ADVERTISEMENT

ಕೊಪ್ಪಳದಿಂದ ಸ್ಪರ್ಧೆ: ಕೊಂಡಯ್ಯ ಇಂಗಿತ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 5:31 IST
Last Updated 18 ಡಿಸೆಂಬರ್ 2013, 5:31 IST

ಕಂಪ್ಲಿ: ‘ಕಳೆದ 40ವರ್ಷಗಳಿಂದ ಕಾಂಗ್ರೆಸ್‌ ಪಕ್ಷ ಸಂಘಟನೆಗಾಗಿ ಶ್ರಮಿಸುತ್ತಾ ಬಂದಿರುವೆ. ಆದರೆ ಕೆಲವೇ ವರ್ಷಗಳ ಹಿಂದೆ ನಮ್ಮ ಪಕ್ಷಕ್ಕೆ ವಲಸೆ ಬಂದವರು ನನಗೆ ತೊಡಕು ಉಂಟು ಮಾಡಿ ತಾವು ಬೆಳೆಯಲು ಹವಣಿಸುತ್ತಿದ್ದಾರೆ’ ಎಂದು ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಕಂಪ್ಲಿ ಪಟ್ಟಣಕ್ಕೆ ಬಂದಿದ್ದ ಅವರು ಪತ್ರಿಕಾಗೋಷ್ಠಿಯಲ್ಲಿ ಬಳ್ಳಾರಿ ಶಾಸಕ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರ ಹೆಸರು ಹೇಳದೆ ಪರೋಕ್ಷವಾಗಿ ಈ ಮೇಲಿನಂತೆ ಹೇಳಿದರು.

ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಇದ್ದ ಭಯಾನಕ ವಾತಾವರಣ ಸದ್ಯ ಕಾಂಗ್ರೆಸ್‌ ಆಡಳಿತದಿಂದ ದೂರವಾಗಿದ್ದು, ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಅಭಿವೃದ್ಧಿಯೇ ಕಾಂಗ್ರೆಸ್‌ ಮೂಲ ಮಂತ್ರ ಎಂದ ಅವರು ಸ್ಥಳೀಯ ಪುರಸಭೆಯಲ್ಲಿ ಕಾಂಗ್ರೆಸ್‌ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ಇದ್ದು, ಇದಕ್ಕಾಗಿ ಪ್ರಯತ್ನಿಸುವೆ ಎಂದು ಹೇಳಿದರು.

ಪಟ್ಟಣದ ಕಾಂಗ್ರೆಸ್‌ ಮುಖಂಡರಲ್ಲಿ ಭಿನ್ನಾಭಿಪ್ರಾಯ ಇರುವ ಕುರಿತು ಕೇಳಿದ ಪ್ರಶ್ನೆಗೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಪಡೆದ ಅಭ್ಯರ್ಥಿ ಪಕ್ಷದ ಎಲ್ಲಾ ಮುಖಂಡರನ್ನು ಕಾರ್ಯಕರ್ತರನ್ನು ವಿಶ್ವಾಸಕ್ಕತೆ ತೆಗೆದುಕೊಂಡು ಮುನ್ನೆಡೆಯಬೇಕಿತ್ತು ಎಂದಷ್ಟೇ ಉತ್ತರಿಸಿದರು.

ನೇಕಾರ ಸಮುದಾಯದ 27 ಒಳ ಪಂಗಡಗಳನ್ನು ಒಗ್ಗೂಡಿಸಿ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಜಾತಿ ಜನಗಣತಿಯಲ್ಲಿ ನೇಕಾರ ಎಂದು ನಂತರ ಉಪ ಜಾತಿ ಬರೆಸುವಂತೆ ನೇಕಾರರಲ್ಲಿ ಮನವಿ ಮಾಡಿದರು.

ಡಿಸಿಸಿ ಉಪಾಧ್ಯಕ್ಷ ಎಂ. ಸುಧೀರ್,  ಪುರಸಭೆ ಸದಸ್ಯರಾದ ಬಿ. ನಾಗರಾಜ, ಎಸ್. ಸುರೇಶ್, ಸಿ.ಆರ್. ಹನುಮಂತ, ಭಟ್ಟ ಪ್ರಸಾದ್, ಎಂ. ರಾಜೇಂದ್ರಕುಮಾರಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಜೆ.ಜಿ. ಬಸವರಾಜ್, ಸೈಯ್ಯದ್ ಉಸ್ಮಾನ್, ಟಿ. ಸತ್ಯನಾರಾಯಣ, ಬಿ. ನಾಗೇಶ್ವರರಾವ್, ಜಾಫರ್, ಎ. ರೇಣುಕಪ್ಪ, ವಿರುಪಣ್ಣ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.