ADVERTISEMENT

ಅರಣ್ಯ ಹಕ್ಕು ಸಮಿತಿ ನಿರ್ಣಯಕ್ಕೆ ಗ್ರಾಮಸ್ಥರ ಆಕ್ರೋಶ

‘ಗಣಿಗುತ್ತಿಗೆ ಪ್ರದೇಶದಲ್ಲಿ ಪಾರಂಪರಿಕ ಬುಡಕಟ್ಟು ಜನ ವಾಸವಿಲ್ಲ’

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 5:35 IST
Last Updated 5 ಅಕ್ಟೋಬರ್ 2017, 5:35 IST

ಸಂಡೂರು: ‘ತಾಲ್ಲೂಕಿನ ದೇವಗಿರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಬ್ರಾಯನಹಳ್ಳಿ ಬಳಿ ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್‌ ಕಂಪೆನಿಗೆ ಮಂಜೂರಾಗಿರುವ ಗಣಿ ಗುತ್ತಿಗೆ ಸಂಖ್ಯೆ 2313 ರ 21.61 ಹೆಕ್ಟೇರ್ ಮತ್ತು ಸಂಪರ್ಕ ರಸ್ತೆಗಾಗಿ ಇದೇ ಗುತ್ತಿಗೆ ಸಂಖ್ಯೆ ಅಡಿ ಮಂಜೂರಾಗಿರುವ 5.83 ಹೆಕ್ಟೇರ್ ಪ್ರದೇಶದಲ್ಲಿ ಪರಿಶಿಷ್ಟ ಪಂಗಡ ಮತ್ತು ಪಾರಂಪರಿಕ ಬುಡಕಟ್ಟು ಜನ ವಾಸವಿಲ್ಲ’ ಎಂದು ಅರಣ್ಯ ಹಕ್ಕು ಸಮಿತಿ ಸಭೆ ನಡೆಸಿ ನಿರ್ಣಯಿಸಿರುವುದು ಕಮ್ಮತ್ತೂರು ಗ್ರಾಮಸ್ಥರನ್ನು ಕೆರಳಿಸಿದೆ.

ಇದೇ ವರ್ಷ ಮಾರ್ಚ್‌ 4ರಂದು ಸಭೆಯಲ್ಲಿ ಕೈಗೊಂಡಿರುವ ನಿರ್ಣಯದ ವಿರುದ್ಧ ಗ್ರಾಮಸ್ಥರು ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಅಭಿವೃದ್ಧಿ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು.

‘ಗಣಿ ಗುತ್ತಿಗೆ ಪ್ರದೇಶದಲ್ಲಿಯೇ ಸುಬ್ರಾಯನಹಳ್ಳಿ, ನಂದಿಹಳ್ಳಿ, ಕಾರ್ತಿಕೇಶ್ವರ ಗ್ರಾಮ, ದೇವಗಿರಿ, ಕಮ್ಮತೂರು ಇದೆ. ಇಲ್ಲಿರುವ ಬಹಳಷ್ಟು ಮಂದಿ ಪರಿಶಿಷ್ಟ ಪಂಗಡದವರು. ಆದರೂ ಸಮಿತಿಯು ಇಲ್ಲಿ ಬುಡಕಟ್ಟು ಜನಾಂಗದವರು ವಾಸವಿವಿಲ್ಲ ಎಂದು ನಿರ್ಣಯಿಸಿರುವುದು ಸರಿಯಲ್ಲ’ ಎಂದು ಗ್ರಾಮದ ಮುಖಂಡರಾದ ಮಾಳ್ಗಿ ಪೆನ್ನಪ್ಪ, ದೊಡ್ಡ ಮಾರೆಣ್ಣ, ಮಲ್ಲೇಶಿ, ಸಾರಣ್ಣ, ಮಲ್ಲಿಕಾರ್ಜುನ, ಕುಮಾರಸ್ವಾಮಿ ಪ್ರತಿಪಾದಿಸಿದರು. ಈ ಕುರಿತು ಚರ್ಚಿಸಲು ವಿಶೇಷ ಗ್ರಾಮ ಸಭೆಯನ್ನು ಶೀಘ್ರ ಗ್ರಾಮದಲ್ಲಿ ಏರ್ಪಡಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಅಹವಾಲು ಇಲ್ಲ:
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ, ‘ಗಣಿ ಗುತ್ತಿಗೆ ಅರಣ್ಯ ಪ್ರದೇಶದಲ್ಲಿ ಬುಡಕಟ್ಟು ಹಾಗೂ ಅರಣ್ಯ ವಾಸಿಗಳು ವಾಸವಾಗಿರುವ ಕುರಿತು ಅಹವಾಲು ಸಲ್ಲಿಕೆಗೆ ಕಾಲಾವಕಾಶವನ್ನು ಕೊಡಲಾಗಿತ್ತು. ಆದರೆ ಯಾವುದೇ ಅಹವಾಲುಗಳು ಸಲ್ಲಿಕೆಯಾಗಲಿಲ್ಲ. ಹೀಗಾಗಿ ಈ ಪ್ರದೇಶದಲ್ಲಿ ಯಾವುದೇ ಬುಡಕಟ್ಟು ಮತ್ತು ಅರಣ್ಯ ವಾಸಿಗಳು ಇಲ್ಲ ಎಂದು ಸಮಿತಿ ಸಭೆಯಲ್ಲಿ ನಿರ್ಣಯಿಸಿ ತಾಲ್ಲೂಕು ಹಾಗೂ ಜಿಲ್ಲಾ ಅರಣ್ಯ ಹಕ್ಕು ಸಮಿತಿಗೆ ಮಾಹಿತಿ ನೀಡಲಾಗಿದೆ’ ಎಂದರು,

7ರಂದು ಸಭೆ: ‘ಗ್ರಾಮಸ್ಥರು ಒತ್ತಾಯಿಸಿರುವುದರಿಂದ 7ರಂದು ವಿಶೇಷ ಗ್ರಾಮಸಭೆಯನ್ನು ಕಮ್ಮತ್ತೂರಿನಲ್ಲಿ ಏರ್ಪಡಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.