ ಮಂಡಿ ಮತ್ತು ಈರಣ್ಣ ಜಿಗಜಿನ್ನಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.