ADVERTISEMENT

ಬುಡುಬುಡಕಿಗಳ ಭವಿಷ್ಯ ಡೋಲಾಯಮಾನ

ವಾಸಕ್ಕೆ ಕೌದಿ ಜೋಪಡಿಯೇ ಗತಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 6:37 IST
Last Updated 7 ಡಿಸೆಂಬರ್ 2017, 6:37 IST
ಕೌದಿ ಟೆಂಟ್‌ಗಳಲ್ಲಿ ನೆಲೆಸಿರುವ ಬುಡುಬುಡುಕಿ ಕುಟುಂಬ
ಕೌದಿ ಟೆಂಟ್‌ಗಳಲ್ಲಿ ನೆಲೆಸಿರುವ ಬುಡುಬುಡುಕಿ ಕುಟುಂಬ   

ಕಂಪ್ಲಿ: ‘ಹಾಲಕ್ಕಿ ಶಕುನ ನುಡಿದೈತೆ. ಜಯವಾಗುತೈತೆ ಶುಭವಾಗತೈತೆ ಶುಭವಾಗತೈತೆ ಜಯವಾಗತೈತೆ’ ಎಂದು ನುಡಿಯುತ್ತಾ ಊರಿಂದೂರಿಗೆ ಹೊರಡುವ ಬುಡುಬುಡಿಕೆಯವರು ಇಂದಿಗೂ ಜನಪದ ಪರಂಪರೆ ಉಳಿವಿಗೆ ಕಾರಣಕರ್ತರು.

ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಇಂಥ ಕಲೆಯನ್ನು ಕಂಪ್ಲಿ ಪಟ್ಟಣದ ವಿನಾಯಕನಗರದಲ್ಲಿರುವ(ಸಿಲ್ವರ್‌ ಕಾಲೊನಿ) ಮರಾಠಿ ಕುಟುಂಬಗಳು ಪೋಷಿಸಿಕೊಂಡು ಬರುತ್ತಿವೆ.

ದೊಡ್ಡ ನಾಗಪ್ಪ, ಸಣ್ಣ ನಾಗಪ್ಪ, ಪರಶುರಾಮ ಮತ್ತು ದೇವೇಂದ್ರಪ್ಪ ಅವರು ತಲೆಗೆ ರುಮಾಲು, ಹಣೆಗೆ ಕುಂಕುಮ, ಹೆಗಲಿಗೆ ವಲ್ಲಿ ಹಾಕಿ, ಬಲಗೈ ಹೆಬ್ಬೆರಳಿಗೆ ಹಣೆಗೆಜ್ಜೆ, ಬಗಲಿಗೆ ಜೋಳಿಗೆ ನೇತು ಹಾಕಿಕೊಂಡು ತಮ್ಮದೇ ಶೈಲಿಯಲ್ಲಿ ಜನರಿಗೆ ಮೋಡಿ ಹಾಕುತ್ತಾ ಕೈಯಲ್ಲಿದ್ದ ಪುಟ್ಟ ಡಮರುಗ ಆಕೃತಿಯ ಚರ್ಮವಾದ್ಯದಿಂದ(ಬುಡಬುಡಿಕೆ) ಬುಡು ಬುಡು ನಾದ ಹೊಮ್ಮಿಸಿ ‘ಕೆಂಪು ಕುದುರೆ ಹಾರುತ್ತದೆ (ಬೆಂಕಿ ಅನಾಹುತ ಸಂಭವಿಸುತ್ತದೆ), ತುಂಬಿದ ಕೊಡ ತುಳುಕುತ್ತದೆ (ತುಂಬಿದ ಗರ್ಭಿಣಿ ಆಕಸ್ಮಿಕ ಸಾವು ಕಾಣುತ್ತಾಳೆ), ನಡು ಅಗಸಿ ಮುಂದೆ ಓಕುಳಿ ಆಗುತ್ತೆ(ಊರಲ್ಲಿ ಜಗಳ ಮಾರಾಮರಿ ನಡೆಯುತ್ತದೆ) ಎನ್ನುವ ಶಕುನವನ್ನು ತಮ್ಮದೇ ಶೈಲಿಯಲ್ಲಿ ಹೇಳುತ್ತಾರೆ.

ADVERTISEMENT

‘ಇದನ್ನು ಆಲಿಸಿದ ಕೆಲವರು ಶಕುನ ಕೆಟ್ಟದ್ದಾದರೆ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಾರೆ. ಶಕುನ ಸರಿ ಇದ್ದರೆ ಜನರು ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ’ ಎಂದು ವಿವರಿಸಿದರು.

‘ನಾವು ತೆರಳುವ ಗ್ರಾಮದಲ್ಲಿ ಸರಿರಾತ್ರಿ ಸ್ಮಶಾನಕ್ಕೆ ತೆರಳಿ ಅಲ್ಲಿ ಕೂಗುವ ಹಾಲಕ್ಕಿಯ ಕೂಗನ್ನು ಏಕಾಗ್ರತೆ
ಯಿಂದ ಆಲಿಸಿ ಅಂದಿನ ಭವಿಷ್ಯವಾಣಿ ನಿರ್ಧರಿಸುತ್ತೇವೆ. ಬುಡುಬುಡಿಕೆ ನುಡಿಸುತ್ತಾ ಊರುಗಳಲ್ಲಿ ಸುತ್ತಿ ಶಕುನ
ವನ್ನು ನುಡಿಯುತ್ತಾ ಮನೆಯವರು ನೀಡುವ ಕಾಳು, ಕಡಿ, ಕಾಸು ಸ್ವೀಕರಿಸುತ್ತೇವೆ’ ಎಂದು ತಿಳಿಸಿದರು.

-ಪಂಡಿತಾರಾಧ್ಯ ಎಚ್‌.ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.