ಕಂಪ್ಲಿ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಲ್ಲಿಯ ತುಂಗಭದ್ರಾ ನದಿ ನೀರಲ್ಲದೆ ಬತ್ತಿ ಹೋಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ತುಂಗಭದ್ರೆ ಒಡಲಿಗೆ ಕನ್ನ ಹಾಕುವ ಮೂಲಕ ರಾತ್ರೋರಾತ್ರಿ ಮರಳು ಸಾಗಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
ಮರಳು ಸಾಗಣೆದಾರರು ನದಿಯ ಒಡಲನ್ನು ಬಗೆದಿರುವ ಕಾರಣ ನದಿ ತನ್ನ ಸಹಜ ಸೌಂದರ್ಯ ಕಳೆದುಕೊಂಡಿದೆ. ಮತ್ತೊಂದೆಡೆ ಅಂತರ್ಜಲ ಮಟ್ಟ ಕುಸಿಯುವ ಭೀತಿ ಮತ್ತು ಭವಿಷ್ಯದಲ್ಲಿ ನದಿ ಪಾತ್ರದ ಜನ, ಜಾನುವಾರುಗಳಿಗೆ ಈ ಕಂದಕಗಳು ಕಂಟಕವಾಗಲಿದೆ ಎನ್ನುವ ಅಭಿಪ್ರಾಯ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಒಂದು ವೇಳೆ ಮಳೆ ಬಂದಲ್ಲಿ, ಇಲ್ಲವೆ ನದಿಗೆ ನೀರು ಪೂರೈಕೆಯಾದಲ್ಲಿ ಮರಳಿಗಾಗಿ ಅಗೆದಿರುವ ದೊಡ್ಡ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಈಜಲು ಹೋಗುವವರು, ಮೀನುಗಾರಿಕೆ ಮಾಡುವ ಬೆಸ್ತರು, ನೀರು ಕುಡಿಯಲು ತೆರಳುವ ಜಾನುವಾರುಗಳ ಪ್ರಾಣಕ್ಕೆ ಕುತ್ತು ಉಂಟಾಗಲಿದೆ. ಇದಲ್ಲದೇ ನದಿಪಾತ್ರದಲ್ಲಿ ಉತ್ತರಾದಿ ಕ್ರಿಯೆಗಳನ್ನು ನಡೆಸುವ ವೇಳೆ ಅವಘಡ ಸಂಭವಿಸುವ ಆತಂಕವೂ ಕಾಡುತ್ತಿದೆ.
ನಾಲ್ಕೈದು ದಿನದ ಹಿಂದೆ ವ್ಯಕ್ತಿ ಯೊಬ್ಬರು ನದಿಯಲ್ಲಿ ಅಕ್ರಮ ಮರಳು ತೆಗೆಯುವಾಗ ಮರಳು ಗುಡ್ಡೆ ಕುಸಿದು ಗಾಯಗೊಂಡಿದ್ದರು ಎಂದು ನದಿ ಪಕ್ಕದ ಕೋಟೆ ಪ್ರದೇಶದ ಹೆಸರು ಹೇಳಲು ಇಚ್ಛಿಸದ ನಿವಾಸಿಯೊಬ್ಬರು ಮಾಹಿತಿ ನೀಡಿದರು.
ಸಮೀಪದ ಅರಳಿಹಳ್ಳಿ ತಾಂಡಾ ಬಳಿ ಈಗಾಗಲೇ ಮರಳಿನ ಸಂಗ್ರಹ ಕೇಂದ್ರ ತೆರೆಯಲಾಗಿದ್ದರೂ ನದಿ ಮೇಲ್ಭಾಗದಲ್ಲಿ ಈ ರೀತಿ ಅಕ್ರಮ ಮರಳು ಗಣಿಗಾರಿಕೆ ಮುಂದುವರಿದಿದೆ. ಈ ಕುರಿತು ಕ್ರಮ ತೆಗೆದುಕೊಳ್ಳಬೇಕಾದ ಜಿಲ್ಲಾಡಳಿತ ಮೌನಕ್ಕೆ ಶರಣಾಗಿದ್ದು, ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
* *
ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಿ ನದಿ ಪರಿಸರವನ್ನು ಮೊದಲಿನಂತೆ ರಕ್ಷಿಸಲಿ.
ಕೆ.ಎಂ. ಹೇಮಯ್ಯಸ್ವಾಮಿ, ಜೆಡಿಎಸ್ ಜಿಲ್ಲಾ ಹಿರಿಯ ಉಪಾಧ್ಯಕ್ಷರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.