ADVERTISEMENT

ದುರವಸ್ಥೆಯಲ್ಲಿ ಸರ್ಕಾರಿ ಆಸ್ಪತ್ರೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 7:30 IST
Last Updated 27 ಸೆಪ್ಟೆಂಬರ್ 2011, 7:30 IST

ಸಂಡೂರು: ಹೆಸರಿಗೆ ಮಾತ್ರ ಇದು 100 ಹಾಸಿಗೆಗಳ ಆಸ್ಪತ್ರೆ. ಸರಿಯಾಗಿ ಎಣಿಸಿದರೆ ಇಲ್ಲಿ 30 ಹಾಸಿಗೆಗಳು ಸಿಗುವುದು ಕಷ್ಟ. ಇದು ತಾಲ್ಲೂಕಿನ ಏಕೈಕ ದೊಡ್ಡ ಸರ್ಕಾರಿ ಆಸ್ಪತ್ರೆಯಾಗಿದ್ದು, ಇಲ್ಲಿಗೆ ಬರುವವರು ಯಾವುದೇ ಮೂಲಸೌಕರ್ಯವಿಲ್ಲದೆ ತೊಂದರೆಪಡುತ್ತಿದ್ದಾರೆ.

ಇತ್ತೀಚೆಗೆ ಸಂತಾನ ಶಕ್ತಿಹರಣ ಚಿಕಿತ್ಸೆಗೆಂದು ಬಂದಿದ್ದ ಮಹಿಳೆಯರಿಗೆ ಶಸ್ತ್ರಚಿಕಿತ್ಸೆ ಮುಗಿದ ಮೇಲೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರ ನಿರ್ಲಕ್ಷ್ಯ ಹಾಗೂ ಅಸಹಕಾರದಿಂದ ತಾಯಿ, ಹಸುಗೂಸುಗಳಿಗೆ ತುಂಬಾ ತೊಂದರೆ ಯಾಗಿದೆ ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವವರು ದೂರಿದ್ದಾರೆ.

“ಆಪರೇಸನ್ ಮಾಡಿ ತಂದು ಇಲ್ಲಿ ನೆಲದ ಮ್ಯಾಲೆ ಹಾಕಿ ಹೋದವರು ಬ್ರೆಡ್ ಕೊಟ್ಟಿಲ್ಲಾ.....ಚಾ ಕೊಟ್ಟಿಲ್ಲಾ...” ಎಂದು ಚಿಕಿತ್ಸೆಗೊಳಗಾದ ಯರ‌್ರಯ್ಯನಹಳ್ಳಿ ಗ್ರಾಮದ ಹನುಮಕ್ಕನ ಗಂಡ ಓಬಳೇಶ್ ಅವರು ನೋವು ತೋಡಿಕೊಂಡರು.

ಚಿಕಿತ್ಸೆಗೆಂದು ಕರೆತಂದಿದ್ದ ಆಶಾ ಕಾರ್ಯಕರ್ತೆಯರೂ ಸರಿಯಾದ ಮಾಹಿತಿ ಇರದೇ ಪರದಾಡುತ್ತಿದ್ದರು. “ನಿನ್ನೆ ನೀವು  ಎಂಟ್ರಿ ಮಾಡ್ಸಿಲ್ಲಾ, ನಿಮಗೆ ಭತ್ಯೆ ನೀಡುವುದಿಲ್ಲ ಎಂದು ಇಲ್ಲಿನವರು ಹೇಳುತ್ತಿದ್ದಾರೆ. ಏನ್‌ಮಾಡೋದು” ಎಂದು ಕಾರ್ಯಕರ್ತೆಯರು ಹೇಳಿದರು.

ಚೋರನೂರು, ಬಂಡ್ರಿ, ತುಂಬರಗುದ್ದಿ, ಬಂಡ್ರಿ ಮುಂತಾದ ಕಡೆಗಳಿಂದ ಚಿಕಿತ್ಸೆಗೆಂದು ಬಂದಿದ್ದ 30 ಮಹಿಳೆಯರು, ಹಸುಗೂಸುಗಳು ಆಸ್ಪತ್ರೆಯ ಕಾರಿಡಾರ್ ಮತ್ತು ಕೋಣೆಗಳ ನೆಲದ ಮೇಲೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

“ದುಡ್ಡು ಕೊಟ್ಟವರಿಗೆ ಇಲ್ಲಿನ ಸಿಬ್ಬಂದಿಗಳು ತುಂಬಾ ಮುತುವರ್ಜಿ ವಹಿಸಿ ನೋಡಿಕೊಳ್ಳುತ್ತಾರೆ. ಹೆಚ್ಚಗೆ ದುಡ್ಡು ಕೊಟ್ಟರೆ ಸ್ಪೆಷಲ್ ವಾರ್ಡ್ ನೀಡುತ್ತಾರೆ” ಎಂದು ಕೆಲ ಯವಕರು ದೂರಿದರು.

ಯೋಜನೆ ದುರ್ಬಳಕೆ: ಕಡು ಬಡವರ್ಗಕ್ಕೆ ಸೇರಿದ ಗರ್ಭಿಣಿಯರು ಆರೋಗ್ಯ ಕೇಂದ್ರ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು, ತಾಯಂದಿರ ಮರಣ ಮತ್ತು ಶಿಶುಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವುದು. ತಾಯಿ-ಮಗುವಿನ ಆರೋಗ್ಯ ಸಂರಕ್ಷಣೆಗಾಗಿ ಆರೈಕೆ ಕಿಟ್ ನೀಡುವ ಸಾರ್ಕಾರದ ಮಡಿಲು ಯೋಜನೆ ದುರ್ಬಳಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.