ADVERTISEMENT

ಆಲಿಕಲ್ಲು ಮಳೆಗೆ ತತ್ತರಿಸಿದ ಅನ್ನದಾತ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 10:27 IST
Last Updated 5 ಮಾರ್ಚ್ 2014, 10:27 IST

ಕಂಪ್ಲಿ: ಹೋಬಳಿ ವ್ಯಾಪಿ್ತಯ ವಿವಿಧೆಡೆ ಸೋಮವಾರ ಸುರಿದ ಅಕಾಲಿಕ ಮಳೆ, ಭಾರಿ ಬಿರುಗಾಳಿ ಮತ್ತು ಆಲಿಕಲ್ಲು ರಾಶಿಗೆ ಬೇಸಿಗೆಯಲ್ಲಿ ಬೆಳೆದ ನೂರಾರು ಎಕರೆ ಹಿಂಗಾರು ಭತ್ತ, ಬಾಳೆ, ಹತ್ತಿ ಸೇರಿದಂತೆ ವಿವಿಧ ಫಸಲುಗಳಿಗೆ ಹಾನಿಯಾಗಿದ್ದರೆ, ಮನೆಗಳ ಮೇಲ್ಛಾವಣಿ ಕಿತ್ತು ಜೊತೆಗೆ ಕುರಿ, ಕೋಳಿಗಳು ಮೃತಪಟ್ಟು ಅಪಾರ ನಷ್ಟವುಂಟಾದ ಘಟನೆ ಜರುಗಿದೆ.

ಸಮೀಪದ ಮೆಟ್ರಿ, ಜವುಕು, ಗೋನಾಳ, ದೇವಲಾಪುರ, ಸೋಮಲಾಪುರ, ಹಂಪಾದೇವನಹಳ್ಳಿ, ಸುಗ್ಗೇನಹಳ್ಳಿ, ಶ್ರೀರಾಮರಂಗಾಪುರ, ಮಾವಿನಹಳ್ಳಿ, ಹೊನ್ನಳ್ಳಿ, ಸಂಕ್ಲಾಪುರ ಸೇರಿದಂತೆ ಅನೇಕ ಹಳ್ಳಿಗಳಲ್ಲಿ  ಅಕಾಲಿಕ ಆಲಿಕಲ್ಲು ಮಳೆಗೆ ಸುಮಾರು 1180 ಎಕರೆ ಭತ್ತ, 125 ಎಕರೆ ಹತ್ತಿ, 10 ಎಕರೆ ಬಾಳೆ ಹಾಗೂ 50 ಎಕರೆ ತರಕಾರಿ ಬೆಳೆಗೆ ಹಾನಿಯಾಗಿದೆ, ಸುಮಾರು 125 ಕೋಳಿ, 45 ಕುರಿ ಸತ್ತಿವೆ ಎಂದು ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಭತ್ತದ ಬೆಳೆ ಹೂವಾಡಿತೆನೆ ಬಿಡುವ ಹಂತದಲ್ಲಿದ್ದಾಗ ಆಲಿಕಲ್ಲು ಮಳೆ ಹೊಡೆತಕ್ಕೆ ನೆಲಕಚ್ಚಿದೆ. ಹಲವು ಹಳ್ಳಿಗಳಲ್ಲಿ ಮನೆ ಟಿ.ವಿ, ಇನ್‌ವರ್ಟರ್‌, ಎಲೆಕ್ಟ್ರಾನಿಕ್‌ ಉಪಕರಣಗಳು ಸಿಡಿಲಿಗೆ ಹಾಳಾಗಿ ನಷ್ಟ ಸಂಭವಿಸಿದೆ.

ಭೇಟಿ: ಕಂಪ್ಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಇಮಾಮ್ ಬಾಷಾ, ಸಹಾಯಕ ತೋಟಗಾರಿಕೆ ಅಧಿಕಾರಿ ಸೈಯದ್ ಮೆಹಬೂಬ್ ಭಾಷಾ, ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿಗಳು ಮಂಗಳವಾರ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ನಷ್ಟದ ಅಂದಾಜು ಸಿದ್ಧಪಡಿಸುತ್ತಿದ್ದಾರೆ. ಸೋಮವಾರ ಸಂಜೆ ಕಂಪ್ಲಿ ಹೋಬಳಿಯಲ್ಲಿ 46ಮಿ.ಮೀ ಮಳೆಯಾಗಿದೆ. ಅಕಾಲಿಕ ಆಲಿಕಲ್ಲು ಮಳೆ ಬಿರುಗಾಳಿಗೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಪರಿಶೀಲಿಸಿ ಪರಿಹಾರ ನೀಡುವಂತೆ ಅನೇಕ ರೈತರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.