ADVERTISEMENT

ಭವಿಷ್ಯ ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವದ್ದು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 8:25 IST
Last Updated 27 ಸೆಪ್ಟೆಂಬರ್ 2011, 8:25 IST

ಬಳ್ಳಾರಿ: ಪ್ರತಿಯೊಬ್ಬರ ಜೀವನ ಉಜ್ವಲವಾಗುವಲ್ಲಿ ಗುರು ಮಹತ್ವದ ಪಾತ್ರ ವಹಿಸುತ್ತಾನೆ ಎಂದು ಉಪನ್ಯಾಸಕ ಡಾ.ಸತೀಶ ಹಿರೇಮಠ ಅಭಿಪ್ರಾಯಪಟ್ಟರು.

`ಸ್ವರಸ್ಪಂದನ~ ಸಂಗೀತ ಸಂಸ್ಥೆ ನಗರದಲ್ಲಿ ಭಾನುವಾರ ಲಿಂ. ಹಕ್ಕಂಡಿ ವಾಮದೇವ ಗವಾಯಿ ಸ್ಮರಣಾರ್ಥ ಏರ್ಪಡಿಸಿದ್ದ `ಗಾನ ಶ್ರದ್ಧಾಂಜಲಿ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ಹರ ಮುನಿದರೆ ಗುರು ಕಾಯುವ~, `ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ~ ಎಂದು ದಾಸಶ್ರೇಷ್ಠರೇ ಹೇಳಿರುವುದು ಪ್ರತಿಯೊಬ್ಬರ ಭವಿಷ್ಯ ರೂಪಿಸುವಲ್ಲಿನ ಗುರುವಿನ ಪಾತ್ರದಕುರಿತು ಸೂಚಿಸುತ್ತದೆ. ಯುವಪೀಳಿಗೆಯು ಗುರುವಿಗೆ ಗೌರವ ನೀಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಆಲೋಚಿಸಬೇಕು ಎಂದು  ಸಲಹೆ ನೀಡಿದರು.

ಶಿಷ್ಯ ಬಳಗವನ್ನು ಒಂದೆಡೆ ಸೇರಿಸಿ, ಗುರುವನ್ನು ಸ್ಮರಿಸುವ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅಭಿನಂದನೀಯ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿರುದ್ರಪ್ಪ ತಿಳಿಸಿದರು.

ಹಕ್ಕಂಡಿ ವಾಮದೇವ ಗವಾಯಿಯವರು ಸರಳ, ಸಜ್ಜನಿಕೆಯ ಸ್ವಭಾವದಿಂದ ಶಿಷ್ಯರಿಗೆ ಅತ್ಯಂತ ಪ್ರೀತಿಪಾತ್ರರಾಗಿದ್ದರು. ಅವಕಾಶಗಳ ವಿಷಯದಲ್ಲೂ ಅವರು ಶಿಷ್ಯ ಬಳಗಕ್ಕೆ ಪ್ರೋತ್ಸಾಹ ನೀಡಿದ್ದರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೊಟ್ರಪ್ಪ ಹೇಳಿದರು.

ಬಸವರಾಜ ಅಮಾತಿ ಕಾರ್ಯಕ್ರಮ ನಿರೂಪಿಸಿದರು. ಆಲಂ ಭಾಷಾ ಸ್ವಾಗತಿಸಿದರು. ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಕಲಾವಿದರಾದ ವಸಂತಕುಮಾರ್, ಹನುಮಯ್ಯ, ದೊಡ್ಡಬಸವ ಗವಾಯಿ, ಸತ್ಯನಾರಾಯಣ, ಯಲ್ಲನಗೌಡ ಶಂಕರಬಂಡೆ, ಹರ್ಷ ಉಪ್ಪಾರ, ರಜನೀಶ ಕುಲಕರ್ಣಿ ಅವರಿಂದ ಗಾಯನ ನಡೆಯಿತು.

ಉಮೇಶ ಸಂಡೂರ, ಸುಧಾಕರ, ವಿರೂಪಾಕ್ಷಪ್ಪ, ರೇವಣ ಸಿದ್ಧಾಚಾರ್ಯ ತಬಲಾ ಸಾಥ್ ನೀಡಿದರು. ಪೋಲಕ್ಸ್ ಹನುಮಂತಪ್ಪ ಹಾರ್ಮೊನಿಯಂ ಸಾಥ್ ನೀಡಿದರು. ಮಂಜುನಾಥ ಗೋವಿಂದವಾಡ, ಕೆ.ಎಂ. ಸಿದ್ದಲಿಂಗಯ್ಯ, ನಿರ್ಮಲಾ ಚಿಕ್ಕಮಠ, ಪ್ರತಿಭಾ ಕೊಟ್ರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.