ADVERTISEMENT

ಬೆಳೆಗಳ ಮಾಹಿತಿಗಾಗಿ ಜಿಪಿಎಸ್ ಕಾರ್ಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 5:25 IST
Last Updated 30 ಅಕ್ಟೋಬರ್ 2017, 5:25 IST
ಕೂಡ್ಲಿಗಿ ತಾಲ್ಲೂಕಿನ ಜಂಗಮ ಸೋವೇನಹಳ್ಳಿ ಗ್ರಾಮದ ರೈತ ಪರಮೇಶಿ ಜಮೀನಲ್ಲಿ ಜಿಪಿಎಸ್ ಮೂಲಕ ಬೆಳೆ ನಮೂದು ಮಾಡುತ್ತಿರುವ ಶಿವಪುರ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ.
ಕೂಡ್ಲಿಗಿ ತಾಲ್ಲೂಕಿನ ಜಂಗಮ ಸೋವೇನಹಳ್ಳಿ ಗ್ರಾಮದ ರೈತ ಪರಮೇಶಿ ಜಮೀನಲ್ಲಿ ಜಿಪಿಎಸ್ ಮೂಲಕ ಬೆಳೆ ನಮೂದು ಮಾಡುತ್ತಿರುವ ಶಿವಪುರ ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ.   

ಕೂಡ್ಲಿಗಿ: ಮುಂಗಾರು ಹಂಗಾಮಿನ ಬೆಳೆ ಹಾಗೂ ಹಾನಿಯ ಕುರಿತು ಖಚಿತ ಮಾಹಿತಿಗಾಗಿ ಎಲ್ಲೆಡೆ ಬೆಳೆಗಳ ಜಿಪಿಎಸ್ ಸಮೀಕ್ಷಾ ಕಾರ್ಯ ನಡೆದಿದೆ. ತಾಲ್ಲೂಕಿನಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಸರ್ವೆದಾರರು ಪ್ರತಿಯೊಂದು ಹೊಲಗಳಿಗೆ ತೆರಳಿ ಬೆಳೆ ಸಮೀಕ್ಷೆ ಕಾರ್ಯವನ್ನು ಭರದಿಂದ ನಡೆಸುತ್ತಿದ್ದಾರೆ.

ಈ ಹಿಂದೆ ನಡೆಯುತ್ತಿದ್ದ ಬೆಳೆ ಹಾನಿ ಸಮೀಕ್ಷೆಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬರುತ್ತಿತ್ತು. ಸಮೀಕ್ಷೆ ಕಾರ್ಯಕ್ಕೆ ನಿಯೋಜಿತರಾಗಿದ್ದ ಸಿಬ್ಬಂದಿ ಅಂದಾಜಿನ ಮೇಲೆ ಮಾಹಿತಿ ಸಂಗ್ರಹಿಸುತ್ತಿದ್ದರು.‌ ಆದರೆ, ಈಗ ಜಿಪಿಎಸ್‌ ಮೂಲಕ ಸಮೀಕ್ಷೆ ನಡೆಸುವುದರಿಂದ ನಿಖರವಾಗಿರಲಿದೆ.

ತಾಲ್ಲೂಕಿನಲ್ಲಿ 37 ಮಂದಿ ಗ್ರಾಮ ಲೆಕ್ಕಾಧಿಕಾರಿಗಳು, 6 ಜನ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಇಬ್ಬರು ಗ್ರಾಮೀಣ ಸೇವಾ ಕೇಂದ್ರದ ಪ್ರತಿನಿಧಿಗಳು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ದಿನ ನೂರಾರು ಎಕರೆ ಜಮೀನಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ.

ADVERTISEMENT

ಸಮೀಕ್ಷೆ ನಡೆಸುವವರು ಬಂದಾಗ ರೈತರು ಉಪಸ್ಥಿತಿ ಇರಬೇಕು. ಒಂದು ವೇಳೆ ಬೆಳೆ ಕಟಾವು ಮಾಡಿದ್ದರೆ, ಹೊಲದಲ್ಲಿ ಹಿಂದೆ ಯಾವ ಬೆಳೆ ಬೆಳೆಯಾಗಿತ್ತು ಎಂಬುದನ್ನು ಮಾಹಿತಿ ನೀಡಬೇಕು. ಒಂದು ವೇಳೆ ರೈತರು ಸಿಗದಿದ್ದರೂ ಬೆಳೆಯ ಪೋಟೊ ತೆಗೆದು ನಂತರ ಅವರ ಆಧಾರ್ ಸಂಖ್ಯೆ ಪಡೆದು ತುಂಬಬಹುದು.

ಸಿಬ್ಬಂದಿ ಕೊರತೆ: ತಾಲ್ಲೂಕಿನಲ್ಲಿ ಒಟ್ಟು 86 ಕಂದಾಯ ಗ್ರಾಮಗಳಿದ್ದು, ಸುಮಾರು 131 ಉಪ ಗ್ರಾಮಗಳಿವೆ. ಆದರೆ, 45 ಜನ ಮಾತ್ರ ಗ್ರಾಮ ಲೆಕ್ಕಾಧಿಕಾರಿಗಳು ಇದ್ದು, ಇವರಲ್ಲಿ 7 ಜನ ತಾಲ್ಲೂಕು ಕಚೇರಿ ಕೆಲಸ ನಿರ್ವಹಿಸುತ್ತಾರೆ. 11 ಹುದ್ದೆಗಳು ಖಾಲಿ ಇವೆ.

