ADVERTISEMENT

ಕಡಲೆ ಬೆಳೆಗೆ ತುಕ್ಕು ರೋಗ: ಆತಂಕ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 5:51 IST
Last Updated 28 ಡಿಸೆಂಬರ್ 2017, 5:51 IST

ಸಿರುಗುಪ್ಪ : ತಾಲ್ಲೂಕಿನಲ್ಲಿ ರೈತರು ಬೆಳೆದಿರುವ ಕಡಲೆ ಬೆಳೆಗೆ ತುಕ್ಕು ರೋಗ ಕಂಡು ಬಂದಿದ್ದು ರೈತರಲ್ಲಿ ಆತಂಕ ಮೂಡಿಸಿದೆ.

ತಾಲ್ಲೂಕಿನ ನದಿ ಮತ್ತು ಕಾಲುವೆ ವ್ಯಾಪ್ತಿಯ ರೈತರು ಮಿತ ನೀರು ಬಯಸುವ ಕಡಲೆ ಬೆಳೆದಿದ್ದಾರೆ. 60 ದಿನಗಳ ಬೆಳೆಯಾದ ಕಡಲೆಗೆ ಎಲೆಗಳು ಕ್ರಮೇಣ ಕೆಂಪು ವರ್ಣಕ್ಕೆ ತಿರುಗಿ ಸಂಪೂರ್ಣ ಒಣಗಿ ಹೋಗುತ್ತಿದೆ. ಈ ರೋಗ ಬೆಳೆಗೆಲ್ಲಾ ವ್ಯಾಪಿಸಿಕೊಳ್ಳುತ್ತಿದ್ದು, ಕಾಯಿ ಕಟ್ಟುವ ಹಂತದಲ್ಲಿ ಒಣಗುತ್ತಿರುವುದರಿಂದ ರೈತರು ಚಿಂತಕ್ರಾಂತರಾಗಿದ್ದಾರೆ.

ತಾಲ್ಲೂಕಿನ ಕಡಲೆ ಬೆಳೆದ ರೈತರ ಜಮೀನಿಗೆ ಬುಧವಾರ ಭೇಟಿ ನೀಡಿದ ಕೃಷಿ ವಿಜ್ಞಾನಿ ಡಾ.ಬಸವಣ್ಣೆಪ್ಪ ಬೆಳೆ ಪರಿಶೀಲಿಸಿ, ಈ ಬೆಳೆಯು ಮೊಗ್ಗು ಮತ್ತು ಕಾಯಿ ಕಚ್ಚುವ ಹಂತದಲ್ಲಿದೆ. ಅಲ್ಲಲ್ಲಿ ತುಕ್ಕುರೋಗ ಕಂಡು ಬಂದಿದ್ದು, ಶಿಲೀಂಧ್ರದಿಂದ ವ್ಯಾಪಿಸಿದೆ. ರೈತರೆಲ್ಲರು ಸಾಮೂಹಿಕವಾಗಿ ಹತೋಟಿ ಕ್ರಮಕೈಗೊಳ್ಳದೆ ಇದ್ದಲ್ಲಿ ಗಾಳಿ, ನೀರಿನ ಮೂಲಕ ಬೆಳೆಯಿಂದ ಬೆಳೆಗೆ ಹರಡಲಿದೆ ಎಂದು ರೈತರಿಗೆ ಮಾಹಿತಿ ನೀಡಿದರು.

ADVERTISEMENT

ರೋಗ ಹತೋಟಿಗಾಗಿ ರೈತರು ಪ್ರತಿ ಲೀಟರ್ ನೀರಿಗೆ 1 ಮಿ.ಲೀ ಹೆಕ್ಷಾಕೊನೋಜೋಲ್ ಶಿಲೀಂಧ್ರನಾಶಕ ಅಥವಾ 1 ಗ್ರಾಂ. ಹೆಕ್ಷಾಕೊನೋಜೋಲ್ + ಝೈನೆಬ್ ಸಂಯುಂಕ್ತ ಶಿಲೀಂಧ್ರನಾಶಕವನ್ನು ನೀರಿನಲ್ಲಿ ಬೆರಸಿ ಸಿಂಪರಣೆ ಮಾಡುವುದರಿಂದ ರೋಗ ನಿಂಯಂತ್ರಿಸಬಹುದು, ಅಲ್ಲಲ್ಲಿ ಹಳದಿ ಬಣ್ಣದ ಗಿಡಗಳು ಕಂಡು ಬಂದರೆ 10 ರಿಂದ 15 ದಿವಸಗಳ ಅಂತರದಲ್ಲಿ ಪ್ರತಿ ಎಕರೆಗೆ ಒಂದು ಕೆ.ಜಿ ಯೂರಿಯಾ ಅಥವಾ 19:19:19 ರಾಸಾಯನಿಕ ಗೊಬ್ಬರವನ್ನು ಹಾಕುವುದರಿಂದ ಎಲೆ ಹಳದಿ ಆಗುವುದನ್ನು ತಡೆಗಟ್ಟಬಹುದು ಎಂದು ಸಲಹೆ ನೀಡಿದರು.

ಹಸಿರು ಕೀಟಭಾದೆ ಕಂಡುಬಂದಲ್ಲಿ ಈ ಕೀಟಗಳ ನಿವಾರಣೆಗಾಗಿ ಪ್ರತಿ ಲೀಟರ್ ನೀರಿಗೆ 2.0 ಗ್ರಾಂ ಮೆಟಾರ್ಯಜಿಯಂ ಅನಿಸಿಪ್ಲಯೇ, ಅಥವಾ 0.07 ಮಿ.ಲೀ. ಪ್ಲೂಬೆಂಡಿಮೈಡ್ 48 ಎಸ್.ಸಿ. ಅಥವಾ 0.2 ಗ್ರಾಂ. ಎಮಾಮೆಕ್ಟಿನ ಬೆಂಜೋಯಟ್ 5 ಎಸ್.ಜಿ. ಅಥವಾ 0.25 ಮಿ.ಲೀ ಕ್ಲೊರೆಂಟ್ರಿನಿಲ್ ಪೊಲ್ 18.5 ಎಸ್.ಸಿ. ಅಥವಾ 0.5 ಮಿ. ಲೀ ಲ್ಯಾಂಬ್ಡಾ ಸ್ಯಲೋಥ್ರಿನ್ 5 ಎಸ್.ಸಿ. ಅಥವಾ 1 ಮಿ.ಲೀ. ಪ್ರೊಫೆನೊಪಾಸ + ಸೈಪ್ರಮೇಥ್ರಿನ್ 505 ಇವುಗಳಲ್ಲಿ ಯಾವುದಾದರೂ ಒಂದನ್ನು ಸಿಂಪಡಿಸುವುದರಿಂದ ಕೀಟ ನಿಯಂತ್ರಿಸ
ಬಹುದು ಎಂದು ತಿಳಿಸಿದರು.

ಮಣ್ಣು ವಿಜ್ಞಾನಿ ಅಶೋಕ ಗಡ್ಡಿ, ರೈತರಾದ ಪಡಿವೆಂಕೋಬ, ನಾಗರಾಜ, ಚಂದ್ರ, ಕಾಸಯ್ಯ, ಷಣ್ಮುಖ, ಮಲ್ಲಯ್ಯ, ವೆಂಕಣ್ಣ, ಮಹಮ್ಮದಿ, ಶರ್ಮಾಸ, ಗೊಲ್ಲರ ನಾಗರಾಜ, ರೌಫ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.