ADVERTISEMENT

ಅಖಿಲ ಭಾರತ ವಚನ ಸಾಹಿತ್ಯ ಸಮ್ಮೇಳನ ಡಿ.28ರಿಂದ

ಮರೇಗುದ್ದಿ ಅಡವಿಸಿದ್ದೇಶ್ವರ ಮಠದ ನಿರುಪಾಧೀಶರಿಗೆ ಅಧ್ಯಕ್ಷತೆಯ ಗೌರವ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 14:13 IST
Last Updated 25 ಡಿಸೆಂಬರ್ 2019, 14:13 IST
ನಿರುಪಾಧೀಶರು
ನಿರುಪಾಧೀಶರು   

ಬಾಗಲಕೋಟೆ: ಅಖಿಲ ಭಾರತ ಏಳನೇ ವಚನ ಸಾಹಿತ್ಯ ಸಮ್ಮೇಳನ ಡಿಸೆಂಬರ್ 28 ಹಾಗೂ 29ರಂದು ಇಲ್ಲಿನ ಚರಂತಿಮಠದ ಶಿವಾನುಭವ ಮಂಟಪದ ಫ.ಗು.ಹಳಕಟ್ಟಿ ವೇದಿಕೆಯಲ್ಲಿ ನಡೆಯಲಿದೆ.

ಜಮಖಂಡಿ ತಾಲ್ಲೂಕು ಮರೇಗುದ್ದಿಯ ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ನಿರುಪಾಧೀಶರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಚರಂತಿಮಠದ ಪ್ರಭುಸ್ವಾಮೀಜಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಡಿಸೆಂಬರ್ 28ರಂದು ಬೆಳಿಗ್ಗೆ 8.30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಇಲ್ಲಿನ ಬಿ.ವಿ.ವಿ ಸಂಘದ ಬೀಳೂರ ಅಜ್ಜನವರ ಗುಡಿಯಿಂದ ಹೊರಟು ಟೇಕಿನಮಠ, ಹುಂಡೇಕಾರ ಗಲ್ಲಿ, ಬಸವೇಶ್ವರ ಬ್ಯಾಂಕ್, ಪೊಲೀಸ್ ಚೌಕಿ, ಗಾಂಧಿ ರಸ್ತೆ, ಬಸವೇಶ್ವರ ವೃತ್ತದ ಮಾರ್ಗವಾಗಿ ಚರಂತಿಮಠದ ಶಿವಾನುಭವ ಮಂಟಪ ತಲುಪಲಿದೆ.

ADVERTISEMENT

ಶಾಸಕವೀರಣ್ಣ ಚರಂತಿಮಠ ಸಮ್ಮೇಳನ ಉದ್ಘಾಟಿಸುವರು. ಹಿಂದಿನ ಸಮ್ಮೇಳನದ ಅಧ್ಯಕ್ಷ ಡಾ. ವೀರಣ್ಣ ರಾಜೂರ, ಕಮತಗಿಯ ಹುಚ್ಚೇಶ್ವರ ಸ್ವಾಮೀಜಿ ಅಧ್ಯಕ್ಷೆತೆಯಲ್ಲಿ ಸಮಾರಂಭ ಜರುಗಲಿದೆ. ವಚನ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಎನ್. ತಿಮ್ಮಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಬಿ.ವಿ.ವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ. ಸಜ್ಜನ (ಬೇವೂರ) 'ವಚನ ಸಂಗಮ' ಸ್ಮರಣ ಸಂಚಿಕೆ, ಬೀಳಗಿಯ ಸ್ವಾಮಿ ವಿವೇಕಾನಂದ ಸಂಸ್ಥೆ ಅಧ್ಯಕ್ಷ ಎಂ.ಎನ್. ಪಾಟೀಲ 'ನಿರುಪಾಧೀಶರ ವಚನಗಳು', ಕುಂದರಗಿಯ ರಾಮಲಿಂಗೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಸವರಾಜ ಖೋತ 'ನಿರುಪಾಧೀಶರ ಆಯ್ದ ಚುಟುಕುಗಳು', ಚಿಕ್ಕಮಗಳೂರಿನ ಜಯಬಸವಾನಂದ ಸ್ವಾಮೀಜಿ 'ವಚನ ನಿವೇದನೆ' ಹಾಗೂ 'ಆಧುನಿಕ ವಚನಕಾರರ ವಚನ ಸಂಕಲನ', 'ಮೇಘ ಜಲದ ಮುತ್ತು' ಗ್ರಂಥಗಳ ಲೋಕಾರ್ಪಣೆಗೊಳಿಸಲಿದ್ದಾರೆ ಎಂದರು.

