ADVERTISEMENT

ತೇರದಾಳ | ಗ್ಯಾರಂಟಿ: ಮತ ಕೊಳ್ಳುವ ಭ್ರಮೆ–ಸವದಿ

ತೇರದಾಳ ಶಾಸಕ ಸಿದ್ದು ಸವದಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 3:17 IST
Last Updated 27 ಸೆಪ್ಟೆಂಬರ್ 2025, 3:17 IST
ತೇರದಾಳದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಪ್ರವೀಣ ನಾಡಗೌಡ ಹಾಗೂ ವಿಜಯಮಹಾಂತ ನಾಡಗೌಡ ಅವರಿಗೆ ಸಂಸದ ಪಿ.ಸಿ. ಗದ್ದಿಗೌಡರ ಹಾಗೂ ಶಾಸಕ ಸಿದ್ದು ಸವದಿ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು
ತೇರದಾಳದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಪ್ರವೀಣ ನಾಡಗೌಡ ಹಾಗೂ ವಿಜಯಮಹಾಂತ ನಾಡಗೌಡ ಅವರಿಗೆ ಸಂಸದ ಪಿ.ಸಿ. ಗದ್ದಿಗೌಡರ ಹಾಗೂ ಶಾಸಕ ಸಿದ್ದು ಸವದಿ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು   

ತೇರದಾಳ: ಜನರಿಗೆ ‘ಗ್ಯಾರಂಟಿ’ ಭಾಗ್ಯ ನೀಡುವ ಮೂಲಕ ಮತವನ್ನು ಕೊಂಡುಕೊಂಡಿದ್ದೇವೆ ಎಂಬ ಭ್ರಮೆಯಲ್ಲಿ ಸರ್ಕಾರವಿದೆ. ಆದರೆ ಜನರಿಗೆ ಅದರ ಮರ್ಮ ತಿಳಿದಿದ್ದು, ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

ಇಲ್ಲಿನ ಸಿದ್ದೇಶ್ವರ ಗಲ್ಲಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಶುಕ್ರವಾರ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಪಟ್ಟಣದ ಪ್ರವೀಣ ನಾಡಗೌಡ ಹಾಗೂ ವಿಜಯಮಹಾಂತ ನಾಡಗೌಡ ಹಾಗೂ ಅವರ ಬೆಂಬಲಿಗರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಅಭಿವೃದ್ಧಿಗೆ ಬಿಜೆಪಿ ಅನಿವಾರ್ಯ ಎಂಬುದು ದೇಶದ ಜನರಿಗೆ ಅರ್ಥವಾಗಿದೆ. ನಮ್ಮ ದೇಶದ ಸುತ್ತಲೂ ಇರುವ ರಾಷ್ಟ್ರಗಳಲ್ಲಿಯ ಸರ್ಕಾರಗಳು ಪತನವಾದಂತೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನೂ ಉರುಳಿಸಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಮುಳುಗಿದೆ. ಅದು ಅಸಾಧ್ಯ’ ಎಂದು ಅವರು ಹೇಳಿದರು.

ADVERTISEMENT

ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ‘ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಬಂದಾಗಿನಿಂದ ದೇಶದಲ್ಲಿ ಶೇ 25ರಷ್ಟು ಬಡತನ ಕಡಿಮೆಯಾಗಿದೆ. ಜನತೆಯ ಸಂಕಷ್ಟ ಅರಿತು ತೆರಿಗೆ ಇಳಿಕೆ ಮಾಡಿದ್ದು ಅವರ ದೃಢ ನಿರ್ಧಾರಕ್ಕೆ ಉದಾಹರಣೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತದಾರನನ್ನು ಮಾನಸಿಕವಾಗಿ ಕುಗ್ಗಿಸಿದ್ದು, ಅಭಿವೃದ್ಧಿಯಂತೂ ಗಗನ ಕುಸುಮವಾಗಿದೆ’ ಎಂದು ಟೀಕಿಸಿದರು.

‘ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕಾಮಗಾರಿ ವೇಗ ಪಡೆದುಕೊಂಡಿದ್ದು, ಶೀಘ್ರ ಮುಗಿಯಲಿದೆ’ ಎಂದು ಅವರು ಹೇಳಿದರು.

ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ಪಕ್ಷಕ್ಕೆ ಸೇರ್ಪಡೆಗೊಂಡ ಪ್ರವೀಣ ನಾಡಗೌಡ ಮಾತನಾಡಿದರು. ಕಾರ್ಯಕ್ರಮಕ್ಕೂ ಮೊದಲು ಪ್ರವೀಣ ನಾಡಗೌಡ ಹಾಗೂ ವಿಜಯಮಹಾಂತ ನಾಡಗೌಡ ಅವರನ್ನು ಅವರ ಮನೆಯಿಂದ ವೇದಿಕೆಯವರೆಗೆ ವಾದ್ಯಮೇಳಗಳೊಂದಿಗೆ ನೂರಾರು ಕಾರ್ಯಕರ್ತರೊಡಗೂಡಿ ಮೆರವಣಿಗೆಯ ಮೂಲಕ ಕರೆತರಲಾಯಿತು.

ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುರೇಶ ಅಕಿವಾಟ, ನಗರ ಘಟಕದ ಅಧ್ಯಕ್ಷ ಮಹಾವೀರ ಕೊಕಟನೂರ, ನಾಗಪ್ಪ ಸನದಿ, ಡಿ.ಆರ್.ಪಾಟೀಲ, ಮಹಾವೀರ ಬಿಲವಡಿ, ಭುಜಬಲಿ ಕೇಂಗಾಲಿ, ಶಂಕರ ಕುಂಬಾರ, ಸಚಿನ ಕೊಡತೆ, ಸಂತೋಷ ಜಮಖಂಡಿ, ಪ್ರಭಾಕರ ಬಾಗಿ, ಗುರುಬಸು ಹುಕ್ಕೇರಿ, ಅಪ್ಪು ಮಂಗಸೂಳಿ, ಧರೇಶ ಹುದ್ದಾರ, ಸಚೀನ ಮುರಗುಂಡಿ, ಸುರೇಶ ರೇಣಕೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.