ADVERTISEMENT

ಅಕಾಲ ಮುಪ್ಪು ಆವರಿಸುತ್ತಿದೆ: ಮಾನಕರ ಕಳವಳ

ಹಿರಿಯ ನಾಗರಿಕ ದಿನಾಚರಣೆ ನಿಮಿತ್ತ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2018, 12:57 IST
Last Updated 14 ಸೆಪ್ಟೆಂಬರ್ 2018, 12:57 IST
ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಿರಿಯರು.
ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಿರಿಯರು.   

ಬಾಗಲಕೋಟೆ: ‘ಸಂಸಾರ, ಉದ್ಯೋಗದ ಜಂಜಾಟದಿಂದ ಇತ್ತೀಚಿನ ದಿನಗಳಲ್ಲಿ ಮನುಷ್ಯ ಅತೀ ಸಣ್ಣ ವಯಸ್ಸಿನಲ್ಲಿಯೇ ಮುಪ್ಪು ಆವರಿಸಿಕೊಂಡು ನಿರುತ್ಸಾಹಿಯಾಗುತ್ತಿದ್ದಾನೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ ಬೇಸರ ವ್ಯಕ್ತ ಪಡಿಸಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶ್ವ ಹಿರಿಯ ನಾಗರಿಕ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ರೀಡಾ ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಚಟುವಟಿಕೆಯಲ್ಲಿ ತೊಡಗಿದ ಜನ ಸದಾ ಉತ್ಸಾಹಿಗಳಾಗಿ ಯುವಕರಂತೆ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿದಾಗ ಉತ್ಸಾಹಕ್ಕೆ ವಯಸ್ಸು ಅಡ್ಡಿಬಾರದು ಎಂಬುದು ವೇದ್ಯವಾಗುತ್ತದೆ’ ಎಂದರು

‘ಕ್ರೀಡೆ, ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕೇವಲ ಯುವಜನಾಂಗಕ್ಕೆ ಸೀಮಿತವಲ್ಲ. ಪರಿಸರದಲ್ಲಿ ಪ್ರಾಣಿ ಪಕ್ಷಿಗಳಲ್ಲಿಯೂ ಕೂಡಾ ಮನರಂಜನೆ ಗಮನಿಸಬಹುದಾಗಿದೆ. ಹಿರಿಯರಿಗಾಗಿಯೇ ಆಯೋಜಿಸಿದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಜಿಲ್ಲೆಯ ಇಷ್ಟೊಂದು ಜನರು ಸೇರಿದ್ದು ಸಂತೋಷದ ಸಂಗತಿ’ ಎಂದರು.

ADVERTISEMENT

‘60 ವರ್ಷ ನಂತರ ಮುಪ್ಪು ಆವರಿಸಿತೆಂದು ಮನೋವ್ಯಥೆಯಿಂದ ಬಳಲುತ್ತಿರುವ ಹಿರಿಯ ಜೀವಿಗಳು ಇಂತಹ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಉತ್ಸಾಹಿಗಳಾಗಬೇಕು. ಇಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮಗಳಲ್ಲಿ ಹಿರಿಯರಿಗಾಗಿ ಕ್ರೀಡಾ ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಬಸವರಾಜ ಶಿರೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಕಲಾವಿದೆ ಗೌರಮ್ಮ ಸಂಕಿನ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ.ವಿ.ಗುತ್ತಿ, ಎಂ.ಎಸ್.ಕುಬಕಡ್ಡಿ, ಅಂಗವಿಕಲರ ಕಲ್ಯಾಣಾಧಿಕಾರಿ ಗೀತಾ ಪಾಟೀಲ, ಸುರೇಖಾ ಚೆನ್ನಿ, ಎಸ್.ಎನ್.ಕೊರವರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.