ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಬಂದಕೇರಿ ಗ್ರಾಮದಲ್ಲಿ ಭಾನುವಾರ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿ ಮರಳಿದ ಯೋಧನನ್ನು ಗ್ರಾಮಸ್ಥರು ಊರ ದೇವರ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಿ ಸ್ವಾಗತಿಸಿದರು.
ಗ್ರಾಮದ ಹನುಮಪ್ಪ ಜಮ್ಮನಕಟ್ಟಿ ಅವರು ಸೇವನೆಯಲ್ಲಿ 17 ವರ್ಷಗಳ ಕಾಲ ಕೆಲಸ ಮಾಡಿ ನಿವೃತ್ತಿ ಹೊಂದಿ ಊರಿಗೆ ಮರಳಿದರು.
ಅವರನ್ನು ಗೌರವಿಸಲು ನಿರ್ಧರಿಸಿದ ಗ್ರಾಮಸ್ಥರು ಹನುಮಂತ ಅವರನ್ನು ತೆರೆದ ಜೀಪ್ ನಲ್ಲಿ ಕೂರಿಸಿ ಅವರ ಪಕ್ಕದಲ್ಲಿ ಊರ ದೇವರಾದ ಮಾರುತೇಶ್ವರನ ಭಾವಚಿತ್ರ ಇಟ್ಟು ಮೆರವಣಿಗೆ ನಡೆಸಿದರು.
ಕಾತಿ೯ಕೋತ್ಸವ ನಿಮಿತ್ತ ಗ್ರಾಮಸ್ಥರು ಮಾರುತೇಶ್ವರ ದೇವರ ಮೆರವಣಿಗೆ ನಡೆಸಲು ಮೊದಲು ಉದ್ದೇಶಿಸಿದ್ದರು. ಇದೇ ವೇಳೆ ಹನುಮಂತ ಅವರು ಊರಿಗೆ ಮರಳುತ್ತಿರುವ ವಿಚಾರ ತಿಳಿದು ಗೌರವಿಸಲು ಮುಂದಾದರು.
ಈ ವೇಳೆ ಗ್ರಾಮದ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ನಂತರ ನಿವೃತ್ತ ಯೋಧನಿಗೆ ಎಲ್ಲರೂ ಬಂದು ಅಭಿನಂದನೆ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.