ADVERTISEMENT

ಕಬ್ಬಿನ ಬಾಕಿ ಬಿಲ್ ಪಾವತಿಗೆ ಎರಡು ದಿನ ಗಡುವು: ಡಿಸಿ

ವಸೂಲಾತಿ ಆದೇಶ ಜಾರಿ : ಕ್ರಮಕೈಗೊಳ್ಳದ ತಹಶೀಲ್ದಾರರಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 15:05 IST
Last Updated 23 ಏಪ್ರಿಲ್ 2025, 15:05 IST
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಕಬ್ಬು ಬಿಲ್‌ ಬಾಕಿ ಪಾವತಿಗೆ ಸಂಬಂಧಿಸಿದ ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿದರು
ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಕಬ್ಬು ಬಿಲ್‌ ಬಾಕಿ ಪಾವತಿಗೆ ಸಂಬಂಧಿಸಿದ ಸಭೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿದರು   

ಬಾಗಲಕೋಟೆ: 2024-25ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ನೀಡಬೇಕಾದ ಬಾಕಿ ಹಣವನ್ನು ಎರಡು ದಿನಗಳಲ್ಲಿ ಸಂಪೂರ್ಣವಾಗಿ ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಸಕ್ಕರೆ ಕಾರ್ಖಾನೆಗಳಿಗೆ ಗಡುವು ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಸಕ್ಕರೆ ಕಾರ್ಖಾನೆ ಮಾಲೀಕರ, ವ್ಯವಸ್ಥಾಪಕ ನಿರ್ದೇಶಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಗೆ ನೀಡಬೇಕಾದ ಬಾಕಿ ಬಿಲ್ಲಿನ ಮಾಹಿತಿಯನ್ನು ಜಿಲ್ಲಾಡಳಿತ ಹಾಗೂ ಸಕ್ಕರೆ ಆಯುಕ್ತರಿಗೆ ಸರಿಯಾಗಿ ನೀಡುತ್ತಿಲ್ಲ. ಅಲ್ಲದೇ ಬಿಲ್ ಪಾವತಿ ಮಾಡಿರುವ ಬಗ್ಗೆ ರೈತರಿಗೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ತಹಶೀಲ್ದಾರರು ಪಾವತಿಯಾದ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಜಿಲ್ಲೆಯ 12 ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಿಲ್‌ ಪಾವತಿಗೆ ಬಾಕಿ ಉಳಿಸಿಕೊಂಡಿದ್ದು, ಇದರಲ್ಲಿ ಐದು ಕಾರ್ಖಾನೆಗಳ ಮಾಲೀಕರು ಬಿಲ್ ಪಾವತಿಗೆ ಕಾಲಾವಕಾಶ ಕೋರಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಿರುವ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿ, ರೈತರು ಸಂಕಷ್ಟದಲ್ಲಿದ್ದಾರೆ ಪ್ರತಿ ಬಾರಿಯೂ ರೈತರಿಗೆ ಬಿಲ್ ಪಾವತಿಸುವಲ್ಲಿ ಕಾರ್ಖಾನೆಯವರು ವಿಳಂಬ ಮಾಡುತ್ತಿದ್ದೀರಿ. ನಿಮ್ಮ ಸಮಸ್ಯೆಗಿಂತ ರೈತರಿಗೆ ಬಹಳಷ್ಟು ಸಮಸ್ಯೆಗಳಿವೆ. ನಿಗದಿತ ಅವಧಿಯಲ್ಲಿ ಬಿಲ್ ಪಾವತಿ ಮಾಡದಿದ್ದರೇ ಹೇಗೆ ಎಂಬ ಪ್ರಶ್ನೆ ಮಾಡಿದರು.

ADVERTISEMENT

ಯಾವುದೇ ರೀತಿಯಲ್ಲಿ ಕಾಲಾವಕಾಶ ನೀಡಲು ಅವಕಾಶ ನೀಡಲ್ಲ. ಎರಡು ದಿನಗಳಲ್ಲಿ ರೈತರ ಬಾಕಿ ಹಣ ಸಂಪೂರ್ಣ ಪಾವತಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಬ್ಬಿನ ಬಾಕಿ ಹಣ ಪಾವತಿ ಕುರಿತಂತೆ ಸಕ್ಕರೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಭೂಕಂದಾಯ ವಸೂಲಾತಿಗಾಗಿ ತಹಶೀಲ್ದಾರರಿಗೆ ಆದೇಶ ಜಾರಿ ಮಾಡಿದ್ದರೂ ಸಹ ವಸೂಲಾತಿ ಪ್ರಕ್ರಿಯೆ ಸಂಪೂರ್ಣವಾಗಿ ನಡೆಸದ ಹಾಗೂ ಮಾಹಿತಿ ನೀಡದ ಹಿನ್ನಲೆಯಲ್ಲಿ ತಹಶೀಲ್ದಾರರಿಗೆ ನೋಟಿಸ್ ಜಾರಿ ಮಾಡಬೇಕು. ಎರಡು ದಿನಗಳಲ್ಲಿ ರೈತರ ಕಬ್ಬಿನ ಬಾಕಿ ಹಣ ಸಂಪೂರ್ಣವಾಗಿ ಪಾವತಿಗೆ ಕ್ರಮವಹಿಸಬೇಕು. ಕ್ರಮವಹಿಸದಿದ್ದರೆ, ತಹಶೀಲ್ದಾರ್ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆಗಳು ಸರಿಯಾಗಿ ಕರ ಪಾವತಿಸುತ್ತಿಲ್ಲ. ಕಾರ್ಖಾನೆ ಅಳರೆ ಮಾಡಲು ಗ್ರಾಮ ಪಂಚಾಯತಿ ತಂಡ ಬಂದಾಗ ಸರಿಯಾದ ಸಹಕಾರ ನೀಡುತ್ತಿಲ್ಲ. ಕಾನೂನು ರೀತಿಯಲ್ಲಿ ಕರ ಪಾವತಿಸಬೇಕು. ವಾರದಲ್ಲಿ ಅಳತೆ ಮಾಡಲು ತಂಡ ಕಾರ್ಖಾನೆಗಳಿಗೆ ಬರಲಿದ್ದು, ಸಹಕಾರ ನೀಡಬೇಕು. ಇಲ್ಲವಾದಲ್ಲಿ, ನಾನೇ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಕಾರ್ಖಾನೆ ಪ್ರತಿನಿಧಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.