ADVERTISEMENT

ತುಂಬಿದ ದರೋಜಿ ಕೆರೆಗೆ ಜೀವಕಳೆ

ಡಾ ಪಂಡಿತಾರಾಧ್ಯ
Published 27 ಅಕ್ಟೋಬರ್ 2017, 5:23 IST
Last Updated 27 ಅಕ್ಟೋಬರ್ 2017, 5:23 IST
ಕಂಪ್ಲಿ ಸಮೀಪದ ದರೋಜಿ ಕೆರೆ ಕೋಡಿಯಿಂದ ನೀರು ಹರಿಯಲು ಕೇವಲ ಒಂದೂವರೆ ಅಡಿ ಬಾಕಿ ಇರುವ ದೃಶ್ಯ
ಕಂಪ್ಲಿ ಸಮೀಪದ ದರೋಜಿ ಕೆರೆ ಕೋಡಿಯಿಂದ ನೀರು ಹರಿಯಲು ಕೇವಲ ಒಂದೂವರೆ ಅಡಿ ಬಾಕಿ ಇರುವ ದೃಶ್ಯ   

ಕಂಪ್ಲಿ: ಸಕಾಲಕ್ಕೆ ಮಳೆ ಇಲ್ಲದೆ ಸಂಪೂರ್ಣ ಒಣಗಿ ಹೋಗಿದ್ದ ಸಮೀಪದ ದರೋಜಿ ಕೆರೆ ಇತ್ತೀಚೆಗೆ ಬಿದ್ದ ಮಳೆ ಮತ್ತು ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ನೀರು ಬಿಡುಗಡೆಗೊಂಡ ನಂತರ ಮೈದುಂಬಿಕೊಂಡಿದ್ದು, ಹೆದ್ದಾರಿ–29ರಲ್ಲಿ ಸಾಗುವ ಪ್ರಯಾಣಿಕರು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

10ಗ್ರಾಮಗಳ ರೈತರ ಸುಮಾರು 4ಸಾವಿರ ಎಕರೆ ಪ್ರದೇಶಕ್ಕೆ ನೀರು ಉಣಿಸುವ ಜೀವನಾಡಿಯಾದ ದರೋಜಿ ಕೆರೆಯಲ್ಲಿ ಇದೀಗ ಗರಿಷ್ಠ ಮಟ್ಟ ಅಂದರೆ ಕೆರೆ ತಳಮಟ್ಟದಿಂದ 1,511 ಅಡಿಯಲ್ಲಿ ನೀರು ಸಂಗ್ರಹವಾಗಿದೆ.

30ರಂದು ಬಾಗಿನ: ‘ಕೆರೆ ಕೋಡಿಯಿಂದ ನೀರು ಹರಿಯಲು ಕೇವಲ ಒಂದೂವರೆ ಅಡಿ ಅಂತರವಿದ್ದು, ಇದೇ 30ರಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಎಸ್. ಲಾಡ್, ಸಂಡೂರು ಶಾಸಕ ಈ. ತುಕಾರಾಂ, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಬಾಗಿನ ಅರ್ಪಿಸಲಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವಿ. ಜನಾರ್ದನ ತಿಳಿಸಿದ್ದಾರೆ.

ADVERTISEMENT

ಕೆರೆ ಸಂಕ್ಷಿಪ್ತ ಇತಿಹಾಸ
ನೀರಾವರಿಗೆ ಆದ್ಯತೆ ನೀಡುವ ಹಿನ್ನಲೆಯಲ್ಲಿ ದರೋಜಿ ಕೆರೆಯನ್ನು ಕ್ರಿ.ಶ 1797ರ ಆಸುಪಾಸಿನಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ್ದನೆಂದು ಹೇಳಲಾಗುತ್ತಿದೆ. 1851ರಲ್ಲಿ ದರೋಜಿ ಕೆರೆ ನೀರಿನ ಪ್ರವಾಹಕ್ಕೆ ಸಿಲುಕಿ ಒಡೆದು ಅಪಾರ ಪ್ರಮಾಣದ ನಷ್ಟ ಉಂಟಾಗಿ ನೀರು ದರೋಜಿ ಪಾಲಾಗಿತ್ತು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಕಲೆಕ್ಟರ್ ಎ. ಹ್ಯಾಥವೇ 1853ರಲ್ಲಿ ಹೊಸ ದರೋಜಿ ಗ್ರಾಮ ನಿರ್ಮಾಣಕ್ಕೆ ಮುಂದಾಗಿದ್ದರು ಎಂದು ಇತಿಹಾಸದಿಂದ ತಿಳಿಯುತ್ತದೆ. 2009ರಲ್ಲಿ ಸುರಿದ ಕುಂಭದ್ರೋಣ ಮಳೆ, ನೆರೆಹಾವಳಿಗೆ ಕೆರೆ ಕೋಡಿ ಕೊಚ್ಚಿ ಹೋಗಿತ್ತು. ನಂತರ ಸರ್ಕಾರ ಪುನರ್‌ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿತು.
ಪಂಡಿತಾರಾಧ್ಯ ಎಚ್‌.ಎಂ. ಮೆಟ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.