ADVERTISEMENT

ಬಡವರಿಗೆ ಮನೆ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 19:59 IST
Last Updated 19 ಜುಲೈ 2013, 19:59 IST
ಬಳ್ಳಾರಿಯ ವಿವಿಧೆಡೆ ಗುಡಿಸಲು ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುವ ಬಡ ಜನತೆಗೆ ಮನೆ ನಿರ್ಮಿಸಿ ವಿತರಿಸಬೇಕು ಎಂದು ಆಗ್ರಹಿಸಿ ಎಐವೈಎಫ್ ಸಂಘಟನೆಯ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು
ಬಳ್ಳಾರಿಯ ವಿವಿಧೆಡೆ ಗುಡಿಸಲು ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುವ ಬಡ ಜನತೆಗೆ ಮನೆ ನಿರ್ಮಿಸಿ ವಿತರಿಸಬೇಕು ಎಂದು ಆಗ್ರಹಿಸಿ ಎಐವೈಎಫ್ ಸಂಘಟನೆಯ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು   

ಬಳ್ಳಾರಿ: ವಿವಿಧ ವಸತಿ ಯೋಜನೆಗಳಡಿ ಸ್ಥಳೀಯ ಬಡಜನತೆಗೆ ಅಗತ್ಯ ನಿವೇಶನ ಹಾಗೂ ಮನೆ ಒದಗಿಸಬೇಕು ಎಂದು ಆಗ್ರಹಿಸಿ ನಗರದ ವಿವಿಧ ಕೊಳೆಗೇರಿ ಹಾಗೂ ಬಡಾವಣೆಗಳಲ್ಲಿ ವಾಸಿಸುವ ಜನತೆ ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ನೇತೃತ್ವದಲ್ಲಿ   ಶುಕ್ರವಾರ ಪ್ರತಿಭಟನೆ ನಡೆಸಿದರು.

ಸಂಘಟನೆ ಹಮ್ಮಿಕೊಂಡಿರುವ `ಸೂರಿಗಾಗಿ ಸಮರ' ಕಾರ್ಯಕ್ರಮದಡಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪಾಲಿಕೆ ಕಚೇರಿಗೆ ತೆರಳಿದ ಪ್ರತಿಭಟನಕಾರರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಕಳೆದ ನಾಲ್ಕೈದು ದಶಕಗಳಿಂದ ಮನೆ ಹಾಗೂ ನಿವೇಶನ ಇಲ್ಲದ ಬಡ ಜನರು ಬಾಡಿಗೆ ಮನೆಗಳಲ್ಲೇ ವಾಸಿಸುವಂತಾಗಿದೆ. ನಗರದ ವಿವಿಧೆಡೆ ಚರಂಡಿ, ಒಳಚರಂಡಿ, ಕಾಲುವೆಗಳು ಮತ್ತಿತರ ಅನಾರೋಗ್ಯಕರ ವಾತಾವರಣ ಇರುವ ಪ್ರದೇಶಗಳಲ್ಲಿ ಅನಿವಾರ್ಯವಾಗಿ ಗುಡಿಸಲು ಹಾಕಿಕೊಂಡು, ಚಿಕ್ಕಪುಟ್ಟ ಮನೆಗಳನ್ನು ಬಾಡಿಗೆಗೆ ಪಡೆದು ಬದುಕುತ್ತಿದ್ದಾರೆ. ಇವರಿಗೆಲ್ಲ ಮನೆ ಕಟ್ಟಿಸಿಕೊಡುವಂತೆ ಈಗಾಗಲೇ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವನಾಗಿಲ್ಲ ಎಂದು ಪ್ರತಿಭಟನಕಾರರು ದೂರಿದರು.

ಸರ್ಕಾರ ಕೂಡಲೇ ಬಡ ಜನರಿಗೆ ಜೀವನಕ್ಕೆ ಅಗತ್ಯವಾಗಿರುವ ಮನೆಗಳನ್ನು ನಿರ್ಮಿಸಿಕೊಡಬೇಕು. ಎಲ್ಲ ವಾರ್ಡ್‌ಗಳಲ್ಲೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸಂಗನಕಲ್ಲು ಕಟ್ಟೆಬಸಪ್ಪ, ಉಪಾಧ್ಯಕ್ಷ ಹೊನ್ನಳ್ಳಿ ಈಶ್ವರ್, ಕೆ.ರವಿಕುಮಾರ್, ಕೊಳಗಲ್ ಎರಿಸ್ವಾಮಿ, ಅಂಜಿನಿ, ಶಂಕರಗೌಡ, ಪ್ರಭು, ಕೃಷ್ಣಮೂರ್ತಿ ಹಾಗೂ ನಗರದ ವಿವಿಧೆಡೆ ಜೀವಿಸವ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.