ADVERTISEMENT

ಗುಂಡುಮುಣುಗು:ಕುಡಿಯುವ ನೀರಿಗೆ ಬವಣೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 6:45 IST
Last Updated 30 ಡಿಸೆಂಬರ್ 2017, 6:45 IST
ಕೂಡ್ಲಿಗಿ ತಾಲ್ಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗಿದ್ದು, ಕೊಳವೆ ಬಾವಿಯಲ್ಲಿ ಬರುವ ಅಲ್ಪ ಸ್ವಲ್ಪ ನೀರನ್ನು ಹಿಡಿಯಲು ಮುಗಿ ಬಿದ್ದಿರುವ ಮಹಿಳೆಯರು
ಕೂಡ್ಲಿಗಿ ತಾಲ್ಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗಿದ್ದು, ಕೊಳವೆ ಬಾವಿಯಲ್ಲಿ ಬರುವ ಅಲ್ಪ ಸ್ವಲ್ಪ ನೀರನ್ನು ಹಿಡಿಯಲು ಮುಗಿ ಬಿದ್ದಿರುವ ಮಹಿಳೆಯರು   

ಎ.ಎಂ. ಸೋಮಶೇಖರಯ್ಯ

ಕೂಡ್ಲಿಗಿ: ತಾಲ್ಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗಿದೆ. ಜನರು ನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ದಿನವಿಡೀ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗುಂಡುಮುಣುಗು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈ ಗ್ರಾಮ ಸುಮಾರು 2500 ಜನಸಂಖ್ಯೆ ಹೊಂದಿದೆ. ಮೂವರು ಪಂಚಾಯ್ತಿ ಸದಸ್ಯರಿದ್ದಾರೆ. ಕಳೆದ ಬೇಸಿಗೆಯಲ್ಲಿ ಕಾಣಿಸಿಕೊಂಡಿದ್ದ ನೀರಿನ ಸಮಸ್ಯೆ ಮಳೆಗಾಲದಲ್ಲೂ ಮುಂದುವರಿದು, ಈಗ ಮತ್ತಷ್ಟು ಬಿಗಾಯಿಸಿದೆ.

ADVERTISEMENT

ಇದುವರೆಗೂ ಕೊರೆಸಿದ 5 ಕೊಳವೆ ಬಾವಿಗಳೂ ವಿಫಲವಾಗಿದೆ. ಎರಡು ಮೇಲ್ಮಟ್ಟದ ಜಲ ಸಂಗ್ರಹಗಾರಗಳು, 5 ಮಿನಿ ನೀರಿನ ಟ್ಯಾಂಕ್ ಹಾಗೂ 20ಕ್ಕೂ ಹೆಚ್ಚು ಸಾರ್ವಜನಿಕ ನಳಗಳು ಸೇರಿ ಗ್ರಾಮದಲ್ಲಿ ಸ್ಥಾಪನೆ ಮಾಡಿರುವ ಶುದ್ಧ ನೀರಿನ ಘಟಕಗಳೂ ಕೂಡ ನೀರಿಲ್ಲದೆ ವ್ಯರ್ಥವಾಗಿ ನಿಂತಿವೆ.

ಸದ್ಯ ಗ್ರಾಮದ ಬಳಿಯಿರುವ ಒಂದು ಕೊಳವೆ ಬಾವಿಯಲ್ಲಿ 20 ನಿಮಿಷದವರೆಗೆ ಒಂದಿಂಚು ನೀರು ಬರುತ್ತದೆ. ನಂತರ ಮತ್ತೆ ನೀರು ಬರಲು ಎರಡು ಗಂಟೆ ಕಾಯಬೇಕು. ಗ್ರಾಮದ ಹೊರವಲಯದಲ್ಲಿರುವ ಒಂದು ಕೊಳವೆ ಬಾವಿಯಲ್ಲಿ ಸ್ವಲ್ಪ ನೀರಿದ್ದು, ಗ್ರಾಮದ ಒಂದು ಭಾಗಕ್ಕೆ ನೀರು ಒದಗಿಸಬಹುದು.

ಆದರೆ ನಿರ್ವಹಣೆಯ ಕೊರತೆಯಿಂದ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಕಳೆದ ಒಂದು ವರ್ಷದಲ್ಲಿ ಹೊಲಗಳಿಂದ ನೀರು ಹೊತ್ತು ಸಾಕಾಗಿದೆ. ನಿಮ್ಮಿಂದಾದರೂ ನಮಗೆ ಅವಶ್ಯವಾದಷ್ಟು ನೀರು ಸಿಗಲಿ ಎಂದು ಮಹಾಲಕ್ಷ್ಮಿ, ಪಾರ್ವತಮ್ಮ, ಹನುಮಂತಪ್ಪ ತಮ್ಮ ಅಳಲು ತೋಡಿಕೊಂಡರು.

ಗ್ರಾಮದಲ್ಲಿ 800ಕ್ಕೂ ಹೆಚ್ಚು ಜಾನವಾರುಗಳಿದ್ದು, ಕೆರೆ ಕಟ್ಟೆಗಳಲ್ಲಿ ನೀರಿಲ್ಲದ ಕಾರಣ ಪರಿತಪಿಸುವಂತಾಗಿದೆ. ನೀರಿನ ಸಮಸ್ಯೆಯಿಂದ ಸ್ಥಳೀಯ ಶಾಲೆಗಳಲ್ಲಿ ಬಿಸಿಯೂಟ ತಯಾರಿಸಲು ತೊಂದರೆಯಾಗಿದೆ. ನೀರಿಗಾಗಿ ಶಿಕ್ಷಕರು ಪರದಾಡುತ್ತಿರುವುದು ಪ್ರಜಾವಾಣಿ ಪ್ರತಿನಿಧಿ ಗ್ರಾಮಕ್ಕೆ ಭೇಟಿ ನೀಡಿದಾಗ ಕಂಡು ಬಂದಿತು. ಪ್ರತಿದಿನ ಟ್ಯಾಂಕರ್ ಮೂಲಕ ನೀರು ತರಿಸಿ, ಶಾಲೆಯ ಸಂಪಿನಲ್ಲಿ ಹಾಕಿಕೊಳ್ಳಲಾಗುತ್ತದೆ.ಆದರೆ ಎರಡು ದಿನಗಳಿಂದ ನೀರು ಸಿಗದೆ ಬಿಸಿಯೂಟ ಸಿದ್ದಪಡಿಸಲು ತೊಂದರೆಯಾಗಿದೆ ಎಂದು ಶಿಕ್ಷರರು ತಿಳಿಸಿದರು.

ಗ್ರಾಮದಿಂದ 2 ಕಿ.ಮೀ. ದೂರದಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ. ಆದರೆ, ಈವರೆಗೂ ಪೈಪ್ ಲೈನ್ ಅಳವಡಿಸಿಲ್ಲ. ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಎತ್ತಿನ ಶರಣಪ್ಪ, ಎನ್. ಚಿದಾನಂದಪ್ಪ, ರಾಟಿ ಶರಣಪ್ಪ ಒತ್ತಾಯಿಸಿದ್ದಾರೆ.

* * 

ಕೊಳವೆ ಬಾವಿಯಿಂದ ಗ್ರಾಮದವರೆಗೆ ಪೈಪ್ ಲೈನ್ ಅಳವಡಿಕೆಗೆ ₹6 ಲಕ್ಷ ವೆಚ್ಚದ ಅಂದಾಜು ಪಟ್ಟಿಯನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ
ಬಿ. ಮಾರ್ಗದಪ್ಪ
ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.