ADVERTISEMENT

ನೀರು ದೊರೆಯದೆ ಸಂಕಷ್ಟ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 6:10 IST
Last Updated 9 ಆಗಸ್ಟ್ 2012, 6:10 IST

ಬಳ್ಳಾರಿ: ತಾಲ್ಲೂಕಿನ ಯರ‌್ರಂಗಳಿ ಮತ್ತು ವದ್ದಟ್ಟಿ ಗ್ರಾಮ ವ್ಯಾಪ್ತಿಯಲ್ಲಿ ತುಂಗಭದ್ರಾ ಮೇಲ್ಮಟ್ಟದ ಕಾಲುವೆಯ 11ನೇ ಉಪ ಕಾಲುವೆಯ ಕೆಳ ಭಾಗದ ರೈತರಿಗೆ ಸಮರ್ಪಕವಾಗಿ ನೀರು ದೊರಕಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಈ ಗ್ರಾಮಗಳ ರೈತರು ಬುಧವಾರ ಪ್ರತಿಭಟನೆ ನಡೆಸಿದರು.

11ನೇ ಉಪಕಾಲುವೆಯ ಕೆಳ ಹಂತದ ರೈತರು ಅನೇಕ ವರ್ಷಗಳಿಂದ ನೀರು ದೊರೆಯದೆ ಸಂಕಷ್ಟ ಅನುಭವಿಸುವಂತಾಗಿದೆ. ಮೇಲ್ಮಟ್ಟದ ಮುಖ್ಯ ಕಾಲುವೆಯ ಪಕ್ಕದಲ್ಲೇ 250 ಎಕರೆಗೂ ಹೆಚ್ಚಿನ ಭೂಮಿಯಲ್ಲಿ 11ನೇ ಉಪ ಕಾಲುವೆಗೆ ಡೀಸೆಲ್ ಪಂಪ್‌ಸೆಟ್ ಅಳವಡಿಸುವ ಮೂಲಕ ಕೃಷ್ಣನಗರ ಕ್ಯಾಂಪ್ ರೈತರು ಅನಧಿಕೃತವಾಗಿ ಭೂಮಿಗೆ ನಿರು ಪೂರೈಸಿಕೊಂಡು ಬೆಳೆ ಬೆಳೆಯುತ್ತಿದ್ದಾರೆ.
 
ನೀರು ಬಿಟ್ಟ ದಿನದಿಂದಲೇ ಪಂಪ್‌ಸೆಟ್‌ಗಳನ್ನು ಏಕ ಕಾಲಕ್ಕೆ ಅಳವಡಿಸಿ, ಕೆಳ ಭಾಗದ ರೈತರಿಗೆ ನೀರು ದೊರೆಯದಂತೆ ಮಾಡಿದ್ದಲ್ಲದೆ, ದೌರ್ಜನ್ಯವನ್ನೂ ನಡೆಸುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಈ ಕಾಲುವೆಗುಂಟ ಹರಿಯುವ ನೀರನ್ನು ಸರದಿ ಆಧಾರದಲ್ಲಿ ಬಳಸುವಂತೆ ಜಿಲ್ಲಾಧಿಕಾರಿಯವರೇ ಆದೇಶ ಹೊರಡಿಸಿದ್ದಾರೆ. ಆದರೆ, ಕೃಷ್ಣ ನಗರ ಕ್ಯಾಂಪ್ ಮತ್ತು ಕೊಳಗಲ್ಲು ವ್ಯಾಪ್ತಿಯ ಮೇಲ್ಭಾಗದ ರೈತರು ಆದೇಶ ಗಾಳಿಗೆ ತೂರಿ ದೌರ್ಜನ್ಯದಿಂದ ದಿನದ 24 ಗಂಟೆ ಕೆಳ ಭಾಗದ ರೈತರಿಗೆ ನೀರು ದೊರೆಯದಂತೆ ಅಕ್ರಮವಾಗಿ ಪಂಪ್‌ಸೆಟ್ ಅವಡಿಸಿ ಬಳಸುತ್ತಿದ್ದಾರೆ.

ನೀರವಾರಿ ಸೌಲಭ್ಯವಿಲ್ಲದ ಭೂಮಿ ಹೊಂದಿರುವ ಮೇಲ್ಭಾಗದ ರೈತರು ಭತ್ತ  ಬೆಳೆಯುತ್ತಿದ್ದು, ಕೆಳ ಭಾಗದ ಸಕ್ರಮ ರೈತರು ನೀರಿನ ತೆರಿಗೆ ಕಟ್ಟುತ್ತಿದ್ದರೂ, ನೀರು ದೊರೆಯದೆ ಪರದಾಡುತ್ತಿದ್ದಾರೆ. ಮೇಲ್ಭಾಗದ ರೈತರು ನೀರಿನ ತೆರಿಗೆ ಕಟ್ಟದೆಯೇ ನೀರು ಪಡೆಯುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಮೇಲ್ಭಾಗದ ರೈತರು ಉಪ ಕಾಲುವೆಗೆ ಅಕ್ರಮವಾಗಿ ಅಳವಡಿಸಿರುವ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಬೇಕು ಸರದಿ ಆಧಾರದಲ್ಲಿ ನೀರು ಬಳಸುವ ಪದ್ಧತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಪ್ರತಿಭಟನಾನಿರತ ಬಸವನಗೌಡ, ನಾಡಗೌಡ, ವೀರಭದ್ರ ಗೌಡ, ವಿರುಪಾಕ್ಷಗೌಡ, ನಾಗಪ್ಪ, ಶಿವಲಿಂಗಪ್ಪ, ಕೋದಂಡರಾಯ, ಮಹೇಶ್, ಪಂಪಾಪತಿ, ಚಂದ್ರಶೇಖರ್, ರವಿ, ದೊಡ್ಡಬಸಪ್ಪ, ಎರ‌್ರಿಸ್ವಾಮಿ, ಬಸವರಾಜ್ ಕೋರಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.