ADVERTISEMENT

`ಬಳ್ಳಾರಿ-ಕೊಪ್ಪಳ ರೈಲು ಸಮಸ್ಯೆ ಬಗೆಹರಿಸಿ'

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 5:15 IST
Last Updated 18 ಜುಲೈ 2013, 5:15 IST
ಬಳ್ಳಾರಿಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಕೊಪ್ಪಳ ಸಂಸದ ಶಿವರಾಮೇ ಗೌಡ ಅವರೊಂದಿಗೆ ರೈಲು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಸಂಸ್ಥೆಯ ಕೌಡಕಿ ಉಮಾಪತಪ್ಪ, ವಿ.ರವಿಕುಮಾರ್ ಮತ್ತಿತರರು ಚಿತ್ರದಲ್ಲಿದ್ದಾರೆ.
ಬಳ್ಳಾರಿಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಕೊಪ್ಪಳ ಸಂಸದ ಶಿವರಾಮೇ ಗೌಡ ಅವರೊಂದಿಗೆ ರೈಲು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಸಂಸ್ಥೆಯ ಕೌಡಕಿ ಉಮಾಪತಪ್ಪ, ವಿ.ರವಿಕುಮಾರ್ ಮತ್ತಿತರರು ಚಿತ್ರದಲ್ಲಿದ್ದಾರೆ.   

ಬಳ್ಳಾರಿ: ಬಳ್ಳಾರಿ ಮತ್ತು ಕೊಪ್ಪಳ ಭಾಗಗಳಲ್ಲಿ ಎದುರಾಗುತ್ತಿರುವ ರೈಲ್ವೆ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂತೆ ಹಾಗೂ ಈ ಮಾರ್ಗದಲ್ಲಿ ಹೊಸ ರೈಲು ಗಳ ಸಂಚಾರದ ಕುರಿತು ಕೇಂದ್ರ ಸರ್ಕಾ ರಕ್ಕೆ ಒತ್ತಡ ತರುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಕೊಪ್ಪಳ ಸಂಸದ ಶಿವರಾಮೇಗೌಡ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಸಂಸದ ಶಿವರಾಮೇಗೌಡರೊಂದಿಗೆ  ಏರ್ಪ ಡಿಸಿದ್ದ ಸಭೆಯಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ವಿ.ರವಿ ಕುಮಾರ್, 1950ರಿಂದಲೂ ಹುಬ್ಬಳ್ಳಿ ಯಿಂದ ವಿಜಯವಾಡದವರೆಗೆ ಸಂಚರಿ ಸುತ್ತಿರುವ ಅಮರಾವತಿ ಎಕ್ಷ್‌ಪ್ರೆಸ್ ರೈಲು ಈ ಭಾಗದ ರೈತರು, ವಾಣಿಜ್ಯೋ ದ್ಯಮಿಗಳು ಸೇರಿದಂತೆ ಹಲವಾರು ಪ್ರಯಾಣಿಕರಿಗೆ ಅನುಕೂಲಕರವಾಗಿತ್ತು.

