ಕೂಡ್ಲಿಗಿ: ‘ಮಹಿಳೆ ತನಗೆ ಎಷ್ಟೇ ಕಷ್ಟವಿದ್ದರೂ ಕುಟುಂಬದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬಲ್ಲಳು’ ಎಂದು ಮುಖ್ಯ ಶಿಕ್ಷಕಿ ಎಚ್. ಇಂದಿರಾ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಕೋರಕಣದಲ್ಲಿ ಪ್ರಣತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬಸವ ಜ್ಯೋತಿ ಹಾಗೂ ಸೊಲ್ಲಮ್ಮ ಸ್ವ ಸಹಾಯ ಸಂಘಗಳಿಂದ ಜಂಟಿಯಾಗಿ ಭಾನುವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
‘ಪ್ರಸ್ತುತ ನಾಗಲೋಟದ ಬದುಕಿನಲ್ಲಿ ಮಹಿಳೆ ಎಲ್ಲಾ ರಂಗಗಳಲ್ಲೂ ತೊಡಗಿಕೊಂಡು ಯಶಸ್ವಿಯಾಗಿದ್ದಾಳೆ. ವೈಜ್ಞಾನಿಕವಾಗಿ ಮುಂದುವರಿದಿರುವ ಅನೇಕ ಮಹಿಳೆಯರು ಪುರುಷರಿಗೆ ಸರಿಸಮನಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಸ್ವಸಹಾಯ ಸಂಘಗಳನ್ನು ಕಟ್ಟಿಕೊಂಡು, ಅದರ ಮೂಲಕ ಆರ್ಥಿಕ ಸಹಾಯ ಪಡೆದು ಸ್ವಾವಲಂಬಿಗಳಾಗುತ್ತಿದ್ದಾರೆ’ ಎಂದರು.
ಎಪಿಎಂಸಿ ಉಪಾಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ ಮಾತನಾಡಿ, ‘ ಸ್ವ ಸಹಾಯ ಸಂಘಗಳು ಮಹಿಳೆಯರಿಗೆ ಆರ್ಥಿಕ ಶಸಕ್ತಗೊಳಿಸುತ್ತಿವೆ. ಸಂಘಗಳಿಂದ ಆರ್ಥಿಕ ನರವು ಪಡೆದುಕೊಂಡು ಸ್ವ ಉದ್ಯೋಗವನ್ನು ಕಂಡು ಕೊಳ್ಳುತ್ತಿದ್ದಾರೆ’ ಎಂದರು.
ಪಟ್ಟಣ ಪಂಚಾಯ್ತಿ ಸದಸ್ಯೆ ಅಮೃತಮ್ಮ ಉದ್ಘಾಟಿಸಿದರು. ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಡಗಲಿ ವೀರಭದ್ರಪ್ಪ, ಮುಖಂಡರಾದ ಗುಳಿಗಿ ನಾಗಮ್ಮ, ಕ್ಯಾರಿ ರಮೇಶ್, ಬುಟ್ಟ ತಿಪ್ಪೇಸ್ವಾಮಿ, ಕುಮಾರ ಸ್ವಾಮಿ, ಭೂಚೇತನ ಇಕ್ರೀಸ್ಯಾಟ್ ತಾಂತ್ರಿಕ ಅಧಿಕಾರಿ ಕೆ. ಗಂಗಾ, ಲೀಲಾವತಿ, ವನಜಾಕ್ಷಿ, ಎಚ್. ಶಾಂತಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.