ADVERTISEMENT

ನಿಮ್ಮಂದಿಗೆ ನಾವು: ಮನವಿ ಸ್ವೀಕರಿಸಿದ ಸಚಿವ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 5:50 IST
Last Updated 20 ಜೂನ್ 2011, 5:50 IST

ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವ ಜಿ ಜನಾರ್ದನ ರೆಡ್ಡಿ ಅವರ ಮಹತ್ವಾಕಾಂಕ್ಷೆಯ `ನಿಮ್ಮಂದಿಗೆ ನಾವು~  ಕಾರ್ಯಕ್ರಮಕ್ಕೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಜನ ಭಾನುವಾರ ಅಪಾರ ಸಂಖ್ಯೆಯಲ್ಲಿ ಆಗಮಿಸಿ, ಅಹವಾಲು ಸಲ್ಲಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ ಆರಂಭವಾದ ಕಾರ್ಯಕ್ರಮದಲ್ಲಿ ನೂರಾರು ಜನ ತಮ್ಮ ಸಮಸ್ಯೆಗಳನ್ನು ಹೊತ್ತು ಸಚಿವರ ಬಳಿ ಬಂದು ಮನವಿ ಸಲ್ಲಿಸಿದರು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸುವ ಮೂಲಕ ಗಮನ ಸೆಳೆದರು. ಇನ್ನು ಕೆಲವು ಸಮಸ್ಯೆಗಳ ಪರಿಹಾರಕ್ಕಾಗಿ ನಿಗದಿತ ದಿನದಂದು ಸಭೆ ನಡೆಸಿ ಪರಿಹಾರ ಒದಗಿಸಲಾಗುವುದು ಎಂಬ ಭರವಸೆ ನೀಡಿದರು.

ಅಂಗವಿಕಲರು, ವಯೋವೃದ್ದರು ಹಾಗೂ ಮಹಿಳೆಯರು ಸೇರಿದಂತೆ ನೂರಾರು ಜನ ತಮ್ಮ ಕುಂದುಕೊರತೆಗಳ ಕುರಿತು ಅಹವಾಲು ಸಲ್ಲಿಸಿದರು.

ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಾಹಿತಿ ನೀಡಿದರಲ್ಲದೆ, ಸೂಕ್ತವಾಗಿ ಸ್ಪಂದಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಅಂಗವಿಕಲನಿಗೆ ಉದ್ಯೋಗ:
ನೌಕರಿಯ ಅರ್ಜಿ ಹೊತ್ತು ತಂದಿದ್ದ ತಾಲ್ಲೂಕಿನ ಬಿ.ಬೆಳಗಲ್ ಗ್ರಾಮದ ಅಂಗವಿಕಲ ಯುವಕ ಗಂಗಾಧರನಿಗೆ ಗ್ರಾಮದ ಗ್ರಂಥಾಲಯದ ಮೇಲ್ವಿಚಾರಕ ಹುದ್ದೆಯ ಆದೇಶದ ಪ್ರತಿಯನ್ನು ಸಚಿವರು ಇದೇ ಸಂದರ್ಭದಲ್ಲಿ ನೀಡಿದರು.

ಈ ಕ್ರಮದಿಂದ ಹರ್ಷ ಚಿತ್ತನಾದ ಯುವಕ ಸಚಿವರಿಗೆ ಅಭಿನಂದನೆ ಸಲ್ಲಿಸಿದ. ಅನೇಕ ಅಂಗವಿಕಲರು ಪಿಂಚಣಿ, ಪಡಿತರ ಚೀಟಿ ಮತ್ತಿತರ ಸೌಲಭ್ಯ ಕೋರಿ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.