ಮಹಾಲಿಂಗಪುರ: ‘ಗ್ರಾಮೀಣ ಭಾಗದ ರೈತರ ಜಮೀನು ಹಕ್ಕನ್ನು ಭದ್ರಪಡಿಸಲು ಸರ್ಕಾರ ಪೌತಿ ಆಂದೋಲನ ಹಮ್ಮಿಕೊಂಡಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು’ ಎಂದು ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ ಹೇಳಿದರು.
ಸಮೀಪದ ಚಿಮ್ಮಡ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡ ಪೌತಿ, ವಾರಸಾ ಖಾತಾ ಆಂದೋಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಾಲ ಸೌಲಭ್ಯ, ವಿಮೆ ಪರಿಹಾರ ಸೇರಿದಂತೆ ಸರ್ಕಾರದ ಪ್ರತಿಯೊಂದು ಸೌಲಭ್ಯ ಪಡೆಯಲು ಅವಶ್ಯಕವಾದ ಪೌತಿ ಖಾತೆಯನ್ನು ಸರ್ಕಾರ ಆಂದೋಲನದ ಮೂಲಕ ರೈತರಿಗೆ ನೀಡುತ್ತಿದ್ದು, ಮೃತ ರೈತರ ವಾರಸುದಾರರು ಕೂಡಲೇ ತಮ್ಮ ಜಮೀನುಗಳ ದಾಖಲಾತಿಗಳನ್ನು ವರ್ಗಾಯಿಸಿಕೊಳ್ಳಬೇಕು’ ಎಂದರು.
ಕಂದಾಯ ನಿರೀಕ್ಷಕ ಪಿ.ಆರ್. ಮಠಪತಿ ಮಾತನಾಡಿ, ‘ತಕರಾರು ಹಾಗೂ ಕಾನೂನು ತೊಡಕು ಇದ್ದ ಜಮೀನುಗಳನ್ನು ಹೊರತುಪಡಿಸಿ ಉಳಿದ ಎಲ್ಲ ರೈತರು ತಮ್ಮ ಜಮೀನುಗಳ ಖಾತೆಗಳನ್ನು ಸರಿಪಡಿಸಿಕೊಳ್ಳಬೇಕು’ ಎಂದರು.
ಹಲವು ವಾರಸಾ ಪೌತಿ ಖಾತಾ ನಕಲುಗಳನ್ನು ರೈತರಿಗೆ ಹಸ್ತಾಂತರಿಸಲಾಯಿತು. ಆನಂದ ಕವಟಿ, ಮಹಾಲಿಂಗ ಮಾಯನ್ನವರ ಮಾತನಾಡಿದರು. ಗುರಲಿಂಗಪ್ಪ ಪೂಜಾರಿ, ಮಹಾಂತೇಶ ಜಾಲಿಕಟ್ಟಿ, ಪಿಡಿಒ ಶಿವಾನಂದ ಬಿರಾದಾರ, ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ ನೀಲನ್ನವರ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.