ADVERTISEMENT

ನಿಸ್ವಾರ್ಥ ಸೇವೆಯಿಂದ ಪ್ರಗತಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2011, 5:30 IST
Last Updated 16 ಏಪ್ರಿಲ್ 2011, 5:30 IST
ನಿಸ್ವಾರ್ಥ ಸೇವೆಯಿಂದ ಪ್ರಗತಿ
ನಿಸ್ವಾರ್ಥ ಸೇವೆಯಿಂದ ಪ್ರಗತಿ   

ಹೊಸಪೇಟೆ: ‘ಸತ್ಯ, ನ್ಯಾಯ ಹಾಗೂ ನಿಸ್ವಾರ್ಥ ಭಾವನೆಯಿಂದ ಸೇವೆ ಸಲ್ಲಿಸಿದಲ್ಲಿ ಮಾತ್ರ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ’ ಎಂದು ಹಂಸಾಂಬಾ ಶಾರದಾಶ್ರಮದ ಮಾತಾಜಿ ಪ್ರಭಾವತಿ ತಿಳಿಸಿದರು. ಉತ್ತರ ಕರ್ನಾಟಕದ ವಿಜಯನಗರ ಪ್ರಾಂತದ ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ಸ್ಥಳೀಯ ಸಹಕಾರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ 15 ದಿನಗಳ ‘ಸಮಿತಿ ಶಿಕ್ಷಾ ವರ್ಗ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಅನ್ಯಾಯ ಮಾರ್ಗದಲ್ಲಿ ನಡೆದು ಜಯ ಸಾಧಿಸುವುದಕ್ಕಿಂತ, ನ್ಯಾಯ ಮಾರ್ಗದಲ್ಲಿ ನಡೆದು ಸೋಲುವುದೇ ಲೇಸು’ ಎಂದು ಹೇಳಿದರು. ಕವಿಗಳು, ತತ್ವ ಜ್ಞಾನಿಗಳು, ಮಹಾತ್ಮರು ಸೇರಿದಂತೆ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ‘ಜೀವನ’ ಎಂದರೆ ಏನು ಎಂಬುದನ್ನು ವಿಶ್ಲೇಷಿಸಿದ್ದಾರೆ. ಆದರೆ ಸ್ವಾಮಿ ವಿವೇಕಾನಂದರ ಪ್ರಕಾರ ಜೀವನ ಎಂದರೆ ವ್ಯಕ್ತಿತ್ವ ವಿಕಸನವಾಗಿದೆ ಎಂದರು.

ಪ್ರಸ್ತುತ ಯುವ ಜನಾಂಗವೂ ದೇಶಾಭಿಮಾನ, ಸಂಘಟನೆ, ಸ್ತ್ರೀ ರಾಷ್ಟ್ರ ಆಧಾರಶಕ್ತಿ ಕುರಿತು ಚಿಂತನೆ ನಡೆಸುವ ಅಗತ್ಯವಿದೆ ಎಂದು ಹೇಳಿದರು. ವಿಶ್ವ ಹಿಂದೂ ಪರಿಷತ್ ಅಖಿಲ ಭಾರತ ಸಂಘಟನೆಯ ಉಪಾಧ್ಯಕ್ಷೆ ರಾಜಮಾತಾ ಚಂದ್ರಕಾಂತಾ ದೇವಿ, ರಾಷ್ಟ್ರ ಸೇವಿಕಾ ಸಮಿತಿ ಅಖಿಲ ಭಾರತೀಯ ಸಹ ಕಾರ್ಯದರ್ಶಿ ಅಲಕಾ ಇನಾಮದಾರ, ಸಮಿತಿಯ ಸ್ಮಿತಾ ಮೋಖಾಶಿ, ವರ್ಗ ಕಾರ್ಯವಾಹಿಕಾ ಉಷಾ ಗುರುರಾಜ್ ಸೇರಿದಂತೆ ಇತರರು ಹಾಜರಿದ್ದರು.

ರಥೋತ್ಸವ ಇಂದು

ಹೊಸಪೇಟೆ: ಸ್ಥಳೀಯ ಜಂಬುನಾಥ ಸ್ವಾಮಿಯ ಮಹಾ ರಥೋತ್ಸವ ಏ. 16ರಂದು ನಡೆಯಲಿದೆ. ರಥೋತ್ಸವ ಅಂಗವಾಗಿ ಬೆಳಿಗ್ಗೆ 8ಕ್ಕೆ ಮಡಿ ತೇರು ನಡೆಯಲಿದೆ. ಸಂಜೆ 5ಕ್ಕೆ ಮಹಾ ರಥೋತ್ಸವ ಜರುಗಲಿದೆ. ಏ. 17ರಂದು ಬೆಳಿಗ್ಗೆ ಕಡುಬಿನ ಕಾಳಗ ಜರುಗಲಿದೆ. ರಥೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.

ಶಿವಾನುಭವ ಕಾರ್ಯಕ್ರಮ:
ನಗರದ ಶ್ರೀಕೊಟ್ಟೂರು ಸ್ವಾಮಿ ಮಠದ ವತಿಯಿಂದ ಏ. 16ರಂದು ಸ್ಥಳೀಯ ಶ್ರೀ ಹಾನಗಲ್ಲ ಕುಮಾರೇಶ್ವರ  ಶಿವಾನುಭವ ಮಂಟಪದಲ್ಲಿ ‘ಶಿವಾನುಭವ ಸಂಪದ 1003’ ಕಾರ್ಯ   ಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಮದು ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಗರಗ ನಾಗಲಾಪುರದ ಶ್ರೀ ಮರಿಮಹಾಂತ ಸ್ವಾಮೀಜಿ, ಕರವೇ ಮಹಿಳಾ ಘಟಕದ ಪದಾಧಿಕಾರಿಗಳಾದ ಎಂ. ಸುವರ್ಣರತ್ನ, ಕೆ. ಲಕ್ಷ್ಮೀದೇವಿ, ಕೆ. ಶಾಂತಾ ಸೇರಿದಂತೆ ಇತರರು ಭಾಗವಹಿಸುವರು.
ಈ ಸಂದರ್ಭದಲ್ಲಿವ ‘ಶಿವಶರಣೆ ಅಕ್ಕಮಹಾದೇವಿ’ ಕುರಿತು ಉಮೇಶ ಕೆರಿ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.