ADVERTISEMENT

ನೇರ ಕೂರಿಗೆ ಮೂಲಕ ಭತ್ತ ಬೆಳೆದರೆ ಉತ್ತಮ ಇಳುವರಿ

ಕೃಷಿ ಸಂಶೋಧನಾ ಕೇಂದ್ರದ ಡಾ.ಬಸವಣ್ಣೆಪ್ಪ ಮಾಹಿತಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 10:42 IST
Last Updated 15 ಜೂನ್ 2018, 10:42 IST

ಸಿರುಗುಪ್ಪ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಬಂದಿದ್ದರಿಂದ ಹೆಚ್ಚಿನ ಪ್ರದೇಶದಲ್ಲಿ ಭತ್ತ ಬಿತ್ತಲು ರೈತರು ಮುಂದಾಗಿದ್ದಾರೆ ಎಂದು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಎಂ.ಎ.ಬಸವಣ್ಣೆಪ್ಪ ತಿಳಿಸಿದರು.

ತಾಲ್ಲೂಕಿನ ಗಜಿಗಿನಹಾಳು ಗ್ರಾಮದ ಪ್ರಗತಿಪರ ರೈತ ವೀರೇಶ್‌ಗೌಡರ ಜಮೀನಿನಲ್ಲಿ ಕೃಷಿ ಸಂಶೋಧನಾ ಕೇಂದ್ರದಿಂದ ಪಡೆದ ನೇರ ಕೂರಿಗೆ ಬಿತ್ತನೆ ಉಪಕರಣದಿಂದ ಬಿತ್ತನೆ ಮಾಡುವುದನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು.

ಕೃಷಿ ಸಂಶೋಧನಾ ಕೇಂದ್ರದ ವತಿಯಿಂದ ರೈತರಿಗೆ ಬಿತ್ತನೆಗಾಗಿ ಮೂರು ಕೂರಿಗೆ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ನೀಡಿ ಬಿತ್ತನೆ ಮಾಡುವ ತಾಂತ್ರಿಕತೆಯನ್ನು ತಿಳಿಸಿಕೊಡಲಾಗುತ್ತಿದೆ. ಜುಲೈ ಅಂತ್ಯದವರೆಗೂ ಧೀರ್ಘಾವಧಿ ಭತ್ತದ ತಳಿಗಳಾದ ಸೋನಾ
ಮಸೂರಿ, ಗಂಗಾವತಿ ಸೋನಾ, ನೆಲ್ಲೂರು ಸೋನಾ, ಕಾವೇರಿ ಸೋನಾ ತಳಿಗಳು ಬಿತ್ತನೆಗೆ ಸೂಕ್ತವಾಗಿದ್ದು, ಜುಲೈನಿಂದ ಆಗಸ್ಟ್‌ವರೆಗೂ ರೈತರು ಬೇಗ ಬರುವ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆರ್‌ಎನ್‌ಆರ್–15048 ತಳಿಯು ಬೇಗ ಬರುತ್ತದೆ. ಆದರೆ, ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಬಳಸಿದಲ್ಲಿ ಎತ್ತರವಾಗಿ ಬೆಳೆದು ಬಾಗುವ ಲಕ್ಷಣ ಕಂಡುಬರುತ್ತದೆ. ಸವಳು ಭೂಮಿಗೆ ಗಂಗಾವತಿ ಕೃಷಿ ಸಂಶೋಧನ ಕೇಂದ್ರ ಬಿಡುಗಡೆಗೊಳಿಸಿರುವ ಗಂಗಾವತಿ ಸೋನಾ ಸವಳು ಭೂಮಿಯಲ್ಲಿಕೂಡ ಉತ್ತಮ ಇಳುವರಿ ಕೊಡುತ್ತದೆ ಎಂದು ಮಾಹಿತಿ ನೀಡಿದರು.

ADVERTISEMENT

ಕೂರಿಗೆ ಮೂಲಕ ಭತ್ತವನ್ನು ಬಿತ್ತುವುದರಿಂದ ಭತ್ತದ ಸಸಿಗಳಿಗೆ ಗಾಳಿ, ಬೆಳಕು ದೊರೆಯುವುದರಿಂದ ಕೀಟ ಮತ್ತು ರೋಗದ ಬಾಧೆ ಕಡಿಮೆ ಇರುತ್ತದೆ. ಕಡಿಮೆ ರಸಗೊಬ್ಬರ ಬಳಕೆ ನೀರಿನ ಉಳಿತಾಯ, ಕಡಿಮೆ ನೀರು ದೊರೆತರು ಉತ್ತಮ ಇಳುವರಿಯನ್ನು ಈ ಪದ್ಧತಿ
ಯಲ್ಲಿ ಪಡೆಯಬಹುದು ಎಂದರು.

ರೈತ ವೀರೇಶಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.