ADVERTISEMENT

ಬಿಜೆಪಿಯಲ್ಲಿ ನಿರೀಕ್ಷೆ ಮೀರದ ಆಯ್ಕೆ

ಎರಡನೇ ಪಟ್ಟಿಯಲ್ಲಿ ನಾಲ್ಕು ಕ್ಷೇತ್ರಕ್ಕೆ ಅಭ್ಯರ್ಥಿಗಳು ಅಂತಿಮ: ಕೂಡ್ಲಿಗಿ ಬಾಕಿ

ಕೆ.ನರಸಿಂಹ ಮೂರ್ತಿ
Published 17 ಏಪ್ರಿಲ್ 2018, 5:38 IST
Last Updated 17 ಏಪ್ರಿಲ್ 2018, 5:38 IST

ಬಳ್ಳಾರಿ: ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಸೋಮವಾರ ಬಿಡುಗಡೆ ಯಾಗಿದ್ದು, ಜಿಲ್ಲೆಯ ಮಟ್ಟಿಗೆ ನಿರೀಕ್ಷೆಯ ಚೌಕಟ್ಟಿನಲ್ಲೇ ಉಳಿದುಕೊಂಡಿದೆ.ಈ ಮುನ್ನ ಬಿಡುಗಡೆಯಾಗಿದ್ದ ಮೊದಲ ಪಟ್ಟಿಯಲ್ಲಿದ್ದ ಮೂವರು ಮತ್ತು ಎರಡನೇ ಪಟ್ಟಿಯಲ್ಲಿರುವ ಐವರು ಸೇರಿ ಒಟ್ಟು 8 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಾಗಿದೆ. ಕೂಡ್ಲಿಗಿ ಕ್ಷೇತ್ರದ ಅಭ್ಯರ್ಥಿ ಘೋಷಣೆಯೊಂದೇ ಬಾಕಿ ಉಳಿದಿದೆ.

ಹಿಂದಿನ ವರ್ಷ ನಡೆದಿದ್ದ ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಯಾರನ್ನು ಗೆಲ್ಲಿಸಿ ಎಂದು ಜನರಿಗೆ ಮನವಿ ಮಾಡಿದ್ದರೋ ಅವರ ಹೆಸರುಗಳೇ ಪಟ್ಟಿಯಲ್ಲಿ ಬಂದಿವೆ. ಮೊದಲ ಪಟ್ಟಿಯಲ್ಲಿ ವಿಜಯನಗರ–ಎಚ್‌.ಆರ್‌,ಗವಿಯಪ್ಪ, ಕಂಪ್ಲಿ–ಟಿ.ಎಚ್‌.ಸುರೇಶ್‌ಬಾಬು, ಸಂಡೂರು –ಬಿ. ರಾಘ ವೇಂದ್ರ– ಹೆಸರನ್ನು ಘೋಷಿಸ ಲಾಗಿತ್ತು.

ಮನವಿ ಮಾಡಿದ್ದರು:

ADVERTISEMENT

ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ಯಡಿಯೂರಪ್ಪ, "ನಗರ ಕ್ಷೇತ್ರದಲ್ಲಿ ಜಿ.ಸೋಮಶೇಖರರೆಡ್ಡಿ, ಸಿರುಗುಪ್ಪದಲ್ಲಿ ಎಂ.ಎಸ್‌.ಸೋಮ ಲಿಂಗಪ್ಪ ಹಾಗೂ ಹಗರಿ ಬೊಮ್ಮನ ಹಳ್ಳಿಯಲ್ಲಿ ನೇಮಿರಾಜ ನಾಯ್ಕ್ ಅವರನ್ನು ಬೆಂಬಲಿಸಿ' ಎಂದು ಜನರಿಗೆ ಮನವಿ ಮಾಡಿದ್ದರು. ಅವರ ಮನವಿಗೆ ಪೂರಕಾಗಿಯೇ ಪಕ್ಷ ಈ ಮೂವರನ್ನು ಆಯ್ಕೆ ಮಾಡಿದೆ. ಹಡಗಲಿಯ ಮಾಜಿ ಶಾಸಕ ಚಂದ್ರಾನಾಯ್ಕ್‌ ಅವರ ಬಗ್ಗೆಯೂ ಯಡಿಯೂರಪ್ಪ ಶ್ಲಾಘನೆಯ ಮಾತುಗಳನ್ನು ಆಡಿದ್ದರು.

