ಕೊಟ್ಟೂರು: ಹಲವು ವರ್ಷಗಳಿಂದ ಈ ಭಾಗದ ಜನರು ಕಾತುರದಿಂದ ಎದುರು ನೋಡುತ್ತಿದ್ದ ಕೊಟ್ಟೂರು–ಹರಿಹರ ನೂತನ ರೈಲು ಸಂಚಾರ ಸೋಮವಾರ ಆರಂಭವಾಯಿತು.
ಮಧ್ಯಾಹ್ನ 1.15 ಗಂಟೆಗೆ ಸರಿಯಾಗಿ ಕೊಟ್ಟೂರು ರೈಲು ನಿಲ್ದಾಣದ ಆವರಣದಲ್ಲಿ ಸೇರಿದ್ದ ಸಾವಿರಾರು ಜನರ ಸಮ್ಮುಖದಲ್ಲಿ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ನೂತನ ರೈಲಿಗೆ ಹಸಿರು ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು. ಅಲ್ಲದೆ ವೇದಿಕೆಯ ಎಡ ಭಾಗದಲ್ಲಿದ್ದ ಕಾಮಗಾರಿಯ ಶಿಲಾನ್ಯಾಸ ಫಲಕಗಳನ್ನು ಅನಾವರಣಗೊಳಿಸಿದರು.
ನಂತರ ಸಚಿವರು ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರುತ್ತಿದ್ದಂತೆ ವೇದಿಕೆಯ ಮುಂಭಾಗ, ನಿಲ್ದಾಣ ಹಾಗೂ ರೈಲಿನಲ್ಲಿ ಕುಳಿತಿದ್ದ ಸಾವಿರಾರು ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಮೊದಲ ದಿನ 5 ಬೋಗಿಗಳನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ನವ ವಧುವಿನಂತೆ ಶೃಂಗಾರಗೊಂಡಿದ್ದ 06530 ಸಂಖ್ಯೆಯ ರೈಲು ನಿಲ್ದಾಣದಲ್ಲಿ ಸಾಗುತ್ತಿದ್ದಂತೆ ಕಿಕ್ಕಿರಿದು ತುಂಬಿದ್ದ ಪ್ರಯಾಣಿಕರು ವಿಜಯದ ನಗೆ ಬೀರಿದರು. ಅಲ್ಲದೆ ಕೊಟ್ಟೂರು–ಹರಿಹರ ಮೊದಲ ರೈಲು ಸಂಚಾರಕ್ಕೆ ಸಾಕ್ಷಿಯಾಗಲು ಬಂದಿದ್ದ ಮಕ್ಕಳು, ಮಹಿಳೆಯರು, ವೃದ್ಧರಾಧಿಯಾಗಿ ಸೇರಿದ್ದ ಸಾವಿರಾರು ಜನರು ರೈಲಿನಲ್ಲಿ ಪ್ರಯಾಣಿಕರಿಗೆ ಶುಭ ಕೋರಿದರು.
ಈ ಮೂಲಕ ಸಚಿವ ಖರ್ಗೆ ಅವರು ಸಹ ಈ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ ಸಮರ್ಪಣಾ ಭಾವಕ್ಕೆ ಒಳಗಾದರು.
ಕೊಟ್ಟೂರು–ಹರಿಹರ ರೈಲು ಆರಂಭಕ್ಕಾಗಿ ಸತ್ಯಾಗ್ರಹ, ಉಪವಾಸ, ಹೋರಾಟ, ಪತ್ರ ಸಮರ ಮತ್ತಿತರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ಕೊಟ್ಟೂರು ಭಾಗದ ರೈಲ್ವೆ ಹೋರಾಟಗಾರರು ಇದು ತಮ್ಮ ಹೋರಾಟಕ್ಕೆ ಸಿಕ್ಕ ಜಯವೆಂದು ಭಾವಿಸಿ ವಿಜಯೋತ್ಸವ ಆಚರಿಸಿದರು.
ಇದೇ ಸಂದರ್ಭದಲ್ಲಿ ಈ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಬೇಕು ಎಂಬ ನಾಯಕರ ಒಕ್ಕೊರಲಿನ ಒತ್ತಾಯಕ್ಕೆ ಸಚಿವ ಖರ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ‘ಜನರ ಅನುಕೂಲಕ್ಕಾಗಿ ಆರಂಭವಾಗಿರುವ ಈ ನೂತನ ರೈಲು ಸಂಚಾರ, ಜನರಿಗೆ ಅನುಕೂಲವಾಗುವ ಸಮಯದಲ್ಲಿ ಸಂಚರಿಸಲಿದೆ’ ಎಂದು ಸಚಿವರು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.