ADVERTISEMENT

ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 7:35 IST
Last Updated 1 ಜನವರಿ 2014, 7:35 IST

ಕಂಪ್ಲಿ: ಸ್ಥಳೀಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಈಚೆಗೆ ನೂತನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರ ಮಾಡುವ ಮೂಲಕ ರೋಗಿಗಳ ತಪಾಸಣೆ ಮತ್ತು ಚಿಕಿತ್ಸೆಗೆ ಅನುಕೂಲ ಮಾಡಿಕೊಡಲಾಯಿತು. ಪ್ರಸ್ತುತ ಸರ್ಕಾರಿ ಆಸ್ಪತ್ರೆ ಕುರಿತು ‘ಪ್ರಜಾವಾಣಿ’ ಡಿ. 19ರ ಸಂಚಿಕೆಯಲ್ಲಿ ‘ಗಗನ ಕುಸುಮವಾದ ಆಸ್ಪತ್ರೆ ಸೌಲಭ್ಯ, ವರ್ಷದಿಂದ ಪ್ರಭಾರ ವೈದ್ಯರೇ ಗತಿ’ ಎನ್ನುವ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಗೊಂಡಿದ್ದನ್ನು ಇಲ್ಲಿ ನೆನಪಿಸಬಹುದು.

ಮನವಿ: ಆಸ್ಪತ್ರೆ ಸ್ಥಳಾಂತರ ಸಂದರ್ಭದಲ್ಲಿ ಪ್ರಭಾರ ವೈದ್ಯ ಡಾ. ಮಂಜುನಾಥ ಮಾತನಾಡಿ, ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳು ಆಸ್ಪತ್ರೆ ಸ್ವಚ್ಛತೆಗೆ ಹೆಚ್ಚು ಗಮನ ನೀಡುವಂತೆ ಮನವಿ ಮಾಡಿದರು. ಆಯುಷ್ ವೈದ್ಯಾಧಿಕಾರಿ ಡಾ. ಮಲ್ಲೇಶಪ್ಪ, ಜ್ಯೋತಿಷಿ ಪ್ರಕಾಶ ವೈದ್ಯರು, ಡಾ. ಜಂಬುನಾಥಗೌಡ, ಪುರಸಭೆ ಸದಸ್ಯ ಸಿ.ಆರ್. ಹನುಮಂತ, ವೀರಶೈವ ಸಮಾಜದ ಮುಖಂಡ ಕೆ. ಗವಿಸಿದ್ದಪ್ಪ, ಕೆ.ಎಂ. ವೀರಯ್ಯಸ್ವಾಮಿ, ಎಂ.ಎಸ್. ಮಹೇಶ್ ಸ್ವಾಮಿ, ಔಷಧ ವಿತರಕ ಮಹ್ಮದ್ ಅನ್ಸಾರಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿ.ಟಿ. ನಾಗರಾಜ್ ಹಾಜರಿದ್ದರು.

ಆಗ್ರಹ: ಸಮುದಾಯ ಆರೋಗ್ಯ ಕೇಂದ್ರಕ್ಕೆ ಸರ್ಕಾರ 15 ಮಂಚ, ಕ್ಷಕಿರಣ ಯಂತ್ರ, ದಂತ ಪರೀಕ್ಷೆ ಯಂತ್ರ ಸೇರಿ ಕೆಲ ಪೀಠೋಪಕಾರಣಗಳನ್ನು ಪೂರೈಕೆ ಮಾಡಿದೆ. ಆದರೆ ಅಗತ್ಯವಿರುವ ನಾಲ್ಕು ವೈದ್ಯ ಹುದ್ದೆಗಳನ್ನು ಭರ್ತಿ ಮಾಡುವಂತೆ ಪಟ್ಟಣದ ಜನತೆ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.