ಸಂಡೂರು: ‘ನಿಷ್ಪಕ್ಷಪಾತ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ಚುನಾವಣೆ ನಡೆಸಲು ಎಲ್ಲರೂ ಶ್ರಮಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ. ರಾಮಪ್ರಸಾದ್ ಮನೋಹರ್ ಸೂಚಿಸಿದರು.
ಪಟ್ಟಣದ ಛತ್ರಪತಿ ಶಿವಾಜಿ ವಿದ್ಯಾಮಂದಿರದ ಮಸ್ಟರಿಂಗ್ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ, ಚುನಾವಣಾ ಪ್ರಕ್ರಿಯೆ ಪರಿಶೀಲಿಸಿ ಅವರು ಮಾತನಾಡಿದರು.
‘ಮತಗಟ್ಟೆ ಅಧಿಕಾರಿಗಳು ಮತದಾನದ ದಿನ 2 ಗಂಟೆಗಳಿಗೊಮ್ಮೆ ತಮ್ಮ ವ್ಯಾಪ್ತಿಯ ಸೆಕ್ಟರ್ ಅಧಿಕಾರಿಗಳಿಗೆ ಅಗತ್ಯ ಮಾಹಿತಿಗಳನ್ನು ನೀಡಬೇಕು. ಮತಯಂತ್ರಗಳು ಹಾಗು ಮತ ಖಾತ್ರಿ ಯಂತ್ರವನ್ನು ಸೂಕ್ತರೀತಿಯಲ್ಲಿ ನಿರ್ವಹಿಸಬೇಕು. ಮತದಾನ ಪೂರ್ಣಗೊಂಡ ಬಳಿಕ ಅದನ್ನು ಕೇಂದ್ರಕ್ಕೆ ತಂದು ಒಪ್ಪಿಸಬೇಕು’ ಎಂದು ಸೂಚಿಸಿದರು.
‘ಚುನಾವಣಾ ಕಾರ್ಯ ಮಹತ್ವದ ಕಾರ್ಯ. ಅಧಿಕಾರಿಗಳು ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕು. ಗೈರು ಹಾಜರಾಗುವ ಮತ್ತು ಬೇಜವಾಬ್ದಾರಿ ತೋರಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಅವರು ಎಚ್ಚರಿಸಿದರು.
ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಕೆ.ವಿ.ರಾಜೇಂದ್ರ ಮಾತನಾಡಿದರು. ಮಧ್ಯಾಹ್ನ ಭೋಜನದ ನಂತರ ಮತಗಟ್ಟೆ ಅಧಿಕಾರಿಗಳು ಭದ್ರತಾ ಸಿಬ್ಬಂದಿ, ಮತಯಂತ್ರ, ಮತ ಖಾತ್ರಿಯಂತ್ರಗಳೊಂದಿಗೆ ನಿಗದಿತ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು.
ತಾಲ್ಲೂಕು ಚುನಾವಣಾಧಿಕಾರಿ ಜಿ. ಮುನಿಯಪ್ಪ, ಸಹಾಯಕ ಚುನಾವಣಾಧಿಕಾರಿ ಎಚ್.ಎಂ. ರಮೇಶ ಉಪಸ್ಥಿತರಿದ್ದರು.
ಕಾಂಗ್ರೆಸ್ನಿಂದ ಉಚ್ಚಾಟನೆ
ಬಳ್ಳಾರಿ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಕೌಲ್ ಬಜಾರ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸತೀಶ್ ಚಕ್ರವರ್ತಿ, ನಿಸಾರ್ ಅಹಮ್ಮದ್, ಸೂರ್ಯಪ್ರಕಾಶ್ ಬಾಬು, ಆನಂದ್ ಕುಮಾರ್, ವಿ.ಕೃಷ್ಣ ಪ್ರಸಾದ್, ಕೆ.ಮಮತಾ, ಬಿ.ಸೆಲ್ವರಾಜ್, ಅಗಸ್ಟಿನ್, ಕೆ.ಎಸ್. ಧನುಂಜಯ, ಟಿ.ತಸ್ವಿರ್, ಎಂ.ಮುನಿಸ್ವಾಮಿ, ಕೃಷ್ಣಮೂರ್ತಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಿ. ಎಸ್.ಮಹಮ್ಮದ್ ರಫೀಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.