ADVERTISEMENT

ಜಿಲ್ಲೆಯಲ್ಲಿ ಗುರು ಪೂರ್ಣಿಮೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 23 ಜುಲೈ 2013, 6:13 IST
Last Updated 23 ಜುಲೈ 2013, 6:13 IST

ಹೊಸಪೇಟೆ: ಸಾಯಿ ಮಂದಿರಗಳಲ್ಲಿ ವಿಶೇಷ ಪೂಜೆ, ಸಾಯಿಬಾಬಾ ಮೆರವಣಿಗೆ ಮತ್ತು ಹೋಮ, ಪೂಜೆಗಳ    ಮೂಲಕ ಹೊಸಪೇಟೆಯಲ್ಲಿ ಗುರುಪೌರ್ಣಿಮೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ನಗರದ ಡ್ಯಾಂ ರಸ್ತೆಯ ಸಾಯಿಬಾಬಾ ಮಂದಿರ, ಸ್ಟೇಷನ್ ರಸ್ತೆಯ ಸಾಯಿಬಾಬಾ ಮಂದಿರ, ಹಂಪಿ ರಸ್ತೆಯ ಕೊಂಡನಾಯಕಹಳ್ಳಿಯಲ್ಲಿರುವ ಸಾಯಿ ಮಂದಿರಗಳಲ್ಲಿ ಗುರುಪೌರ್ಣಿಮೆಯ ಪ್ರಯುಕ್ತ ವಿಶೇಷ ಪೂಜೆ ಅಭಿಷೇಕ ಮಾಡಲಾಯಿತು.

ಡ್ಯಾಂ ರಸ್ತೆಯ ಸಾಯಿ ಮಂದಿರದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಹಾಗೂ ಯುವಕರು ಸಾಯಿಬಾಬಾ ರಥೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಭಕ್ತಿ ಸಮರ್ಪಿಸಿದರು.

ಬಳ್ಳಾರಿ ರಸ್ತೆಯ ಗೀತಾಸೇವಾಶ್ರಮದಲ್ಲಿಯೂ ಗುರುಪೌರ್ಣಿಮೆಯ ಪ್ರಯುಕ್ತ ಹೋಮ ಹವನಾದಿ ಕಾರ್ಯಕ್ರಮಗಳಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ಭಾರತ್ ಸ್ವಾಭಿಮಾನಿ ಟ್ರಸ್ಟ್ ಹಾಗೂ ಸ್ವಾಮಿ ವಿವೇಕಾನಂದ ಸೇವಾಶ್ರಮ ಅಭಿಮಾನಿಗಳು ಗುರುವಂದನೆ ಸಲ್ಲಿಸಿದರು.

ಸ್ವಾಮಿ ಸುಮೇಧಾನಂಜಿ, ಯೋಗ ಗುರು ಭವರ್‌ಲಾಲ್‌ಆರ್ಯ, ಜಿಲ್ಲಾ ಪ್ರಭಾರ ಮಲ್ಲಿಕಾರ್ಜುನ, ಅಯ್ಯಪ್ಪಸ್ವಾಮಿ, ದಾಕ್ಷಿಯಿಣಿ, ಬಾಲಚಂದ್ರ ಮತ್ತು ರೇಣುಕಾಪರಗಿ ಮತ್ತಿತರರು ಪಾಲ್ಗೊಂಡಿದ್ದರು. 

ಧಾರ್ಮಿಕ ಕಾರ್ಯಕ್ರಮ
ಕಂಪ್ಲಿ:
ಸ್ಥಳೀಯ ಶಿರಿಡಿ ಸಾಯಿ ಸೇವಾಶ್ರಮ ಟ್ರಸ್ಟ್ ವತಿಯಿಂದ ಗುರು ಪೌರ್ಣಿಮೆ ಅಂಗವಾಗಿ ಕೊಟ್ಟಾಲು ರಸ್ತೆ ಸಣಾಪುರ ಕಾಲುವೆ ಬಳಿಯ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಸೋಮವಾರ ಧಾರ್ಮಿಕ ಕಾರ್ಯಕ್ರಮಗಳು ವೈಭವದಿಂದ ಜರುಗಿದವು.

ಸಾಯಿಬಾಬಾ ಶಿಲಾಮೂರ್ತಿಗೆ ವಿಶೇಷ ಅಭಿಷೇಕ, ಕಾಕಡಾರತಿ, ಸುಪ್ರಭಾತ, ಸಾಮೂಹಿಕ ಸಾಯಿಸತ್ಯ ವ್ರತ ಮತ್ತು ಸಾಯಿ ಸೇವಕ ಸುಶೀಲರಿಂದ ಸತ್ಸಂಗ ಪ್ರಸಂಗ, ಅಖಂಡ ಸಾಯಿ ನಾಮ ಸಂಕೀರ್ತನೆ  ನಡೆಯಿತು. ನಂತರ ಸತ್ಸಂಗ ಸದಸ್ಯರು ಸಾಯಿಬಾಬಾ ಭಾವಚಿತ್ರ ಮೆರವಣಿಗೆ ನಡೆಯಿತು.

