ADVERTISEMENT

ಕೃಷ್ಣಾನಗರ ಕೋಟೆಯ ಹೊಂಡದಲ್ಲಿ ಹಕ್ಕಿಗಳ ಕಲರವ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 9:29 IST
Last Updated 3 ಜನವರಿ 2014, 9:29 IST
ಸಂಡೂರಿನ ಹೊರ ವಲಯದಲ್ಲಿನ ಕೃಷ್ಣಾನಗರ ಕೋಟೆಯ ಪಕ್ಕದಲ್ಲಿನ ಬಿದಿರಿನ ಮೆಳೆ ಮತ್ತು ಹೊಂಡದಲ್ಲಿನ ಗಿಡಗಂಟಿಗಳನ್ನೇ ತಮ್ಮ ವಾಸಸ್ಥಾನ ಮಾಡಿಕೊಂಡಿರುವ ಬೆಳ್ಳಕ್ಕಿ, ಗೊರವಂಕ ಮುಂತಾದ ಪಕ್ಷಿಗಳು ಸಂಜೆ ಸಮಯದಲ್ಲಿ ಕಂಡ ಕ್ಷಣಗಳು ಇಲ್ಲಿವೆ...
ಸಂಡೂರಿನ ಹೊರ ವಲಯದಲ್ಲಿನ ಕೃಷ್ಣಾನಗರ ಕೋಟೆಯ ಪಕ್ಕದಲ್ಲಿನ ಬಿದಿರಿನ ಮೆಳೆ ಮತ್ತು ಹೊಂಡದಲ್ಲಿನ ಗಿಡಗಂಟಿಗಳನ್ನೇ ತಮ್ಮ ವಾಸಸ್ಥಾನ ಮಾಡಿಕೊಂಡಿರುವ ಬೆಳ್ಳಕ್ಕಿ, ಗೊರವಂಕ ಮುಂತಾದ ಪಕ್ಷಿಗಳು ಸಂಜೆ ಸಮಯದಲ್ಲಿ ಕಂಡ ಕ್ಷಣಗಳು ಇಲ್ಲಿವೆ...   

ಸಂಡೂರು: ಬೆಳಕು ಹರಿದಾಗ, ಸಂಜೆ ಆವರಿಸ ತೊಡಗಿದಾಗ ಬೆಳ್ಳಕ್ಕಿ, ಗೊರವಂಕ, ಗಿಳಿ ಮುಂತಾದ ಪಕ್ಷಿಗಳ ಹಾರಾಟ, ಕಲರವ ನೋಡುಗರಿಗೆ ಹಾಗೂ ಕೇಳುಗರಿಗೆ ಅಮಿತಾನಂದವನ್ನು ನೀಡುತ್ತದೆ. ಇಂಥ ಸನ್ನಿವೇಶ ನಮಗೆ ಕಂಡು ಬರುವುದು ಸಂಡೂರಿಗೆ ಹೊಂದಿಕೊಂಡಿರುವ ಕೃಷ್ಣಾನಗರದ ಐತಿಹಾಸಿಕ ಕೋಟೆಯ ಪಕ್ಕದಲ್ಲಿನ ನೀರಿನ ಹೊಂಡದಲ್ಲಿ ಬೆಳೆದ ಗಿಡಗಂಟಿಗಳಲ್ಲಿ.

ಹೈದರಾಲಿಯಿಂದ ಪ್ರಾರಂಭಗೊಂಡು, ಟಿಪ್ಪುಸುಲ್ತಾನ್‌ನಿಂದ ಪೂರ್ಣಗೊಂಡಿರುವ ಇಲ್ಲಿನ ಐತಿಹಾಸಿಕ ಕೃಷ್ಣಾನಗರ ಕೋಟೆಯ ಸುತ್ತಲಿನ ಕಂದಕದಲ್ಲಿ ಬೆಳೆದಿರುವ ಗಿಡಗಂಟಿಗಳು ಮತ್ತು ಬೆಳೆದು ವಿನಾಶದ ಅಂಚಿಗೆ ತಲುಪಿರುವ ಬಿದಿರಿನ ಪೊದೆ ಇಲ್ಲಿಗೆ ಬರುವ ಪಕ್ಷಿಗಳಿಗೆ ಆಶ್ರಯವನ್ನು ಒದಗಿಸಿದೆ. ಇಲ್ಲಿ ಬೆಳ್ಳಕ್ಕಿಗಳು, ಗೊರವಂಕಗಳು ಹೆಚ್ಚಾಗಿ ಕಂಡರೆ, ಅವುಗಳ ಜೊತೆಗೆ ಗಿಳಿಗಳು ಅಲ್ಪ ಪ್ರಮಾಣದಲ್ಲಿ ಕಂಡು ಬರುತ್ತವೆ.

ಬೆಳಕು ಹರಿದಾದ ಮೇಲೆ ಆಹಾರ ಹುಡುಕಿಕೊಂಡು ಹೋಗುವ ಪಕ್ಷಿಗಳು ಸಂಜೆಯಾಯಿತೆಂದರೆ ತಮ್ಮ ವಾಸ ಸ್ಥಾನಕ್ಕೆ ಮರಳುತ್ತವೆ. ಹೀಗಾಗಿ ನಸುಕಿನಲ್ಲಿ ಹಾಗೂ ಸಂಜೆಯಲ್ಲಿ ಈ ಪ್ರದೇಶದಲ್ಲಿ ಪಕ್ಷಿಗಳನ್ನು ನೋಡುವುದೇ ಮಹದಾನಂದ. ಈ ಪ್ರದೇಶದ ಸುತ್ತಲಿರುವ ಗುಡ್ಡ ಪ್ರದೇಶ, ಹೊಲ ತೋಟಗಳು ಇಲ್ಲಿನ ಪಕ್ಷಿಗಳಿಗೆ ಅಗತ್ಯವಾದ ಆಹಾರವನ್ನು ಪೂರೈಸುತ್ತವೆ. ಕಂದಕದಲ್ಲಿ ಸಂಗ್ರಹವಾದ ನೀರು ಮತ್ತು ಪಕ್ಕದಲ್ಲಿ ಇರುವ ನಾರಿಹಳ್ಳ ಜಲಾಶಯ ಈ ಪಕ್ಷಿಗಳ ನೀರಿನ ದಾಹವನ್ನು ನೀಗಿಸುವಲ್ಲಿ ಸಹಕಾರಿಯಾಗಿವೆ.

ನಸುಕಿನಲ್ಲಿ ಮತ್ತು ಸಂಜೆ ಸಮಯದಲ್ಲಿ ಇಲ್ಲಿ ಹಾರಾಡುವ ವಿವಿಧ ಜಾತಿಯ ಪಕ್ಷಿಗಳು ಮತ್ತು ಅವುಗಳ ಕಲರವ ನೋಡುಗರಿಗೆ ಅವರ್ಣನೀಯ ಆನಂದವನ್ನು ನೀಡುವುದಲ್ಲದೆ, ಸುತ್ತಲಿನ ಪರಿಸರವನ್ನು ಚೇತೋಹಾರಿಯಾಗಿ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT