ಕೂಡ್ಲಿಗಿ: ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಪಟ್ಟಣದಲ್ಲಿ ಹಾಕಿದ್ದ ಫ್ಲೆಕ್ಸ್, ಬ್ಯಾನರ್ ಸೇರಿದಂತೆ ವಿವಿಧ ಬಗೆಯ ಸರ್ಕಾರಿ ಜಾಹೀರಾತುಗಳನ್ನು ತೆರವುಗೊಳಿಸಲಾಗಿದೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರಚಾರ ಮಾಹಿತಿಯನ್ನು ಅಳಿಸಲು ಸಿಬ್ಬಂದಿ ಲೀಟರುಗಟ್ಟಲೆ ಬಣ್ಣ ಬಳಸಬೇಕಾಗಿದೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಲೋಕೆಶ್ ವಿ. ನಾಯಕ ಅವರು ಪಟ್ಟಣ ಸೇರಿದಂತೆ ಕ್ಷೇತ್ರದಾದ್ಯಂತ ಹಲವು ಕಲ್ಲು, ಬಂಡೆ, ಗೋಡೆಗಳ ಮೇಲೆ ಪ್ರಚಾರ ಮಾಹಿತಿ ಬರೆಸಿದ್ದಾರೆ. ಬಿಜೆಪಿಯ ಪ್ರಚಾರ ಮಾಹಿತಿಯೂ ಹೆಚ್ಚಿದೆ.ಈ ಎಲ್ಲ ಮಾಹಿತಿಯನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ಕಿರಿಯ ಆರೋಗ್ಯ ನಿರೀಕ್ಷಕಿ ಲತಾ ಅವರ ನೇತೃತ್ವದಲ್ಲಿ ಸಿಬ್ಬಂದಿ ಎರಡು ದಿನದಿಂದ ಅಳಿಸುವ ಕೆಲಸದಲ್ಲಿ ತೊಡಗಿದ್ದಾರೆ.ಗ್ರಾಮೀಣ ಭಾಗದ ರೈತರ ಹೊಲಗಳಲ್ಲಿ ಪಂಪ್ ಸೆಟ್ ರೂಂಗಳ ಗೋಡೆ ಮೇಲೆ, ರಸ್ತೆಯ ಪಕ್ಕದಲ್ಲಿರುವ ಕಲ್ಲು ಬಂಡೆಗಳ ಮೇಲೆ ಬರಹಗಳನ್ನು ಬರೆಸಲಾಗಿದೆ.
ನಾಗರಿಕರ ಪರದಾಟ: ರಾಜ್ಯದಲ್ಲಿ ಚುನಾವಣೆ ಘೋಷಣೆಯಾದ ದಿನದಿಂದ ನೂತನ ಪಡಿತರ ಚೀಟಿ ವಿತರಣೆ ಕಾರ್ಯ ಸ್ಥಗಿತಗೊಂಡಿದೆ. ಆದರೆ ಈ ಮಾಹಿತಿ ಇಲ್ಲದ ಹಲವರ ತಾಲ್ಲೂಕು ಕಚೇರಿಗೆ ದಿನವೂ ಬಂದು ವಾಪಸಾಗುತ್ತಿದ್ದಾರೆ.ಮಹಾವೀರ ಜಯಂತಿ ಅಂಗವಾಗಿ ತಾಲ್ಲೂಕು ಕಚೇರಿಗೆ ಗುರುವಾರ ರಜೆ ಇದ್ದರೂ ಹಲವರು ಹಸುಗೂಸುಗಳೊಂದಿಗೆ ಬಂದಿದ್ದರು.
**
ಪ್ರಚಾರ ಗೋಡೆ ಬರಹಗಳನ್ನು ಅಳಿಸಲು ಈಗಾಗಲೇ 50 ಲೀಟರ್ಗೂ ಹೆಚ್ಚು ಬಣ್ಣ ಬಳಸಲಾಗಿದೆ – ಉಮೇಶ್ ಹಿರೇಮಠ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ.
**
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.