ADVERTISEMENT

ಉಪ ಅಂಚೆ ಕಚೇರಿ ದುಸ್ಥಿತಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 7:05 IST
Last Updated 22 ಜನವರಿ 2011, 7:05 IST

ಕೊಟ್ಟೂರು: ‘ಬಳ್ಳಾರಿ, ಹೊಸಪೇಟೆ ಬಿಟ್ಟರೆ ಹೆಚ್ಚು ವಹಿವಾಟು ನಡೆಯುವುದು ಕೊಟ್ಟೂರು ಉಪ ಅಂಚೆ ಕಚೇರಿಯಲ್ಲಿ. ಜಿಲ್ಲೆಯಲ್ಲೇ ಇದು ಮೂರನೇ ಸ್ಥಾನದಲ್ಲಿದೆ’ ಎಂದು ಅಂಚೆ ಸಿಬ್ಬಂದಿ ಎದೆಯುಬ್ಬಿಸಿ ಹೇಳ್ತಾರೆ.ಆದರೆ, ವಾಣಿಜ್ಯ, ಶೈಕ್ಷಣಿಕ, ಧಾರ್ಮಿಕ ಕೇಂದ್ರ ಕೊಟ್ಟೂರಿನ ಉಪ ಅಂಚೆ ಕಚೇರಿಗೆ ಸ್ವಂತದ್ದೊಂದು ಕಟ್ಟಡವಿಲ್ಲ.

ಇಲ್ಲಿನ ಅಂಚೆ ಕಚೇರಿ ಇತಿಹಾಸ ನಿಜಕ್ಕೂ ರೋಚಕವಾಗಿದೆ. ಆಗಿನ್ನೂ ಕೊಟ್ಟೂರು ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. ಬ್ರಿಟೀಷರ ಆಳಿತವಿದ್ದ ಕಾಲ. 1892ರಲ್ಲಿ ಬ್ರಿಟೀಷರೇ ಸಣ್ಣದೊಂದು ಅಂಚೆ ಕಚೇರಿ ಆರಂಭಿಸಿದ್ದರು. ಇದು ಅನಂತಪುರ ಜಿಲ್ಲೆ ಗುಂತಕಲ್ಲುಗೆ ಸೇರಿತ್ತು.ಅಂದರೆ, ಈ ಅಂಚೆ ಕಚೇರಿ ಹುಟ್ಟಿ ಶತಮಾನವೇ ಆಗಿದೆ. ಅಲ್ಲಿಂದ ಈವರೆಗೂ ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿದೆ.

1982ರಲ್ಲಿ ಇಲ್ಲಿನ ಎಪಿಎಂಸಿ ಆವರಣದಲ್ಲಿ  ಅಂಚೆ ಕಟ್ಟಡಕ್ಕಾಗಿಯೇ ಸರ್ಕಾರ ಖಾಲಿ ನಿವೇಶನ ನೀಡಿತು. ಅಲ್ಲಿ ಅಂಚೆ ಕಚೇರಿ ಕಟ್ಟಡ ಮೇಲೆಳಲೇ ಇಲ್ಲ. ಕಟ್ಟಡ ಕಟ್ಟದಿದ್ದರೆ ನಿಮಗೇಕೆ ಎಂದು ನವೆಂಬರ್ 8, 2010ರಲ್ಲಿ ಎಪಿಎಂಪಿ ನಿವೇಶನವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಅಂಚೆ ಕಚೇರಿಗೆ ನೋಟಿಸ್ ನೀಡಿತು.ಆಗ ಎಚ್ಚೆತ್ತುಕೊಂಡ ಅಂಚೆ ಇಲಾಖೆ ಎಪಿಎಂಸಿ ನೀಡಿದ ಜಾಗವನ್ನು ಸರ್ವೇ ಮಾಡಿಸಿ ಬೋರ್ಡ್ ಹಾಕಿದೆ.

ಜಿಲ್ಲೆಯಲ್ಲಿಯೇ ವಹಿವಾಟಿನಲ್ಲಿ ಮೂರನೇ ಸ್ಥಾನದಲ್ಲಿರುವ ಅಂಚೆ ಉಪ ಕಚೇರಿಗೆ ಪಟ್ಟಣದಲ್ಲಿ ಎರಡು ಕಚೇರಿಗಳಿವೆ. ಅದು ಬಿಟ್ಟು ಸುಮಾರು ಇಪ್ಪತ್ತು ಹಳ್ಳಿಗಳಿರುವ ಸಣ್ಣ ಅಂಚೆ ಕಚೇರಿಗಳು ಇಲ್ಲಿಗೆ ಸೇರುತ್ತವೆ. ತಿಂಗಳಿಗೆ ಏನಿಲ್ಲವೆಂದರೂ ನಾಲ್ಕರಿಂದ ಐದು ಕೋಟಿ ರೂಪಾಯಿ ವ್ಯವಹಾರ ಇಲ್ಲಿ ನಡೆಯುತ್ತದೆ. ಆದಾಗ್ಯೂ ಸ್ವಂತ ಕಟ್ಟಡದ ಅಭಾವದಿಂದ ಬಳಲುತ್ತಿದೆ.

ಈ ಅಂಚೆ ಕಚೇರಿಗೆ ಕಳೆದ ಮೂರು ವರ್ಷಗಳಿಂದ ಖಾಯಂ ಪೋಸ್ಟ್‌ಮಾಸ್ಟರ್ ಇಲ್ಲ. ಮಳೆ ಬಂದಾಗ ಹಲವೆಡೆ ಸೋರುತ್ತದೆ. ಕಂಪ್ಯೂಟರ್‌ಗಳನ್ನಿಡಲು ಜಾಗವೇ ಇಲ್ಲ. ಗ್ರಾಹಕರಿಗೆ ಕೂಡಲೂ ಜಾಗವಿಲ್ಲ. ಹೀಗೆ ಕಚೇರಿಯಲ್ಲಿ ಅನೇಕ ಸಮಸ್ಯೆಗಳಿವೆ.

ಎಪಿಎಂಪಿಗೆ ಸೇರಿದ ಈ ಅಂಚೆ ಕಚೇರಿಉ ಕಟ್ಟಡವನ್ನು ದುರಸ್ತಿ ಮಾಡಲಾಗುತ್ತಿಲ್ಲ. ಈ ನಡುವೆ ಅಂಚೆ ಕಚೇರಿಯ ಖಾಲಿ ನಿವೇಶವದಲ್ಲಿ ಒತ್ತುವರಿ ಮಾಡಲಾಗಿದೆ.
ಜನಪ್ರತಿನಿಧಿಗಳೂ ಈ ಅಂಚೆ ಕಟ್ಟಡ ಕುರಿತು ದಿವ್ಯ ಮೌನ ವಹಿಸಿದ್ದಾರೆ.

ಪಟ್ಟಣದ ಸಂಘ ಸಂಸ್ಥೆಗಳು ಅಂಚೆ ಕಚೇರಿ ಮುಖ್ಯಸ್ಥರಿಗೆ ಸ್ವಂತ ಕಟ್ಟಡ ಕಟ್ಟಿಸಿಕೊಳ್ಳಿ ಎಂದು ಒತ್ತಾಯಿಸುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.