ಹೊಸಪೇಟೆ: `ಏಕಾಗ್ರತೆಗೆ ಅಡ್ಡಿಯಾಗುವ ಎಲ್ಲ ಆಕರ್ಷಣೆಗಳನ್ನು ಮೀರಿ ನಾವು ಗುರಿ ಸಾಧಿಸಬೇಕು~ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್.ಹೂಗಾರ ಹೇಳಿದರು.
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿದ್ಯಾರ್ಥಿಗಳಿಗೆ ಈಚೆಗೆ ಆಯೋಜಿಸಿದ್ದ `ಚಾಲೆಂಜ್ಸ್ ಫಾರ್ ಮ್ಯೋನೇಜ್ಮೆಂಟ್ ಎಜುಕೇಷನ್ ಇನ್ ಇಂಡಿಯಾ~ ಕುರಿತ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮ್ಯೋನೇಜ್ಮೆಂಟ್ ಪ್ರವೇಶ ಪಡೆಯುವುದೇ ಒಂದು ಸವಾಲಾಗಿರುವಾಗ ಪ್ರತಿಕ್ಷಣಕ್ಕೂ ಆಗುತ್ತಿರುವ ಬದಲಾವಣೆಗಳ ನಡುವೆ ನಮ್ಮ ಶಿಕ್ಷಣ ಕೇವಲ ಅಂಕ ಹಾಗೂ ಗ್ರೇಡ್ಗಳಿಗೆ ಸೀಮಿತವಾಗಬಾರದು. ಕೌಶಲ ಹಾಗೂ ಮೌಲ್ಯಯುತ ಶಿಕ್ಷಣ ಪಡೆಯುವ ಮೂಲಕ ಸವಾಲುಗಳನ್ನು ನಿಭಾಯಿಸುವ ಜ್ಞಾನ ಪಡೆಯಬೇಕು ಎಂದು ನುಡಿದರು.
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಗುರುಸಿದ್ಧಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ `ಸ್ಪರ್ಧಾತ್ಮಕ ಬದುಕು ನಮ್ಮ ಮುಂದೆ ಅನೇಕ ಅವಕಾಶಗಳನ್ನು ಮುಕ್ತವಾಗಿಸಿದೆ. ಅವುಗಳನ್ನು ಗ್ರಹಿಸುವ ಹಾಗೂ ಬಳಕೆ ಮಾಡಿಕೊಳ್ಳುವ ಜಾಣ್ಮೆಯನ್ನು ಹೊಂದಬೇಕು ಎಂದರು.
ಆಡಳಿತ ಮಂಡಳಿಯ ಅಧ್ಯಕ್ಷ ಅರವಿ ಬಸವನಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಸ್ಯ ಜಾಲಿ ಬಸವರಾಜ, ಕೆ.ಬಿ.ಶ್ರೀನಿವಾಸರೆಡ್ಡಿ, ಹಾಜರಿದ್ದರು. ಪ್ರಾಚಾರ್ಯ ಡಾ.ಪಿ ಖಗೇಷನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಭಾಗ ಮುಖ್ಯಸ್ಥ ಪ್ರಮೋದಕುಮಾರ ವಂದಿಸಿದರು. ರಾಜಶೇಖರ ಮತ್ತು ಶ್ರೀಷಾ ನಿರೂಪಿಸಿದರು.
ವಿವಿಧ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಹಣಕಾಸು, ಮಾರುಕಟ್ಟೆ, ಮಾನವಸಂಪನ್ಮೂಲ ಹಾಗೂ ಇತರೆ ವಿಷಯಗಳ ಕುರಿತು ಗೋಷ್ಠಿಗಳು ನಡೆದವು, ನಂತರ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.