ADVERTISEMENT

ದಲ್ಲಾಳಿಗೆ ಸಾರ್ವಜನಿಕರಿಂದ ಧರ್ಮದೇಟು

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 9:15 IST
Last Updated 18 ಜನವರಿ 2011, 9:15 IST

ಕುರುಗೋಡು: ಸಂತಾನನಿಯಂತ್ರಣ ಶಸ್ತ್ರಚಿಕಿತ್ಸೆ ಬಗ್ಗೆ ಮಾಹಿತಿ ಇಲ್ಲದ ಆಮಾಯಕ ಜನರಿಗೆ ಹಣ ನೀಡುವ ಆಮಿಶ ತೋರಿಸಿ “ವ್ಯಾಸಕ್ಟಮಿ” ಶಸ್ತ್ರಚಿಕಿತ್ಸೆಗೆ ಕರೆತಂದ ಬ್ರೋಕರ್ ಹರೀಶ ಎನ್ನುವವ ಜನರಿಂದ ಧರ್ಮದೇಟು ತಿಂದು ಪೊಲೀಸರ  ಅತಿಥಿಯಾದ ಘಟನೆ ಇತ್ತೀಚೆಗೆ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ “ವ್ಯಾಸಕ್ಟಮಿ” ಶಸ್ತ್ರಚಿಕಿತ್ಸೆ ನೀಡುವ ಕಾರ್ಯಕ್ರಮ ಜಾರಿಯಲ್ಲಿದೆ. ಶಸ್ತ್ರಚಿಕಿತ್ಸೆಗೆ ಫಲಾನುಭವಿಗಳನ್ನು ಕರೆತರುವ ಕಿರಿಯ ಆರೋಗ್ಯ ಸಹಾಯಕಿಯರಿಗೆ ರೂ. 200 ಮತ್ತು ಶಸ್ತ್ರಚಿಕಿತ್ಸೆಗೆ ಒಳಪಡುವ ಪ್ರತಿ ಫಲಾನುಭವಿಗೆ ರೂ. 1000 ಪ್ರೋತ್ಸಾಹಧನ ನೀಡಲಾಗುತ್ತದೆ.

ಪ್ರೋತ್ಸಾಹಧನ ಆಸೆಗಾಗಿ ಆರೋಗ್ಯ ಸಹಾಯಕಿಯೊಬ್ಬರು ಬ್ರೋಕರ್ ಮೂಲಕ ಬಳ್ಳಾರಿನಗರದ ಕುಡಿತದ ಚಟಕ್ಕೆ ಅಂಟಿಕೊಂಡಿದ್ದ  ಕೆಲವರನ್ನು  ಕರೆತಂದು ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಸಿರುವ ಸಂದರ್ಭದಲ್ಲಿ  ಸಿಕ್ಕಿಬಿದ್ದಿದ್ದು,ಶಸ್ತ್ರಚಿಕಿತ್ಸೆಗೆ ಬಂದಿದ್ದ ವ್ಯಕ್ತಿಯೊಬ್ಬನನ್ನು ವಿಚಾರಿಸಿದಾಗ ‘ನನಗೆ ಏನು ಗೊತ್ತಿಲ್ಲ. ಚೂಜಿ ಮಾಡಿಸಿಕೊಂಡ್ರೆ 1000 ರೂ. ಕೊಡತಾರೆ ಅಂತ ಕರಕೊಂಡು ಬಂದಾರೆ’ ಎಂದು ಹೇಳಿದ.

  ಆಗ್ರಹ: ಪ್ರೋತ್ಸಾಹಧನದ ಆಸೆಗಾಗಿ  ಕುಡಿತದ ದಾಸ್ಯಕ್ಕೆ ಬಲಿಯಾಗಿರುವ ಅಮಾಯಕ ಜನರಿಗೆ ಮಾಹಿತಿ ನೀಡದೆ ಕರೆತಂದು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ.ಅಂಥವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಎಂದು  ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಚಾನಾಳ್ ಚೆನ್ನಬಸವರಾಜ, ಆಗ್ರಹಿಸಿದ್ದಾರೆ.

ವೈದ್ಯಾಧಿಕಾರಿ ಹೇಳಿಕೆ: ಮೇಲಾಧಿಕಾರಿಗಳ ಮಾರ್ಗದರ್ಶನದಂತೆ “ವ್ಯಾಸಕ್ಟಮಿ” ಕಾರ್ಯಕ್ರಮ ನಡೆಯುತ್ತಿದೆ. ಯಾರಿಗೂ ಒತ್ತಾಯ ಪೂರ್ವಕವಾಗಿ ಚಿಕಿತ್ಸೆ ನಡೆಸಿಲ್ಲ. ಸ್ವಯಂ ಪ್ರೇರಣೆಯಿಂದ ಬಂದವರಿಗೆ ವಿವಿಧ ಪೂರ್ವಬಾವಿ ಪರೀಕ್ಷೆ ನಡೆಸಿ ಅರ್ಹ ವ್ಯಕ್ತಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಟಿ. ರಾಜಶೇಖರರೆಡ್ಡಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.