ADVERTISEMENT

ಎಲ್ಲಿ ನಿಂತರೂ ಗೆಲ್ಲುವ ನಾಗೇಂದ್ರ!

ಬಳ್ಳಾರಿ ಗ್ರಾಮೀಣದಲ್ಲಿ ಮತ್ತೆ ಕಾಂಗ್ರೆಸ್‌ ಅಲೆ

​ಪ್ರಜಾವಾಣಿ ವಾರ್ತೆ
Published 16 ಮೇ 2018, 10:28 IST
Last Updated 16 ಮೇ 2018, 10:28 IST

ಬಳ್ಳಾರಿ: ಕೂಡ್ಲಿಗಿಯಲ್ಲಿ ಒಮ್ಮೆ ಬಿಜೆಪಿಯಿಂದ ಮತ್ತೊಮ್ಮೆ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಬಿ.ನಾಗೇಂದ್ರ, ಏಕಕಾಲಕ್ಕೆ ಪಕ್ಷ ಮತ್ತು ಕ್ಷೇತ್ರವನ್ನು ತೊರೆದು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಇದು ಅವರ ಸತತ ಮೂರನೇ ಗೆಲುವು. ಪಕ್ಷ ಬಿಟ್ಟರೂ, ಕ್ಷೇತ್ರ ಬಿಟ್ಟರೂ, ಎಲ್ಲಿ ಸ್ಪರ್ಧಿಸಿದರೂ ಗೆಲ್ಲುವೆ’ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.

ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬಿಜೆಪಿಯ ಭದ್ರಕೋಟೆ ಎನ್ನಿಸಿದ್ದ ಈ ಕ್ಷೇತ್ರ 2014ರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಾಲಾಗಿತ್ತು. ಆ ಪರಂಪರೆ ಪ್ರಸಕ್ತ ಚುನಾವಣೆಯಿಂದ ಮತ್ತೆ ಮುಂದುವರಿದಂತಾಗಿದೆ.

ಚುನಾವಣೆ ಘೋಷಣೆಗೂ ಮುನ್ನವೇ, ಸಂಸದ ಬಿ.ಶ್ರೀರಾಮುಲು ಅವರಿಂದ ಬಿಜೆಪಿಯ ನಿಯೋಜಿತ ಅಭ್ಯರ್ಥಿ ಎಂದು ಕರೆಸಿಕೊಂಡರು ಪ್ರಚಾರ ನಡೆಸಿದ್ದ ಎಸ್‌.ಪಕ್ಕೀರಪ್ಪ ಸಮೀಪ ಸ್ಪರ್ಧೆ ನೀಡಿಯೂ ವಿಫಲರಾಗಿದ್ದಾರೆ, ರಾಯಚೂರಿನ ಮಾಜಿ ಸಂಸದರಾದ ಅವರು ಇದೇ ಕ್ಷೇತ್ರದವರಾದರೂ, ಚುನಾವಣೆಯಲ್ಲಿ ಮತದಾರರು ಹೊರಕ್ಕೆ ಕಳಿಸಿದ್ದಾರೆ.

ADVERTISEMENT

ಈ ಇಬ್ಬರು ಘಟಾನುಘಟಿಗಳ ನಡುವೆ ಇದ್ದೂ ಇಲ್ಲದಂತಿದ್ದ ಜೆಡಿಎಸ್‌ನ ಡಿ.ರಮೇಶ್‌, ಠೇವಣಿ ಕಳೆದುಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತಿರುವ ನಾಗೇಂದ್ರ, ಅದರಿಂದ ಹೊರಬರುವ ಸಲುವಾಗಿಯೇ ಕಾಂಗ್ರೆಸ್‌ ಸೇರಿದ್ದರು ಎಂಬ ಪ್ರತಿಪಾದನೆಯೂ ನಡೆದಿತ್ತು.

ವಿಪರ್ಯಾಸವೆಂದರೆ 2014ರ ಉಪಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಎನ್‌.ವೈ.ಗೋಪಾಲಕೃಷ್ಣ, ನಾಗೇಂದ್ರ ಅವರಂತೆಯೇ ಏಕಕಾಲಕ್ಕೆ ಪಕ್ಷ ಮತ್ತು ಕ್ಷೇತ್ರ ಬದಲಿಸಿ ಕೂಡ್ಲಿಗಿಯಲ್ಲಿ ಬಿಜೆಪಿಯಿಂದ ಗೆದ್ದಿದ್ದಾರೆ. ಅಲ್ಲಿದ್ದವರು ಇಲ್ಲಿ, ಇಲ್ಲಿದ್ದವರು ಅಲ್ಲಿ ಗೆದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.