ADVERTISEMENT

ಅತ್ಯಾಚಾರ ಖಂಡಿಸಿ ಮೌನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2013, 10:10 IST
Last Updated 1 ಜನವರಿ 2013, 10:10 IST
ವಿವಿಧ ಸಂಘಟನೆಗಳು ಹಾಗೂ ಎಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮದಕರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.
ವಿವಿಧ ಸಂಘಟನೆಗಳು ಹಾಗೂ ಎಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮದಕರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.   

ಕೂಡ್ಲಿಗಿ: ಇತ್ತೀಚೆಗೆ ದೆಹಲಿಯಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶವೇ ತಲೆ ತಗ್ಗಿಸುವಂತಹ ಪ್ರಕರಣವಾಗಿದೆ ಎಂದು ಹಿರಿಯ ನಾಗರಿಕ ಕೆ.ಮಲ್ಲಣ್ಣ ತಿಳಿಸಿದರು.

ಯುವತಿಯ ಆತ್ಮಕ್ಕೆ ಶಾಂತಿಯನ್ನು ಕೋರಿ ಸೋಮವಾರ ಪಟ್ಟಣದ ವಿವಿಧ ಸಂಘ-ಸಂಸ್ಥೆಗಳು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ನಡೆಸಿದ ಮೌನ ಮೆರವಣಿಗೆ ಸಭೆಯಲ್ಲಿ ಅವರು ಮಾತನಾಡಿದರು.

ಇಂಥ ಪ್ರಕರಣಕ್ಕೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸುವಂತೆ ಅವರು ಒತ್ತಾಯಿಸಿದರು.

ಸ್ತ್ರೀಯರನ್ನು ಪೂಜ್ಯ ಭಾವನೆಯಿಂದ ಕಾಣುವ ದೇಶದಲ್ಲೇ ಇಂಥ ಅಮಾನವೀಯ ಕೃತ್ಯ ನಡೆದಿರುವುದು ದುರಂತ. ಮಹಿಳೆಯರಿಗೆ ರಕ್ಷಣೆ ಸಿಗುವಂಥ ಕಾನೂನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳ್ಳಲಿ ಎಂದು ಆಗ್ರಹಿಸಿದರು.

ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಅತ್ಯಾಚಾರದಿಂದ ಯುವತಿ ಸಾವನ್ನಪ್ಪಿರುವ ಘಟನೆ ತುಂಬಾ ದುರದೃಷ್ಟಕರ. ಇಂಥ ಘಟನೆ ನಡೆಸಿದವರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದರು.

ಈ ಹಿನ್ನೆಲೆಯಲ್ಲಿ ದೇಶದಲ್ಲಿ ಕಾನೂನು ಬಿಗಿಗೊಳ್ಳಬೇಕು. ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ವಿಶೇಷ ರಕ್ಷಣೆ ನೀಡುವತ್ತ ಸರ್ಕಾರ ಆಲೋಚಿಸಬೇಕೆಂದು ಅವರು ಒತ್ತಾಯಿಸಿದರು.

ಇದಕ್ಕೂ ಮುನ್ನ ಸಂಘ-ಸಂಸ್ಥೆಗಳ ಕಾರ್ಯಕರ್ತರು, ವಿದ್ಯಾರ್ಥಿಗಳು ಪಟ್ಟಣದ ಗಾಂಧೀ ಚಿತಾಭಸ್ಮ ಸ್ಮಾರಕದಿಂದ ಹೊರಟು, ಪ್ರಮುಖ ಬೀದಿಗಳಲ್ಲಿ ಮೌನ ಮೆರವಣಿಗೆ ನಡೆಸಿ, ಮದಕರಿ ನಾಯಕ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು.

ನಂತರ ಸಾವಿಗೀಡಾದ ವಿದ್ಯಾರ್ಥಿನಿ ಆತ್ಮಕ್ಕೆ ಶಾಂತಿ ಕೋರಲಾಯಿತು. ತಹಶೀಲ್ದಾರ್ ಕಚೇರಿಗೆ ತೆರಳಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ರಾಷ್ಟ್ರಪತಿಗಳಿಗೆ ಹಾಗೂ ರಾಜ್ಯಪಾಲರಿಗೆ ತಹಶೀಲ್ದಾರರ ಮುಖಾಂತರ ಮನವಿ ಸಲ್ಲಿಸಲಾಯಿತು.      

ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಎಚ್.ವೀರಣ್ಣ, ವಕೀಲರಾದ ವಿರೂಪಾಕ್ಷಪ್ಪ, ನವಚೈತನ್ಯ ಮಹಿಳಾ ಸಂಘದ ಅಂಗಡಿ ಗೌರಮ್ಮ ಮಾತನಾಡಿದರು.

ವಂದೇ ಮಾತರಂ ಜನಜಾಗೃತಿ ವೇದಿಕೆ ಅಧ್ಯಕ್ಷ ವಿ.ಜಿ. ವೃಷಭೇಂದ್ರ, ಎಐಎಸ್‌ಎಫ್ ಅಧ್ಯಕ್ಷ ಎಂ.ಎಸ್. ಅಮೀರ್, ಉಪಾಧ್ಯಕ್ಷ ಸಂದೀಪ ನಾಯಕ, ಎಚ್.ವೀರಭದ್ರಪ್ಪ, ನವಚೈತನ್ಯ ಮಹಿಳಾ ಸ್ವಸಹಾಯ ಸಂಘದ ಎಂ.ಸುಮಂಗಳಮ್ಮ, ಕೆಪಿಸಿ ಕಲ್ಪನ, ಜಯಮ್ಮ, ಕಸ್ತೂರಮ್ಮ, ಪುಷ್ಪಲತಾ, ಸಿದ್ದಮ್ಮ, ಕಮಲಮ್ಮ, ಕೆ.ಕೆ. ಹಟ್ಟಿಯ ಗಂಡಿ ಮಲಿಯಮ್ಮ, ರೇಣುಕಾ ದೇವಿ, ದುರ್ಗಾಂಬಿಕಾ, ಆಂಜನೇಯ ಸ್ವಾಮಿ ಮಹಿಳಾ ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಪಂಪಾಪತಿ, ಅಜೇಯ, ಪ್ರಶಾಂತ, ರಾಕೇಶ್,ಸಿದ್ಲಿಂಗಪ್ಪ ಹಾಗೂ ಪಟ್ಟಣದ ಎಲ್ಲ ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.