ಗ್ರಾಮೀಣ:
ಚುನಾವಣೆ ಘೋಷಣೆಗೂ ಮುನ್ನವೇ ಸಂಸದ ಬಿ.ಶ್ರೀರಾಮುಲು ಅವರು ಸಣ್ಣ ಫಕ್ಕೀರಪ್ಪ ಅವರನ್ನು ‘ಗ್ರಾಮೀಣ ಕ್ಷೇತ್ರದ ನಿಯೋಜಿತ ಅಭ್ಯರ್ಥಿ’ ಎಂದು ಘೋಷಿಸಿ ಅವರೊಂದಿಗೆ ಆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಅವರ ಮಾತಿನಂತೆಯೇ ಫಕ್ಕೀರಪ್ಪ ಅಲ್ಲಿ ಅಭ್ಯರ್ಥಿಯಾಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಸೋತಿದ್ದ ಓಬಳೇಶ್‌ ಅವರಿಗೆ ಈ ಬಾರಿ ಹಿನ್ನಡೆಯಾಗಿದೆ.

ಲಂಬಾಣಿ ಸಮುದಾಯಕ್ಕೆ ಒತ್ತು

ಬಳ್ಳಾರಿ: ಪರಿಶಿಷ್ಟ ಜಾತಿಗೆ ಮೀಸಲಿರುವ ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿಯಲ್ಲಿ ಬಿಜೆಪಿ ಕೂಡ ಕಾಂಗ್ರೆಸ್‌ನಂತೆ ಲಂಬಾಣಿ ಸಮುದಾಯಕ್ಕೇ ಒತ್ತು ನೀಡಿದೆ. ಹಡಗಲಿಯಲ್ಲಿ ನಿವೃತ್ತ ಎಂಜಿನಿಯರ್‌ ಓದೋಗಂಗಪ್ಪ ಮತ್ತು ಎಸ್‌.ಪೂಜಪ್ಪ ಟಿಕೆಟ್‌ಗಾಗಿ ತೀವ್ರ ಪ್ರಯತ್ನ ನಡೆಸಿದ್ದರು. ಹಗರಿಬೊಮ್ಮನಹಳ್ಳಿಯಲ್ಲಿ ವಿ.ತಿರುಮಲೇಶ್‌ ಮತ್ತು ಪಿ.ರಾಮಾನಾಯ್ಕ, ಮಲ್ಲಿಕಾರ್ಜುನ ನಾಯ್ಕ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು.ಯಾವುದಾದರೂ ಒಂದು ಕ್ಷೇತ್ರದಲ್ಲಿ ಮಾದಿಗ ಸಮುದಾಯಕ್ಕೆ ಟಿಕೆಟ್‌ ನೀಡಬೇಕು ಎಂಬ ಆಗ್ರಹಕ್ಕೆ ಮನ್ನಣೆ ದೊರೆತಿಲ್ಲ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳ ಲಂಬಾಣಿ ಸಮುದಾಯದ ಅಭ್ಯರ್ಥಿಗಳ ನಡುವೆಯೇ ಪೈಪೋಟಿ ನಡೆಯಲಿದೆ.

ಐದು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು

ಹಡಗಲಿ: ಚಂದ್ರಾನಾಯ್ಕ್‌

ಹಗರಿಬೊಮ್ಮನಹಳ್ಳಿ: ನೇಮಿರಾಜ ನಾಯ್ಕ್

ಸಿರುಗುಪ್ಪ: ಎಂ.ಎಸ್.ಸೋಮಲಿಂಗಪ್ಪ

ಬಳ್ಳಾರಿ ಗ್ರಾಮೀಣ: ಸಣ್ಣ ಫಕ್ಕೀರಪ್ಪ

ಬಳ್ಳಾರಿ ನಗರ: ಜಿ.ಸೋಮಶೇಖರ ರೆಡ್ಡಿ

ನಗರ ಕ್ಷೇತ್ರ: ಕದನ ಕಣ ಸಿದ್ಧ

ಬಳ್ಳಾರಿ: ಬಿಜೆಪಿ ಟಿಕೆಟ್‌ ಘೋಷಣೆಯೊಂದಿಗೆ ನಗರ ಕ್ಷೇತ್ರದ ಕದನದ ಕಣ ಸಂಪೂರ್ಣ ಸಜ್ಜಾಗಿದೆ. ಬಿಜೆಪಿಯ ಜಿ.ಸೋಮಶೇಖರ ರೆಡ್ಡಿ, ಜೆಡಿಎಸ್‌ನ ಇಕ್ಬಾಲ್‌ ಅಹ್ಮದ್‌ ಮತ್ತು ಕಾಂಗ್ರೆಸ್‌ನ ಅನಿಲ್‌ಲಾಡ್‌ ನಡುವೆ ಪೈಪೋಟಿ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.