ADVERTISEMENT

ಸಕ್ಕರೆ ಕಾರ್ಖಾನೆ: ಪ್ರತಿಭಟನನಿರತ ಕಾರ್ಮಿಕರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 20:12 IST
Last Updated 15 ಏಪ್ರಿಲ್ 2022, 20:12 IST

ಮುಧೋಳ (ಬಾಗಲಕೋಟೆ ಜಿಲ್ಲೆ): ತಾಲ್ಲೂಕಿನ ತಿಮ್ಮಾಪುರದ ರೈತರ ಸಹಕಾರ ಸಕ್ಕರೆ ಕಾರ್ಖಾನೆ ಕಾರ್ಮಿಕರು 262 ದಿನಗಳಿಂದ ತಹಶೀಲ್ದಾರ್ ಕಚೇರಿ ಬಳಿ ನಡೆಸುತ್ತಿದ್ದ ಧರಣಿ ಪೆಂಡಾಲಿಗೆ ಶುಕ್ರವಾರ ಸಂಜೆ ಬೆಂಕಿ ಹಚ್ಚಿ, ವೇದಿಕೆಯನ್ನು ಧ್ವಂಸಗೊಳಿಸಿ, ಕಾರ್ಮಿಕರನ್ನು ಥಳಿಸಲಾಗಿದೆ.

‘ಕಾರ್ಖಾನೆ ಪುನರಾಂಭ ಮಾಡಬೇಕು ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಚಪ್ಪಲಿ ಹಾರ ಹಾಕಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಕೋಪಗೊಂಡ ಅಧ್ಯಕ್ಷರ ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ.

ADVERTISEMENT

ಘಟನೆಯಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಕೆಲ ಪದಾಧಿಕಾರಿಗಳನ್ನು ಥಳಿಸಲಾಗಿದೆ. ಪೆಂಡಾಲ್‌ಗೆ ಬೆಂಕಿ ಹಚ್ಚಿದ್ದರಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಬೆಂಕಿ ನಂದಿಸಿದ್ದಾರೆ.

ಈ ಕುರಿತು ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೆವಾಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ನೂರಾರು ದಿನಗಳಿಂದ ಧರಣಿ ನಡೆಸುತ್ತಾ ಬಂದಿದ್ದಾರೆ. ನಾವೂ ನೋಡುತ್ತಿದ್ದೆವು. ಆದರೆ ಇದೀಗ ವೈಕ್ತಿಕವಾಗಿ ನನ್ನ ತೇಜೋವಧೆ ಮಾಡಿದಾಗ ಬೆಂಬಲಿಗರು ಸಹಿಸದೆ ಹೀಗೆ ಮಾಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.