ಆದರೆ, ಕಳೆದ 2007ರಲ್ಲಿ ಈ ರೈಲನ್ನು ವಾಸ್ಕೋದಿಂದ ಹೌರಾವರೆಗೆ ವಿಸ್ತರಿ ಸಿದ್ದರಿಂದ ಈ ಭಾಗದ ಪ್ರಯಾಣಿಕರಿಗೆ ರೈಲು ವ್ಯವಸ್ಥೆ ಇದ್ದೂ, ಇಲ್ಲದಂತಾಗಿದೆ. ಆದ್ದರಿಂದ ಮುಖ್ಯವಾಗಿ ಈ ರೈಲನ್ನು ಹೌರಾದವರೆಗೂ ವಿಸ್ತರಿಸುವ ಬದಲು  ಮೊದಲಿನಂತೆಯೇ ಹುಬ್ಬಳ್ಳಿ ಮತ್ತು ವಿಜಯವಾಡದವರೆಗೆ ವಾರದ ಏಳು ದಿನಗಳಲ್ಲಿಯೂ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಹೊಸಪೇಟೆ-ಬೆಂಗಳೂರು ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲನ್ನು ಪೂರ್ಣ ಪ್ರಮಾಣದಲ್ಲಿ ಪ್ರತ್ಯೇಕವಾಗಿ ಸಂಚರಿಸುವಂತೆ ಮಾಡಬೇಕು, ಅಲ್ಲದೆ, ಇನ್ನೆರಡು ಸ್ಲೀಪರ್ ಬೋಗಿಗಳನ್ನು ಜೋಡಿಸಬೇಕು, ನಿತ್ಯ ಸಂಚರಿಸುವ ಹಂಪಿ ರೈಲಿಗೆ 3 ಎಸಿ ಕೋಚ್‌ಗಳು ಸೇರಿದಂತೆ ಇನ್ನೆರಡು ಸ್ಲೀಪರ್ ಬೋಗಿಗಳನ್ನು ಜೋಡಿಸಬೇಕು, ಸೋಲಾಪುರ-ಗುಲ್ಬರ್ಗ-ಯಶವಂತಪುರ ರೈಲು ಅನ್ನು ಬಿಜಾಪುರ,-ಗದಗ- ಕೊಪ್ಪಳ-ಬಳ್ಳಾರಿ ಮೂಲಕ ಸಂಚರಿಸು ವಂತೆ ಮಾಡಬೇಕು ಹಾಗೂ ಚೈನ್ನೈ- ಮುಂಬೈ ನಡುವೆ ಸಂಚರಿಸುವ ಎಕ್ಷ್‌ಪ್ರೆಸ್ ರೈಲನ್ನು ಗದಗ-ಕೊಪ್ಪಳ- ಬಳ್ಳಾರಿ ಮೂಲಕ ಸಂಚರಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಯಿತು.

ಹೊಸಪೇಟೆ-ಕೊಟ್ಟೂರು-ಹರಿಹರ ನಡುವೆ ರೈಲು ಸಂಚರಿಸುವಲ್ಲಿ ಕ್ರಮ ಕೈಗೊಳ್ಳಬೇಕು, ರಾಯದುರ್ಗ- ತುಮಕೂರು ನಡುವಿನ ರೈಲು ಮಾರ್ಗವನ್ನು ತ್ವರಿತಗತಿಯಲ್ಲಿ ಪೂರ್ಣ ಗೊಳಿಸಬೇಕು, ಗುಂತಕಲ್‌ನಿಂದ ಹೊಸಪೇಟೆಗೆ ಸಂಚರಿಸುವ ಪುಷ್‌ಪುಲ್ ರೈಲನ್ನು ನಿತ್ಯವೂ ಬಿಡಬೇಕು ಹಾಗೂ ಮುನಿರಾಬಾದ್ ಮತ್ತು ಮೆಹಬೂಬ್ ನಗರ ರೈಲು ಮಾರ್ಗಕ್ಕೆ ಬಳ್ಳಾರಿಯಿಂದ ಸಿರಗುಪ್ಪ ಮಾರ್ಗವಾಗಿ ಸಿಂಧನೂರಿಗೆ ರೈಲು ಮಾರ್ಗ ಕಲ್ಪಿಸಲು ಯೋಜನೆ ರೂಪಿಸಬೇಕು. ಇದರಿಂದಾಗಿ ಬಳ್ಳಾರಿ ಯಿಂದ ಹೈದರಾಬಾದ ನಡುವೆ ದೂರ ಕಡಿಮೆಯಾಗುವುದು ಎನ್ನಲಾಯಿತು.

ಮನವಿ ಸ್ವೀಕರಿಸಿದ ಸಂಸದ ಶಿವರಾಮೇಗೌಡ ಅವರು ಈ  ವಿಷಯದ ಕುರಿತು ಶೀಘ್ರದಲ್ಲಿಯೇ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಂಸ್ಥೆಯ ಅಧ್ಯಕ್ಷ ಕೌಡಕಿ ಉಮಾ ಪತೆಪ್ಪ, ಉಪಾಧ್ಯಕ್ಷರಾದ ಕೆ.ಚೆನ್ನಪ್ಪ, ಡಾ.ರಮೇಶ ಗೋಪಾಲ, ಕಾರ್ಯ ದರ್ಶಿ ಕೆ.ಕೃಷ್ಣ, ಯಶವಂತರಾಜ್, ಶ್ರೀನಿವಾಸ್‌ರಾವ್, ವಿ.ಕೆ.ನಾಯ್ಡು, ಶ್ರೀನಿವಾಸುಲು, ರಮೇಶಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.