ಶ್ರೀ ಶಿರಡಿ ಸಾಯಿಬಾಬಾ ಸೇವಾಶ್ರಮದ ಪುಲ್ಲಾರೆಡ್ಡಿ, ಸೇವಾಶ್ರಮದ ಸದ್ಭಕ್ತರು, ಸಾಯಿ ಅನುಯಾಯಿಗಳು ಭಾಗವಹಿಸಿದ್ದರು.

ಕ್ಷೀರಾಭಿಷೇಕ
ಕಂಪ್ಲಿ:
ಸತ್ಯನಾರಾಯಣಪೇಟೆ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಸೋಮವಾರ  ಭಕ್ತರು ಸಾಯಿಬಾಬಾ ವಿಗ್ರಹಕ್ಕೆ 108ಲೀಟರ್ ಕ್ಷೀರಾಭಿಷೇಕ ಮಾಡಿದರು.

ಸಾಯಿಬಾಬ ಶಿಲಾಮೂರ್ತಿಗೆ ಪುಷ್ಪಾರ್ಚನೆ, ಪಲ್ಲಕ್ಕಿ ಸೇವೆ, ಆರತಿ, ಸಾಯಿನಾಮ ಕೀರ್ತನೆ ಮುಕ್ತಾಯದ ನಂತರ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.

ಶಿರಡಿ ಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಭಟ್ಟ ಪ್ರಸಾದ, ಕಾರ್ಯದರ್ಶಿ ಭಟಾರಿ ದೇವೇಂದ್ರಪ್ಪ, ಜಂಟಿ ಕಾರ್ಯದರ್ಶಿ ಜಿ. ಶ್ರೀನಿವಾಸುಲು, ನಿರ್ದೇಶಕರಾದ ಜಿ. ವೆಂಕಟೇಶ್ವರರಾವ್, ಕೊಡಗಲ ವೆಂಕಟೇಶಲು, ಕೆಸಿಎಸ್ ಶ್ರೀನಿವಾಸ, ಎಲ್‌ಐಸಿ ಜಿ. ಶಂಕರನಾರಾಯಣ, ಗೋಪಾಲರೆಡ್ಡಿ, ಗೋಪಿಶೆಟ್ಟಿ  ಶ್ರೀನಿವಾಸ, ಅಶ್ವತ್ ಹಾಜರಿದ್ದರು. ನಂತರ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

ಕನ್ನಿಕಾಪರಮೇಶ್ವರಿಗೆ ವಿಶೇಷ ಅಲಂಕಾರ
ಕಂಪ್ಲಿ:
ಸ್ಥಳೀಯ ವಾಸವಿ ಮಹಿಳಾ ಮಂಡಳಿ ಪದಾಧಿಕಾರಿಗಳು ಆಷಾಢ ಶುದ್ಧ ಪೌರ್ಣಿಮೆ ಅಂಗವಾಗಿ ಸೋಮವಾರ ಶ್ರೀ ಕನ್ನಿಕಾ ಪರಮೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ ಶಾಖಂಬರಿ ದೇವಿ ಅಲಂಕಾರ ಮತ್ತು ಲಲಿತಾ ಸಹಸ್ರನಾಮ ಸ್ತ್ರೋತ್ರ ಪಾರಾಯಣ ಕಾರ್ಯಕ್ರಮವನ್ನು ಭಕ್ತಿ ಭಾವದಿಂದ ನೆರವೇರಿಸಿದರು.

ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಎಂ. ರಾಧಾ ಮುರಳಿ ಮಾತನಾಡಿ, ಆಷಾಢ ಶುದ್ಧ ಪೌರ್ಣಿಮೆ ಅಂಗವಾಗಿ ಶ್ರೀ ಕನ್ನಿಕಾ ಪರಮೇಶ್ವರಿ ದೇವಿ ಶಿಲಾಮೂರ್ತಿಗೆ 25 ನಮೂನೆಯ 250 ಕೆ.ಜಿ ತರಕಾರಿಯನ್ನು ಅಲಂಕಾರಕ್ಕಾಗಿ ಬಳಸಲಾಗಿದೆ ಎಂದು ವಿವರಿಸಿದರು.

ಪೂಜಾ ಕಾರ್ಯಕ್ರಮದಲ್ಲಿ ವಾಸವಿ ಮಹಿಳಾ ಮಂಡಳಿ ಉಪಾಧ್ಯಕ್ಷ ಟಿ. ರಮಾ ವೆಂಕಟರಮಣ, ಕಾರ್ಯದರ್ಶಿ ಟಿ. ರಾಧಾ, ಸಹ ಕಾರ್ಯದರ್ಶಿ ಬಿ. ಸುನೀತಾ ಬಸಪ್ಪ, ಖಜಾಂಚಿ ಎಸ್. ವಿನೋದ, ಮಾಜಿ ಅಧ್ಯಕ್ಷೆ ಎಚ್.ಎನ್. ಪ್ರಮೀಳಮ್ಮ, ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.