ಅಂದು ಮಧ್ಯಾಹ್ನ 1.30ಕ್ಕೆ ಸಮ್ಮೇಳನದ ಅಧ್ಯಕ್ಷರೊಂದಿಗೆ ಸಂವಾದ ಇದ್ದು, ಜೆ.ಜೆ. ಭೈರಮಟ್ಟಿ, ಜೆ.ಕೆ. ತಳವಾರ, ಶಂಕರ ಡಬರಿ, ಶಿವಾನಂದ ಹಾಡಕರ, ಡಾ. ವಿಜಯಶ್ರೀ ಇಟ್ಟಣ್ಣವರ, ಡಾ. ವೀಣಾ ಕಲ್ಮಠ, ವಿಜಯಲಕ್ಷ್ಮೀ ಭದ್ರಶೆಟ್ಟಿ, ಉಮಾ ರೇವಡಿಗಾರ ಪಾಲ್ಗೊಳ್ಳಲಿದ್ದಾರೆ.

ಡಿಸೆಂಬರ್ 29ರಂದುಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಪ್ರಭುಸ್ವಾಮಿಗಳು ಹಾಗೂ ಗುರುಮಹಾಂತ ಸ್ವಾಮಿಗಳ ಸಮ್ಮುಖದಲ್ಲಿ ನಡೆಯಲಿದೆ. ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಬರೆದ 'ಅಕ್ಕನ ಹುಡಕಾಟದಲ್ಲಿ' ಕೃತಿ ಬಿಡುಗಡೆಯಾಗಲಿದೆ

ಇದೇ ವೇಳೆ ಫಕ್ಕೀರೇಶ್ವರ ಸ್ವಾಮೀಜಿ, ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಶಾಂತಾದೇವಿ ಶಾಬಾದಿ, ಪ್ರೊ. ಬಿ.ಎಂ. ಹಿರೇಮಠ, ಫ.ಗು. ಸಿದ್ದಾಪುರ ಅವರಿಗೆ 'ವಚನಶ್ರೀ'-2019 ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಎಂ.ಎಸ್. ಸಿಂಧೂರ, ಇಷ್ಟಲಿಂಗ ಶಿರಸಿ, ಗುರುಸ್ವಾಮಿ ಗಣಾಚಾರಿ, ಶೇಖರಪ್ಪಾ ಹೂಲಗೇರಿ, ಸಿದ್ರಾಮಪ್ಪ ಕುಮಾನಿ ಅವರನ್ನು ಸನ್ಮಾನಿಸಲಾಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಯಾಳವಾರ, ಡಾ. ಜಿ.ಐ. ನಂದೀಕೋಲಮಠ, ಬಸವರಾಜ ಮುಕ್ಕುಪ್ಪಿ, ಮಲ್ಲೇಶಪ್ಪಾ ಜಿಗಜಿನ್ನಿ, ಎಂ.ಎಸ್. ಆರಬ್ಬಿ, ಪಂಡಿತಪ್ಪ ಆರಬ್ಬಿ, ಬಸವರಾಜ ಭಗವತಿ, ಜಿ.ಎನ್. ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.