ಇದರಿಂದ ಒಬ್ಬಬ್ಬ ಗ್ರಾಮ ಲೆಕ್ಕಾಧಿಕಾರಿ ಎರಡರಿಂದ ಮೂರು ಕಂದಾಯ ಗ್ರಾಮಗಳಲ್ಲಿ ಬೆಳೆ ನಮೂದು ಮಾಡಬೇಕಾಗಿದೆ. ಕೂಡ್ಲಿಗಿ ಹೋಬಳಿಯಲ್ಲಿ 18,184. ಕಾನಹೊಸಹಳ್ಳಿ 33,509, ಗುಡೇಕೋಟೆ 22.130, ಹಾಗೂ ಕೊಟ್ಟೂರು ಹೋಬಳಿಯಲ್ಲಿ 34,106 ಸೇರಿ ಒಟ್ಟು 107, 929 ಪಹಣಿಗಳಿವೆ. ಇವುಗಳನ್ನು ಜಿಪಿಎಸ್ಮೂಲಕ ಪಹಣಿ ಸಂಖ್ಯೆ ಆಳವಡಿಸಿ ಅದೇ ಹೊಲದಲ್ಲಿ ನಿಂತು ಪೋಟೊ ತೆಗೆಯೆಬೇಕು. ನಂತರ ಬೆಳೆ ವಿವರ ಹಾಕಿ ಅದನ್ನು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕು.

ಕೈಕೊಡುವ ಬ್ಯಾಟರಿ, ನೆಟ್‌ವರ್ಕ್‌: ನವೆಂಬರ್ 5ರೊಳಗೆ ಸಮೀಕ್ಷೆ ಮುಗಿಸಬೇಕು ಎಂದು ಗಡುವು ನೀಡಲಾಗಿದೆ. ಇದರಿಂದಾಗಿ ನಿರಂತರವಾಗಿ ಮೊಬೈಲನ್ನು ಆನ್ ಮಾಡಿಕೊಂಡೆ ಇಟ್ಟುಕೊಳ್ಳುವುದರಿಂದ ಮೂರ್ನಾಲ್ಕು ತಾಸುಗಳಲ್ಲಿ ಬ್ಯಾಟರಿ ಚಾರ್ಜ್ ಮುಗಿದು ಹೋಗುತ್ತದೆ. ಮತ್ತೆ ಬ್ಯಾಟರಿ ಚಾರ್ಜ್ ಮಾಡಿಕೊಳ್ಳಲು ಮನೆಗೆ ಬರಬೇಕು.

ಗುಡ್ಡಗಾಡು ಪ್ರದೇಶಗಳಲ್ಲಿ ಮೊಬೈಲ್ ಟವರ್ ದೂರ ಇರುವ ಹೊಲಗಳಲ್ಲಿ ನೆಟ್‌ವರ್ಕ್ ಸಿಗುವುದಿಲ್ಲ. ಇದರಿಂದ ಬೆಳೆ ಪೋಟೊ ತೆಗೆದುಕೊಂಡು, ಮಾಹಿತಿ ಕಲೆ ಹಾಕಿಕೊಂಡು ಬಂದು ನೆಟ್‌ವರ್ಕ್ ಸಿಗುವ ಜಾಗದಲ್ಲಿ ಅಪ್‌ಲೋಡ್ ಮಾಡಬೇಕಾದ ಸ್ಥಿತಿ ಇದೆ. ಕೆಲವೊಂದು ಕಡೆ ರೈತರು ತಮ್ಮ ಆಧಾರ್ ಸಂಖ್ಯೆಯನ್ನು ನೀಡುವುದು ಕೂಡ ತಡವಾಗುತ್ತದೆ. ಇದರಿಂದ ನಿಗದಿತ ಸಮಯಕ್ಕೆ ಸರಿಯಾಗಿ ಸಮೀಕ್ಷಾ ಕಾರ್ಯ ಮುಗಿಸುವುದು ಸಾಧ್ಯವಾಗುವುದಿಲ್ಲ’ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಕಾಡು ಪ್ರಾಣಿಗಳ ಹೆದರಿಕೆ: ತಾಲ್ಲೂಕಿನಲ್ಲಿ ಅನೇಕ ಕಡೆ ಕರಡಿ, ಕಾಡು ಹಂದಿ, ಚಿರತೆಯಂತಹ ಕಾಡು ಪ್ರಾಣಿಗಳು ಬೆಳೆಗಳಲ್ಲಿ ಸೇರಿಕೊಂಡಿರುತ್ತವೆ. ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಅನೇಕ ಕಡೆ ಹೊಲಗಳಲ್ಲಿ ಕರಡಿಗಳು ಕಂಡು ಬಂದಿವೆ. ಜೋಳ, ಸಜ್ಜೆ, ಮೆಕ್ಕೆ ಜೋಳದಂತಹ ಬೆಳೆಗಳಲ್ಲಿ ಒಳ ಹೊಕ್ಕು ಪೋಟೊ ತೆಗೆಯಬೇಕಾಗುತ್ತದೆ. ಈ ಸಂದರ್ಭದಲ್ಲಿ ದಾಳಿ ಮಾಡುವ ಸಂಭವವಿದೆ. ಅದ್ದರಿಂದ ನಾಲ್ಕೈದು ಜನ ರೈತರನ್ನು ಜೊತೆಗೆ ಕರೆದುಕೊಂಡೇ ಹೋಗಬೇಕು ಎನ್ನುತ್ತಾರೆ’ ಕೂಡ್ಲಿಗಿ ಗ್ರಾಮ ಲೆಕ್ಕಾಧಿಕಾರಿ ನವೀನ್ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.