ADVERTISEMENT

ಪುತ್ರನ ಪತ್ತೆ: ನೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 10:05 IST
Last Updated 3 ಡಿಸೆಂಬರ್ 2013, 10:05 IST

ಬಳ್ಳಾರಿ: ಒಡಿಶಾದ ಭುವನೇಶ್ವರದಲ್ಲಿ ನವೆಂಬರ್‌ 25ರಂದು ಕಾಣೆಯಾಗಿ­ರುವ ತಮ್ಮ ಪುತ್ರನ ಪತ್ತೆಗೆ ರಾಜ್ಯ ಸರ್ಕಾರದ ಮೂಲಕ ಒತ್ತಡ ತರುವಂತೆ ಆಗ್ರಹಿಸಿ,   ಇಂಡಿಯನ್‌ ಬ್ಯೂರೋ ಆಫ್‌ ಮೈನ್ಸ್‌ (ಐಬಿಎಂ)ನ ಸಹಾಯಕ ನಿಯಂತ್ರಕ ಇಬ್ರಾಹಿಂ ಷರೀಫ್‌ ಅವರ ಪಾಲಕರು ಜಿಲ್ಲಾಧಿ­ಕಾರಿ ಕಚೇರಿಯಲ್ಲಿ ಸೋಮವಾರ ಮನವಿ ಸಲ್ಲಿಸಿದರು.

ಇಬ್ರಾಹಿಂ ಷರೀಫ್‌ ಅವರ ತಂದೆ, ಸಂಡೂರು ತಾಲ್ಲೂಕಿನ ಯಶವಂತನಗರ ಗ್ರಾಮದ ಗಿಡ್ಡು ಸಾಬ್‌ ಹಾಗೂ ಇತರ ಸಂಬಂಧಿಗಳು ಜಿಲ್ಲಾಧಿಕಾರಿ ಎ.ಎ ಬಿಸ್ವಾಸ್‌ ಅವರನ್ನು ಭೇಟಿಯಾಗಿ, ಈ ಕುರಿತ ಮನವಿ ಪತ್ರವನ್ನು ನೀಡಿದರು.

ಮುಖ್ಯಮಂತ್ರಿ ಹಾಗೂ ಗೃಹ ಸಚಿ­ವರಿಗೆ ಈ ವಿಷಯ ತಿಳಿಸಿ, ಕಾಣೆಯಾ­ಗಿರುವ ಪುತ್ರನ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ಅವರು  ಕೋರಿದರು.

ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇಬ್ರಾಹಿಂ ಷರೀಫ್‌, ನ. 25ರಂದು ಕಚೇರಿಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮರಳಿ ಬಂದಿಲ್ಲ. ಈ ಕುರಿತು ಸಂಬಂಧಿಗಳು ಭುವನೇಶ್ವರಕ್ಕೆ ತೆರಳಿ, ಸೊಸೆಯೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಒಂದು ವಾರ ಕಳೆದರೂ ಪುತ್ರ ಪತ್ತೆಯಾಗದ್ದರಿಂದ ಆತಂಕ ಹೆಚ್ಚಿದ್ದು,   ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಕೂಡಲೇ ಪುತ್ರನ ಪತ್ತೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒಡಿಶಾ ಸರ್ಕಾರದ ಮೇಲೆ ಒತ್ತಡ ತರಬೇಕು.  ಅಗತ್ಯ ಸಹಕಾರ ನೀಡಿ, ಆದಷ್ಟು ಶೀಘ್ರ ತಮ್ಮ ಪುತ್ರನನ್ನು  ಸುರಕ್ಷಿತವಾಗಿ ಕರೆ ತರಬೇಕು ಎಂದು ಅವರು ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.